ನಮ್ಮ ಸಂಸ್ಕೃತಿಯ ಭಾಗವಾದ ಅಯುರ್ವೇದವು ಸಸ್ಯ ಹಾಗೂ ಗಿಡಮೂಲಿಕೆಗಳಿಂದ ಔಷಧಿ ಕೊಡುವ ಪದ್ಧತಿ ಪರಂಪರಾಗತವಾಗಿ ಹಿರಿಯರು ಮಾಡುತ್ತಿದ್ದಾರೆ. ವೇದಗಳ ಕಾಲದಲ್ಲಿಯೂ ಸಹ ಸಾವಿರಾರು ಸಸ್ಯಗಳ ಮಹತ್ವ ಕುರಿತು ಉಲ್ಲೇಖವಿದೆ.
ಧಾರವಾಡ:
ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ದೇವರೆಂದು ನಂಬಲಾಗಿದೆ. ಮನುಕುಲದ ಒಳತಿಗಾಗಿ ದೇವರು ಕೊಟ್ಟ ಅಮೂಲ್ಯ ಕೊಡುಗೆ ಎಂದರೆ ಸಸ್ಯ ಸಂಪತ್ತು. ಸಸ್ಯಗಳಲ್ಲಿ ದೇವಾನುದೇವತೆಗಳು ನೆಲೆಸಿದ್ದಾರೆಂದು ನಂಬಲಾಗಿದೆ ಎಂದು ಪ್ರಾಚಾರ್ಯ ಡಾ. ಚರಂತಯ್ಯ ಹಿರೇಮಠ ಹೇಳಿದರು.ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ಹುಬ್ಬಳ್ಳಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪ್ರಕಾಶನವು ಡಾ. ಆರ್.ಎಫ್. ಇಂಚಲ ಅವರು ಬರೆದ `ಸಸ್ಯ ಸಂಕುಲದಲ್ಲಿ ದೇವರು’ ಕೃತಿ ಲೋಕಾರ್ಪಣೆ ಮಾಡಿದ ಅವರು, ನಮ್ಮ ಸಂಸ್ಕೃತಿಯ ಭಾಗವಾದ ಅಯುರ್ವೇದವು ಸಸ್ಯ ಹಾಗೂ ಗಿಡಮೂಲಿಕೆಗಳಿಂದ ಔಷಧಿ ಕೊಡುವ ಪದ್ಧತಿ ಪರಂಪರಾಗತವಾಗಿ ಹಿರಿಯರು ಮಾಡುತ್ತಿದ್ದಾರೆ. ವೇದಗಳ ಕಾಲದಲ್ಲಿಯೂ ಸಹ ಸಾವಿರಾರು ಸಸ್ಯಗಳ ಮಹತ್ವ ಕುರಿತು ಉಲ್ಲೇಖವಿದೆ. ಜಗತ್ತಿನ ಸಕಲ ಸಸ್ಯರಾಶಿಗಳಲ್ಲಿಯೂ ಔಷಧಿಯ ಗುಣವಿದೆ. ಅಶ್ವಥ ಮರ, ತುಳಸಿ, ನೆಲ್ಲಿ, ದರ್ಬೆ, ಉತ್ತರಾಣಿ, ಧೂಪ ಮತ್ತು ಬಿಲ್ವಪತ್ರಿ ಮುಂತಾದ ಸಸ್ಯಗಳು ಔಷಧೀಯ ಗುಣ ಹೊಂದಿರುವುದಲ್ಲದೇ ಈ ಸಸ್ಯಗಳಲ್ಲಿ ದೇವರ ನೆಲೆಯಾಗಿವೆ ಎಂಬ ಭಾವನೆ ನಮ್ಮದು ಎಂದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಹಾಗೂ ಡಾ. ಡಿ.ಎಂ. ಹಿರೇಮಠ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಸಸ್ಯ ಸಂಕುಲದಲ್ಲಿ ದೇವರು ಎಂಬ ಕೃತಿ ಮನೋಜ್ಞವಾಗಿದೆ. ಈ ಕೃತಿ ಪ್ರತಿಯೊಬ್ಬರು ಓದಲೇಬೇಕಾದಂತಹದ್ದು. ಜನಸಾಮಾನ್ಯರಿಗೂ ಸಹ ಅರ್ಥವಾಗುವಂತೆ ಡಾ. ಇಂಚಲ ಈ ಕೃತಿ ರಚಿಸುವಲ್ಲಿ ಹೆಚ್ಚು ಶ್ರಮ ವಹಿಸಿದ್ದಾರೆ ಎಂದರು.