ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬದ ಸವಿನೆನಪಿಗೆ ಪ್ರತಿ ವರ್ಷ ಒಂದೊಂದು ಗಿಡ ನೆಟ್ಟು ಪೋಷಿಸುವ ಮೂಲಕ ಪರಿಸರ-ಪ್ರಕೃತಿಗೆ ಪೂರಕವಾಗಿ ನಡೆಯಬೇಕಾದ ಅಗತ್ಯ ಇದೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.

ಸಖರಾಯಪಟ್ಟಣದಲ್ಲಿ ಐಸಿರಿ ಫೌಂಡೇಶನ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಐಸಿರಿ ಫೌಂಡೇಶನ್ ನಡೆಸುತ್ತಿರುವ ಸಾಮಾಜಿಕ ಕಾರ್ಯಗಳಾದ ಪ್ರತಿ ಭಾನುವಾರ ಹಸಿರು ಭಾನುವಾರ, ರೈತ ದಿನಾಚರಣೆ ಪ್ರಶಸ್ತಿ ವಿತರಣೆ, ಗಿಡನೆಡುವ ಕಾರ್ಯಕ್ರಮ ಆಯೋಜಿಸುತ್ತಿರುವ ಬಗ್ಗೆ ಫೌಂಡೇಶನ್ ಅಧ್ಯಕ್ಷರನ್ನು ಶ್ಲಾಘಿಸಿದರು.

ಭಾರತದ ಕೋಗಿಲೆ ಬಿರುದು ಪಡೆದ ಸರೋಜಿನಿ ನಾಯ್ಡು ಹೊರದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಭಾರತೀಯ ಸಂಸ್ಕೃತಿ, ಪ್ರಕೃತಿ, ಪ್ರೀತಿ ಮತ್ತು ದೇಶಭಕ್ತಿ ಇವುಗಳಿಂದ ಪ್ರಭಾವಿತರಾಗಿ ಕವನ ಸಂಕಲನ ರಚಿಸಿ ಮನ್ನಣೆ ಪಡೆದಿದ್ದರು ಎಂದರು.

ಸರೋಜಿನ ನಾಯ್ಡು ಅವರ ವಿಚಾರಧಾರೆ, ಆದರ್ಶಗಳು ಇಂದಿನ ಸಮಾಜಕ್ಕೂ ಪ್ರಸ್ತುತ. ಯುವಜನಾಂಗ ಸ್ವಾತಂತ್ರ್ಯ, ಸಾಹಿತ್ಯ ಹೋರಾಟಕ್ಕೆ ಮಹತ್ವ ನೀಡಿದ್ದವರ ಹೋರಾಟದ ಮನೋಭಾವ ಅಳವಡಿಸಿಕೊಂಡು ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದರು.


ಕನ್ನಡ ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಚೈತ್ರ ಎಸ್ ಗೌಡ ಮಾತನಾಡಿ, ಸ್ತ್ರೀ ಪುರುಷರು ಪರಸ್ಪರ ಪೂರಕವಾಗಿ ಬದುಕಬೇಕು. ಐಸಿರಿ ಫೌಂಡೇಶನ್ ತನ್ನ ಸಮಾಜಮುಖಿ ಕಾರ್ಯಕ್ರಮದ ಮೂಲಕ ಜನಮನ್ನಣೆ ಗಳಿಸುತ್ತಿದೆ ಎಂದು ಶ್ಲಾಘಿಸಿದರು.

ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ಮಾತನಾಡಿ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ವೈದ್ಯಕೀಯ ಮುಂತಾದ ಕಾರ್ಯಕ್ರಮಗಳನ್ನು ಐಸಿರಿ ನಡೆಸುತ್ತಿದ್ದು, ಇಚ್ಛಾಶಕ್ತಿ ನಿರ್ಮಾಣ ಎಂಬ ಹೊಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಐಸಿರಿ ಫೌಂಡೇಶನ್‌ನ ಯುವಸಂಕಲ್ಪ ಕಚೇರಿಯನ್ನು ಕಲ್ಯಾಣ ನಗರದಲ್ಲಿ ಪ್ರಾರಂಭಿಸಲಾಗಿದ್ದು, ಯುವಕರಲ್ಲಿ ನಾಯಕತ್ವದ ಗುಣ, ಸಾರ್ವಜನಿಕ ಸಂಪರ್ಕ, ಸಾಮಾಜಿಕ ಸೇವೆ, ವಿಜ್ಞಾನ, ಉದ್ಯಮಶೀಲತೆ, ಸಾಹಿತ್ಯ, ಕಲೆ, ನೃತ್ಯ, ಸಂಗೀತ, ಕ್ರೀಡಾಕೂಟ ಸಂಯುಕ್ತವಾಗಿ ಪೂರಕ ವಾತಾವರಣ ನಿರ್ಮಾಣದ ಗುರಿ ಹೊಂದಿದೆ ಎಂದು ತಿಳಿಸಿದರು.

ಪೆಹಲ್ಗಾಂ ದಾಳಿ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ಯುವಕರಲ್ಲಿ ಜಾಗೃತಿ ಮೂಡಿಸಲು ಫೆ.14 ರಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಯೋಧ ನಮನ ಆಯೋಜಿಸಲಾಗಿದೆ ಎಂದರು.

ಈ ವೇಳೆ ಕಾಲೇಜಿನ ಪ್ರಾಂಶುಪಾಲೆ ಕಲಾವತಿ, ನವೀನ್ ಎತ್ತಿನಮನೆ, ರಾಜಪ್ಪ ಮೊದಲಾದವರಿದ್ದರು.