ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪರಿಸರ ಸಂರಕ್ಷಣೆಗೆ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಅವಶ್ಯಕವಾಗಿದೆ ಎಂದು ಪ್ರಾಂಶುಪಾಲ ಎಂ.ಆರ್.ಸಹದೇವು ತಿಳಿಸಿದರು.ಪಟ್ಟಣದ ಕೆಪಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಪ್ಲಾಸ್ಟಿಕ್ ದೊಡ್ಡ ಪಿಡುಗಾಗಿದೆ. ಭೂಮಿಯಲ್ಲಿ ಕರಗದ ವಿಷಕಾರಿ ಹಾನಿಕಾರಕ ವಸ್ತುವಾಗಿ ಗೊತ್ತಿಲ್ಲದೆ ನಮ್ಮದೇಹ ಸೇರಿ ಅಂತರ್ಜಲ ವಿಷವಾಗುತ್ತಿದೆ ಎಂದು ಎಚ್ಚರಿಸಿದರು.
ಆಹಾರ ಪದಾರ್ಥ, ಇಡ್ಲಿ, ಸಾಂಬಾರ್, ಕಾಫಿ ಮತ್ತಿತರ ವಸ್ತುಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ಬಳಸುವುದರಿಂದ ಬಲುಬೇಗ ಅನಾರೋಗ್ಯಕ್ಕೆ ತುತ್ತಾಗಬೇಕಾಗಲಿದೆ ಎಂದರು.ನಮಗೆ ಬೇಕಿರುವ ಶುದ್ಧ ಗಾಳಿ ಮರಗಿಡಗಳಿಂದ ಎಂಬ ಅರಿವಿರಲಿ. ಹೆಚ್ಚು ಮರಗಿಡಗಳನ್ನು ಬೆಳೆಸುವುದರಿಂದ ಭೂಮಿ ಸವಕಳಿ, ಬೆಟ್ಟಗುಡ್ಡ ಕುಸಿತ, ತಾಪಮಾನ ವೈಪರೀತ್ಯ ತಡೆಯಬಹುದು. ಭೂಮಿ ಫಲವತ್ತತೆ, ರಾಸಾಯನಿಕ ಮುಕ್ತ ಬೆಳೆ ಸಿಗಲಿದೆ. ಮನೆಗೊಂದು ಮರ ಬೆಳೆಸುವ ಪರಿಕಲ್ಪನೆಯನ್ನು ಮಕ್ಕಳು ರೂಢಿಸಿಕೊಳ್ಳಲು ಪೋಷಕರು ಜಾಗೃತಿ ಮೂಡಿಸಿ ಎಂದು ನುಡಿದರು.
ಎನ್ಎಸ್ಎಸ್ ಯೋಜನಾಧಿಕಾರಿ ಜಿ.ಎನ್.ಕುಮಾರಸ್ವಾಮಿ ಮಾತನಾಡಿ, ಈಚೆಗೆ ಕೇರಳದಲ್ಲಿ ನಡೆದ ಭೀಕರ ಗುಡ್ಡ ಕುಸಿತದಿಂದ ಇಡೀ ಊರೇ ಸರ್ವನಾಶವಾದರೆ ನಮ್ಮ ರಾಜ್ಯದಲ್ಲಿ ರಸ್ತೆ ಅಗಲೀಕರಣ ಮತ್ತಿತರ ನೆಪದಲ್ಲಿ ಗುಡ್ಡ ಕಡಿದು ಸಾಕಷ್ಟು ಅವಘಡಗಳು ಸಂಭವಿಸಿವೆ ಎಂದರು.ಮರಗಿಡಗಳು ಇದ್ದರೆ ಇಂತಹ ಪ್ರಾಕೃತಿಕ ವಿಕೋಪ ತಡೆಯಬಹುದು ಎಂಬುದನ್ನು ಯುವ ಪೀಳಿಗೆ ಅರಿಯಬೇಕು. ಮರಗಿಡಗಳು ಪರಿಸರ ಸಮತೋಲನ, ಪ್ರಾಣಿ ಪಕ್ಷಿಗಳಿಗೆ ಆಸರೆ, ಆಹಾರ ನೀಡಲಿವೆ ಎಂಬುದನ್ನುಅರಿತು ಪರಿಸರ ಉಳಿಸಿ ಜೀವಸಂಕುಲ ಕಾಪಾಡಬೇಕು ಎಂದರು.
ಕಾಲೇಜು ಆವರಣದಲ್ಲಿ ಗಿಡ ನೆಟ್ಟು ನೀರೆರೆದು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಮುಂದಾಗುವುದಾಗಿ ಪ್ರತಿಜ್ಞೆ ಮಾಡಿದರು.ಎಸ್.ದೊರೆಸ್ವಾಮಿ, ಎನ್. ರವೀಂದ್ರ, ಎ.ಎಂ.ಮಂಜುನಾಥ್, ಎಸ್.ಡಿ. ಹರೀಶ್, ಎಂ.ವಿನಾಯಕ, ಜಿ. ರಮೇಶ್, ಎನ್.ಎ. ನಾಗೇಶ್ ಇದ್ದರು.