ಸಾರಾಂಶ
ನೀರಬೂದಿಹಾಳ ಗ್ರಾಮದ ಶ್ರೀಮಂತ ಕೆ.ಟಿ. ದೇಸಾಯಿ ಬೈಲು ರಂಗಮಂದಿರದಲ್ಲಿ ಬಂಜೆ ತೊಟ್ಟಿಲು ನಾಟಕ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಉದ್ಘಾಟಿಸಿದರು.
ಕನ್ನಡಪ್ರಭವಾರ್ತೆ ಕೆರೂರ
ನಾಟಕಗಳು ಮನರಂಜನೆ ಜೊತೆಗೆ ಸಮಾಜದ ಅಂಕು-ಡೊಂಕು ತಿದ್ದುವ ರೂಪಕಗಳೆಂದು ಬಾಗಲಕೋಟೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಹೇಳಿದರು.ಸೋಮವಾರ ಕೆರೂರ ಸಮೀಪದ ನೀರಬೂದಿಹಾಳ ಗ್ರಾಮದ ಶ್ರೀಮಂತ ಕೆ.ಟಿ. ದೇಸಾಯಿ ಬೈಲು ರಂಗಮಂದಿರದಲ್ಲಿ ಆಯೋಜಿಸಿದ್ದ ಬಂಜೆ ತೊಟ್ಟಿಲು ನಾಟಕ ಉದ್ಘಾಟಿಸಿ ಮಾತನಾಡಿದರು. ನಾಟಕಗಳು ನಮ್ಮ ನಾಡಿನ ಸಂಸ್ಕೃತಿ ಹಿರಿಮೆ. ಹಿರಿಯರು ಬಾಳಿ ಬದುಕಿದ ನಡೆಯ ನಿಘಂಟಾಗಿದ್ದು ಇಂದಿನ ಯುವಕರಿಗೆ ಮಾರ್ಗದರ್ಶನ ನೀಡುತ್ತವೆಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಸದಸ್ಯ ಶ್ರೀಮಂತ ಎ.ಕೆ. ದೇಸಾಯಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ನಾಟಕಗಳು ಕಣ್ಮರೆಯಾಗುತ್ತಿದ್ದು ವಿಷಾದನೀಯ. ಸರ್ಕಾರ ನಾಟಕಗಳಿಗೆ ಪ್ರೋತ್ಸಾಹಿಸುವಂತೆ ನಾವೆಲ್ಲರೂ ನಾಟ್ಯಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹಿಸುವುದು ಇಂದಿನ ಅಗತ್ಯವೆಂದರು. ಲೋಕಾಪುರದ ಶ್ರೀ ಅನ್ನಪೂರ್ಣೇಶ್ವರಿ ವೀರಗಾಸೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ನಾಟಕ ಪ್ರದರ್ಶನದ ಮುಖ್ಯ ಅತಿಥಿಗಳಾಗಿ ಮಲ್ಲಯ್ಯ ಸಂಬಾಳದ, ಕಲಾವಿದರಾದ ಬಸಲಿಂಗಗೌಡ ಉಮತಾರ, ಮಹಾರುದ್ರಯ್ಯ ಮೋತಿ, ಚನ್ನಬಸಯ್ಯ ಚಿಕ್ಕೂರಮಠ, ಈರಯ್ಯ ಮೋತಿ, ಹೊಳಬಸಯ್ಯ ವ್ಯಾಪಾರಿ, ಮಲ್ಲಯ್ಯ ಮೋತಿ, ಗುರಯ್ಯ ವ್ಯಾಪಾರಿ, ಬಸಯ್ಯ ಜಲಗೇರಿ, ಸಂಗಯ್ಯ ಉಮಚಗಿಮಠ ಭಾಗವಹಿಸಿದ್ದರು.ಕುಮಾರ ಚೆನ್ನಯ್ಯನವರ ನಿರೂಪಿಸಿದರು.