ಹುಬ್ಬಳ್ಳಿ:
ಎಸ್ಐಆರ್ ಮೂಲಕ ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳಲ್ಲೂ ಈ ಸಾಧ್ಯತೆ ನಡೆಯುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಶಂಕೆ ವ್ಯಕ್ತಪಡಿಸಿದ್ದಾರೆ.ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ ಶೇ 59.67ರಷ್ಟು ಪ್ರಗತಿಯಾಗಿದ್ದರೆ, ಹು-ಧಾ ಸೆಂಟ್ರಲ್, ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳಲ್ಲಿ ಶೇ. 43ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿವರಿಸಿದರು.ನಮೂನೆ ವಿತರಣೆ ಎಲ್ಲೆಡೆ ಶೇ.100ರಷ್ಟು ಆಗಿದೆ. ಆದರೆ, ಡಿಜಿಟೈಲೇಷನ್ನಲ್ಲಿ ಶೇ.59.67ರಷ್ಟು ಪ್ರಗತಿಯಾಗಿದೆ. ನವಲಗುಂದದಲ್ಲಿ ಶೇ. 87.09, ಕುಂದಗೋಳ ಶೇ.71.14, ಧಾರವಾಡ ಶೇ.70.71, ಹು-ಧಾ ಪೂರ್ವ ಶೇ.51.33, ಹು-ಧಾ ಸೆಂಟ್ರಲ್ ಶೇ.43.95, ಹು-ಧಾ ಪಶ್ಚಿಮ ಶೇ.46.09 ಮತ್ತು ಕಲಘಟಗಿ ಕ್ಷೇತ್ರದಲ್ಲಿ ಶೇ. 68.26 ರಷ್ಟುಪ್ರಗತಿ ಆಗಿದೆ ಎಂದರು.
ಬಿಹಾರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಗೆಲುವಿಗೆ ಬೇಕಾದ ಹಾಗೆ ಕಾಂಗ್ರೆಸ್ನ ಸಾಂಪ್ರದಾಯಿಕ ಮತದಾರರನ್ನು ಮತಪಟ್ಟಿಯಿಂದ ಹೊರಗೆ ಇಟ್ಟಿತ್ತು. ಇಲ್ಲೂ ಆ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕು. ಹಾಗಾಗಿ ಕಾಂಗ್ರೆಸ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅರ್ಹ ಮತದಾರರನ್ನು ಹೊರಹೋಗದಂತೆ ತಡೆಯಲು ಎಲ್ಲ ಪ್ರಯತ್ನ ಮಾಡುತ್ತಿದೆ ಎಂದರು.ಬಿಎಲ್ಒ ಅಸಹಕಾರ:
ಜಿಲ್ಲೆಯ ಕೆಲವೆಡೆ ಬಿಎಲ್ಒಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಅಂತಹ ಕಡೆ ನಮ್ಮ ಬಿಎಲ್ಎ1, 2ಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಸರಿಯಾಗಿ ನಮೂದಿಸಿರುವುದನ್ನು ಮತದಾರರು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆ ಪ್ರಯೋಜನ ಪಡೆಯಲು ಕಷ್ಟವಾಗುತ್ತದೆ ಎಂದು ಹೇಳಿದರು.
ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಹು-ಧಾ ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಮಾಜಿ ಶಾಸಕರಾದ ಎಂ.ಎಸ್. ಅಕ್ಕಿ, ಕುಸುಮಾವತಿ ಶಿವಳ್ಳಿ, ಮುಖಂಡರಾದ ದೀಪಕ್ ಚಿಂಚೋರೆ, ಮೋಹನ್ ಹಿರೇಮನಿ, ಸೈಯದ್ ಅಹಮದ್, ಸದಾನಂದ ಡಂಗನವರ ಇತರರಿದ್ದರು.
-------ಫೋಟೋ: ಅಂಜಲಿ ನಿಂಬಾಳ್ಕರ್