ಹುಬ್ಬಳ್ಳಿ:

ಎಸ್‌ಐಆರ್‌ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌, ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳಲ್ಲೂ ಈ ಸಾಧ್ಯತೆ ನಡೆಯುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್‌ ಶಂಕೆ ವ್ಯಕ್ತಪಡಿಸಿದ್ದಾರೆ.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ ಶೇ 59.67ರಷ್ಟು ಪ್ರಗತಿಯಾಗಿದ್ದರೆ, ಹು-ಧಾ ಸೆಂಟ್ರಲ್‌, ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳಲ್ಲಿ ಶೇ. 43ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿವರಿಸಿದರು.ನಮೂನೆ ವಿತರಣೆ ಎಲ್ಲೆಡೆ ಶೇ.100ರಷ್ಟು ಆಗಿದೆ. ಆದರೆ, ಡಿಜಿಟೈಲೇಷನ್‌ನಲ್ಲಿ ಶೇ.59.67ರಷ್ಟು ಪ್ರಗತಿಯಾಗಿದೆ. ನವಲಗುಂದದಲ್ಲಿ ಶೇ. 87.09, ಕುಂದಗೋಳ ಶೇ.71.14, ಧಾರವಾಡ­ ಶೇ.70.71, ಹು-­ಧಾ ಪೂರ್ವ ಶೇ.51.33, ಹು-­ಧಾ ಸೆಂಟ್ರಲ್‌ ಶೇ.43.95, ಹು­-ಧಾ ಪಶ್ಚಿಮ ಶೇ.46.09 ಮತ್ತು ಕಲಘಟಗಿ ಕ್ಷೇತ್ರದಲ್ಲಿ ಶೇ. 68.26 ರಷ್ಟುಪ್ರಗತಿ ಆಗಿದೆ ಎಂದರು.

ಬಿಹಾರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಗೆಲುವಿಗೆ ಬೇಕಾದ ಹಾಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರನ್ನು ಮತಪಟ್ಟಿಯಿಂದ ಹೊರಗೆ ಇಟ್ಟಿತ್ತು. ಇಲ್ಲೂ ಆ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕು. ಹಾಗಾಗಿ ಕಾಂಗ್ರೆಸ್‌ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅರ್ಹ ಮತದಾರರನ್ನು ಹೊರಹೋಗದಂತೆ ತಡೆಯಲು ಎಲ್ಲ ಪ್ರಯತ್ನ ಮಾಡುತ್ತಿದೆ ಎಂದರು.

ಬಿಎಲ್‌ಒ ಅಸಹಕಾರ:


ಜಿಲ್ಲೆಯ ಕೆಲವೆಡೆ ಬಿಎಲ್‌ಒಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಅಂತಹ ಕಡೆ ನಮ್ಮ ಬಿಎಲ್‌ಎ­1, 2ಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಸರಿಯಾಗಿ ನಮೂದಿಸಿರುವುದನ್ನು ಮತದಾರರು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆ ಪ್ರಯೋಜನ ಪಡೆಯಲು ಕಷ್ಟವಾಗುತ್ತದೆ ಎಂದು ಹೇಳಿದರು.

ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಹು-ಧಾ ಮಹಾನಗರ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಮಾಜಿ ಶಾಸಕರಾದ ಎಂ.ಎಸ್‌. ಅಕ್ಕಿ, ಕುಸುಮಾವತಿ ಶಿವಳ್ಳಿ, ಮುಖಂಡರಾದ ದೀಪಕ್‌ ಚಿಂಚೋರೆ, ಮೋಹನ್‌ ಹಿರೇಮನಿ, ಸೈಯದ್‌ ಅಹಮದ್‌, ಸದಾನಂದ ಡಂಗನವರ ಇತರರಿದ್ದರು.

-------

ಫೋಟೋ: ಅಂಜಲಿ ನಿಂಬಾಳ್ಕರ್‌