ಪಿಎಂ ಕಿಸಾನ್ ಸಮ್ಮಾನ್ ರೈತರ ಸಂಜೀವಿನಿ: ಪ್ರಹ್ಲಾದ ಜೋಶಿ

| Published : Oct 07 2024, 01:43 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ರೈತರ ಸಂಜೀವಿನಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ರೈತರ ಸಂಜೀವಿನಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ 18ನೇ ಕಂತಿನ ನಿಧಿ ರೈತರ ಖಾತೆಗೆ ನೇರ ವರ್ಗಾವಣೆಯಾದ ಬಳಿಕ ಪ್ರತಿಕ್ರಿಯಿಸಿರುವ ಸಚಿವರು, ಈ ಯೋಜನೆ ರೈತರಿಗೆ ಉತ್ತೇಜನ ನೀಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ ₹6000 ಧನಸಹಾಯ ನೀಡುವ ಮೂಲಕ ದೇಶದ 11 ಕೋಟಿ ರೈತರಿಗೆ ಸಂಜೀವಿನಿಯಾಗಿದೆ.

ಈ ಯೋಜನೆಯಿಂದಾಗಿ ದೇಶದಲ್ಲಿ ಕೃಷಿಗೆ ಅಪೂರ್ವ ಉತ್ತೇಜನ ದೊರಕಿದೆ. ರೈತರ ಸಾಲವನ್ನು ಕಡಿಮೆ ಮಾಡಿದೆ. ಅಲ್ಲದೇ, ಗ್ರಾಮೀಣ ಪ್ರದೇಶದ ಸಮುದಾಯಗಳನ್ನು ಸಶಕ್ತರನ್ನಾಗಿಸಿದೆ. ಜತೆಗೆ ಭಾರತದ ಕೃಷಿಕರನ್ನು ಮಾತ್ರವಲ್ಲ ದೇಶವನ್ನೇ ಸ್ವಾವಲಂಬಿ ಮಾಡುವತ್ತ ಒಂದು ಮಹತ್ತರ ಹೆಜ್ಜೆಯಾಗಿದೆ.

ಈ ಯೋಜನೆಯಡಿ 18ನೇ ಕಂತಿನಲ್ಲಿ ಒಟ್ಟು 9.4 ಕೋಟಿ ರೈತರಿಗೆ ₹20 ಸಾವಿರ ಕೋಟಿ ನೇರ ವರ್ಗಾವಣೆ ಮಾಡಲಾಗಿದೆ. ಕರ್ನಾಟಕದ 47.12 ಲಕ್ಷ ರೈತರು ₹942 ಕೋಟಿ ಪಡೆದಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ 1.15 ಲಕ್ಷ ರೈತರು ಇದರ ಪ್ರಯೋಜನ ಪಡೆದಿದ್ದಾರೆ. ₹23.09 ಕೋಟಿ ಧಾರವಾಡ ರೈತರ ಖಾತೆಗೆ ಜಮೆಯಾಗಿದ್ದು, ದಸರಾ ಹಬ್ಬದ ವೇಳೆ ರೈತರಲ್ಲಿ ಖುಷಿ ತಂದಿದೆ ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.