ಹರಪನಹಳ್ಳಿ: ಮರಿಯಮ್ಮನಹಳ್ಳಿ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಕಾಶ ಕೋರಿ ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ಭೇಟಿ ಮಾಡಲಾಗವುದು ಸಂಸದೆ ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಮೂರು ಬಾರಿ ಭೇಟಿ ಮಾಡಿ ಪ್ರಸ್ತಾಪ ಮಾಡಿದ್ದೇನೆ. ಸಂಸತ್ತನಲ್ಲಿ ಈ ಬಗ್ಗೆ ಚರ್ಚಿಸಿದ್ದೇನೆ. ಇದಕ್ಕೆ ಸ್ಪಂದನೆ ಸಿಗದ ಕಾರಣ ಅವಕಾಶಕ್ಕಾಗಿ ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.ವಿಜಯನಗರ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಮೂಲಕ ಹಾದು ಹೋಗುವ ರಸ್ತೆ ಇದಾಗಿದೆ. ಇಲ್ಲಿ ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿವೆ. ರಸ್ತೆಗಳು ಕಿರಿದಾಗಿದ್ದು, ಅಗಲೀಕರಣವಾಗಬೇಕಿದೆ. ಹಾಗಾಗಿ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರು ಕೈಬಿಟ್ಟು ವಿಬಿಜಿ ರಾಮ್ ಯೋಜನೆಯನ್ನು ಜಾರಿಗೊಳಿಸಿರುವುದು ಇದೊಂದು ಏಕ ಪಕ್ಷೀಯ ನಿರ್ಧಾರವಾಗಿದೆ. ಸಂಸತ್ನಲ್ಲಿ ಯಾವುದೇ ಚರ್ಚೆ ಇಲ್ಲದೇ ವಿರೋಧ ಪಕ್ಷದವರ ಬಾಯಿ ಮುಚ್ಚಿಸಿ, ಒಪ್ಪಿಗೆ ಇಲ್ಲದೇ ಕಾಯ್ದೆ ಜಾರಿಗೆ ತಂದಿದ್ದಾರೆ. ನರೇಗಾ ಯೋಜನೆ ಕೂಡಲೇ ಮರು ಜಾರಿಯಾಗಬೇಕು ಎಂದು ಆಗ್ರಹಿಸಿದ ಅವರು, ಪಂಜಾಬ್ ರೈತರು ಹೋರಾಟ ಮಾಡಿದ ಮಾದರಿಯಲ್ಲಿ ಉದ್ಯೋಗ ಖಾತರಿ ಕೂಲಿಕಾರರು ಹೋರಾಟಕ್ಕೆ ಮುಂದಾಗಬೇಕು ಎಂದರು.ಹರಪನಹಳ್ಳಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಶೈಕ್ಷಣಿಕವಾಗಿ ಮುಂದುವರೆದಿದೆ. ಇಲ್ಲಿ ಬಡವರು ಕಾರ್ಮಿಕರು ಹೆಚ್ಚು ಇದ್ದಾರೆ. ಇಲ್ಲಿ ವೈದ್ಯಕೀಯ, ಎಂಜಿನಿಯರ್ ಮತ್ತು ಸಣ್ಣ ಕೈಗಾರಿಕೆಗಳು ಅಗತ್ಯವಿದ್ದು, ಈ ಬಗ್ಗೆ ಸಂಸತ್ನಲ್ಲಿ ಧ್ವನಿ ಎತ್ತಲಾಗುವುದು. ದಾವಣಗೆರೆ ಸೇರಿದಂತೆ ಈಭಾಗದಲ್ಲಿ ಏಮ್ಸ್ ಮೇಡಿಕಲ್ ಸಂಸ್ಥೆಯನ್ನು ಸ್ಥಾಪನೆಗೆ ಪ್ರಯತ್ನ ಮಾಡಲಾಗವುದು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ .ಅಂಜಿನಪ್ಪ, ನಗರಸಭೆ ಮಾಜಿ ಸದಸ್ಯರಾದ ಟಿ.ವೆಂಕಟೇಶ್, ಡಿ.ಅಬ್ದುಲ್ ರೆಹಮಾನ್, ಮುಖಂಡರಾದ ಟಿ.ಎಚ್.ಎಂ. ಮಂಜುನಾಥ, ದಂಡಿನ್ ಹರೀಶ, ಆರ್.ಶಶಿಕುಮಾರನಾಯ್ಕ, ಎಂ.ವಿ. ಕೃಷ್ಣಕಾಂತ, ಈಶ್ವರ್, ಅಲಮರಸಿಕೆರಿ ಕೋಟೆಪ್ಪ, ಎಚ್.ಟಿ. ಹನುಮಂತಪ್ಪ, ಗಿಡ್ಡಹಳ್ಳಿ ನಾಗರಾಜ, ಉದ್ದಾರ ರಂಗಪ್ಪ, ಬಸಪ್ಪ, ಹನುಮಂತಪ್ಪ, ಅಗ್ರಹಾರ ಹಾಲೇಶ, ಉಮಾಮಹೇಶ್ವರಿ, ಗುಂಡಗತ್ತಿ ನೇತ್ರಾವತಿ. ಎಲ್.ಎಂ.ನಾಯ್ಕ, ಜಿಶಾನ್ ಸೇರಿದಂತೆ ಇದ್ದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ನಿಂದ ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ. ಶಾಮನೂರು ಅಪ್ಪಾಜಿಯವರು ಅನೇಕ ಬಾರಿ ಸ್ಪರ್ಧೆ ಮಾಡಿ ದಾವಣಗೆರೆ ಅಭಿವೃದ್ಧಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸಿದರೂ ನಾವು ಸೇರಿದಂತೆ ಪಕ್ಷದ ಕಾರ್ಯಕರ್ತರು ಕೆಲಸ ಮಾಡುತ್ತೇವೆ ಎಂದು ಹೇಳಿದರು.