ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಪೋಕ್ಸೋ ಪ್ರಕರಣವೊಂದರಲ್ಲಿ ಪೊಲೀಸರು ಸಲ್ಲಿಸಿದ ‘ಬಿ’ ವರದಿಯನ್ನು ತಿರಸ್ಕರಿಸಿದ ಜಿಲ್ಲಾ ಪೋಕ್ಸೋ ನ್ಯಾಯಾಲಯ, ಮರು ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನೊಂದ ಬಾಲಕನೊಬ್ಬ ಸ್ಥಳೀಯ ಮಸೀದಿಗೆ ನಮಾಜ್ಗೆ ತೆರಳಿದ ಸಂದರ್ಭದಲ್ಲಿ ಆತನಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಆರೋಪಿ ಫೈಜಲ್ ಬ್ಯಾರಿ ಮತ್ತು ಆ ಬಗ್ಗೆ ಬೇರೆಯವರಿಗೆ ವಿಷಯ ತಿಳಿಸದಂತೆ ಕೊಲೆ ಬೆದರಿಕೆ ಹಾಕಿರುವ ಆರೋಪಿಗಳಾದ ಆಖಿಲಾ ಮತ್ತು ಮೊಹಾಜಮ್ ಅವರ ಮೇಲೆ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು.ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿ, ನಂತರ ಸುಳ್ಳು ಪ್ರಕರಣವೆಂದು ಉಡುಪಿಯ ಜಿಲ್ಲಾ ಪೋಕ್ಸೋ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದರು. ಈ ವರದಿಯ ಆಧಾರದ ಮೇಲೆ ಪೊಲೀಸರ ‘ಬಿ’ ವರದಿಯನ್ನು ಪ್ರಶ್ನಿಸಿ ನೊಂದ ಬಾಲಕ ನ್ಯಾಯಾಲಯಕ್ಕೆ ಹಾಜರಾಗಿ ವೈದ್ಯರು, ಇತರ ಸಾಕ್ಷಿಗಳನ್ನು ತನ್ನ ಪರವಾಗಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಿದ್ದಾನೆ.ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ಮೇಲ್ನೊಟಕ್ಕೆ ಪ್ರಕರಣ ನಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸರ ‘ಬಿ’ ವರದಿಯನ್ನು ತಿರಸ್ಕರಿಸಿ ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರುವಾಗುವಂತೆ ಸಮನ್ಸ್ ನೀಡಿ ಆರೋಪಿಗಳ ಮೇಲೆ ಮರು ಪ್ರಕರಣ ದಾಖಲಿಸುವಂತೆ ಉಡುಪಿ ಜಿಲ್ಲಾ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಆದೇಶಿಸಿದ್ದಾರೆ. ಪ್ರಕರಣದಲ್ಲಿ ನೊಂದ ಬಾಲಕನ ಪರವಾಗಿ ಉಡುಪಿಯ ನ್ಯಾಯವಾದಿ ಚೇರ್ಕಾಡಿ ಅಖಿಲ್ ಬಿ. ಹೆಗ್ಡೆ ವಾದ ಮಂಡಿಸಿದರು.