ಹೂವಿನಹಡಗಲಿ: ಕವಿತೆಗಳು ಕನ್ನಡ ಸಾಹಿತ್ಯ ಭಾಷೆಯ ಶ್ರೀಮಂತಿಕೆಯ ಪ್ರತೀಕವಾಗಿವೆ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ.ಶಾಂತಮೂರ್ತಿ ಕುಲಕರ್ಣಿ ಹೇಳಿದರು.
ಇಲ್ಲಿನ ಜೆಎಸ್ಎಸ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ, ಭಾಷಾ ಸಂಘದ ವತಿಯಿಂದ ಆಯೋಜಿಸಿದ್ದ ಕೃತಿಕಾ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಬದುಕು ಕುರಿತಾಗಿ ತಮ್ಮದೇ ಆದ ಭಾವನೆಗಳನ್ನು ಹೊಂದಿರುತ್ತಾರೆ, ಆ ಭಾವನೆಗಳು ಕವನ, ಕವಿತೆಗಳ ರೂಪದಲ್ಲಿ ಹೊರಗೆ ಬರುತ್ತಿರುವುದು ಸಾಹಿತ್ಯದ ಸೌಂದರ್ಯವಾಗಿದೆ. ಸಾಹಿತ್ಯ ಅಪಾರ ಶಕ್ತಿ ಹೊಂದಿದೆ, ಅದು ಮನಸ್ಸು ಮನಸ್ಸುಗಳ ನಡುವೆ ಮಾನವೀಯ ಮೌಲ್ಯ ಮತ್ತು ಸಂಬಂಧಗಳನ್ನು ಬೆಳೆಸುವ ಕೆಲಸ ಮಾಡುತ್ತದೆ. ಜೆಎಸ್ಎಸ್ ಕಾಲೇಜಿನ ಭಾಷಾ ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.ಉಪನ್ಯಾಸಕ ಎಂ.ಪಿ.ಎಂ.ಶಿವಪ್ರಕಾಶ್ ಮಾತನಾಡಿ, ಕವಿ ಮೃತನಾದರೂ ಕಾವ್ಯಗಳಿಗೆ ಸಾವಿಲ್ಲ, ಕಾವ್ಯವೆಂಬುದು ಮಾನವ ಜೀವನದ ಭಾವನೆಗಳಿಗೆ ಕನ್ನಡಿ ಹಿಡಿಯುವ ಮಹತ್ವದ ಸಾಹಿತ್ಯ ಪ್ರಕಾರವಾಗಿದೆ. ಸಮಾಜದ ನೋವು, ನಲಿವು, ಸಂಸ್ಕೃತಿ, ಪ್ರೀತಿ, ಮಾನವೀಯತೆ ಹಾಗೂ ಬದುಕಿನ ಮೌಲ್ಯಗಳನ್ನು ಕವಿತೆಗಳು ತಲೆ ತಲೆಮಾರುಗಳಿಂದ ಜೀವಂತ ಇಡುತ್ತದೆ ಎಂದರು.
ಭಾಷೆಯ ಸತ್ವ, ಸೌಂದರ್ಯ ಮತ್ತು ಸ್ವಾರಸ್ಯವನ್ನು ಕವಿಗೋಷ್ಠಿಗಳು ಕಲಿಸುತ್ತವೆ. ಯುವಪೀಳಿಗೆಯಲ್ಲಿ ಸಾಹಿತ್ಯಾಸಕ್ತಿ ಬೆಳೆಸುವಲ್ಲಿ, ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾಷೆಯನ್ನು ಸ್ಫುಟವಾಗಿ, ಶುದ್ಧವಾಗಿ ಮತ್ತು ಸಮರ್ಪಕ ರೀತಿಯಲ್ಲಿ ಬಳಸಿದಾಗ ಅದರ ಸೊಗಸು ಇನ್ನಷ್ಟು ಹೆಚ್ಚುತ್ತದೆ. ಉತ್ತಮ ಸಾಹಿತ್ಯ ಓದುವುದರಿಂದ ವ್ಯಕ್ತಿತ್ವ ವಿಕಸನವಾಗುವುದರ ಜತೆಗೆ ಸಮಾಜದ ಬಗ್ಗೆ ಸಂವೇದನಾಶೀಲ ಮನೋಭಾವವೂ ಬೆಳೆಯುತ್ತದೆ ಎಂದರು.ಸಹಾಯಕ ಪ್ರಾಧ್ಯಾಪಕ ಡಾ. ಅಶೋಕ ಈಡಿಗರ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಡಾ.ಎಚ್.ಪಿ.ರಮೇಶ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಪಿ.ಎಂ. ಮಂಜುನಾಥ ಸ್ವಾಮಿ, ಸಹಾಯಕ ಪ್ರಾಧ್ಯಾಪಕ ಎ.ಕೆ.ನಾಗರಾಜ್ ಉಪಸ್ಥಿತಿ ವಹಿಸಿದ್ದರು.
ಪಿ.ಎಂ.ಕೊಟ್ರಸ್ವಾಮಿ, ಜಗನ್ನಾಥ ಕೋ ಮನ್ವಾಚಾರ್, ಎಸ್.ದ್ವಾರಕೀಶ್ ರೆಡ್ಡಿ, ಎಂ. ದಯಾನಂದ, ಯು.ರೇಣುಕ, ಎಲ್.ಖಾದರ್ ಭಾಷಾ, ಎಂ.ಎಂ.ಗೌರಮ್ಮ, ಟಿ.ಎಂ.ನಾಗಭೂಷಣ, ಎಚ್.ಚಂದ್ರಪ್ಪ, ನಯನ ಮಲ್ಲಿನಾಥ್, ಶ್ರೀಲತಾ ಎಲ್.ಎಂ, ನಾಗರಾಜ್ ಮಲ್ಕಿ ಒಡೆಯರ್, ರಿಹಾನ .ಜಿ, ಚಿನ್ನ, ನಂಜಂಡಸ್ವಾಮಿ, ಅಭಿಷೇಕ ಕುಪ್ಪಲ, ರೇಖಾ ಪವಾಡಿ ಇವರು ಕವಿತೆ ವಾಚಿಸಿದರು.
ವಿದ್ಯಾರ್ಥಿಗಳಾದ ಕಡ್ಲಬಾಳ ಅನಿತ, ಶಿವಲೀಲಾ ಬಡಿಗೇರ, ಎಸ್.ಚೈತ್ರ ಪ್ರಾರ್ಥಿಸಿದರು , ಎಸ್.ಪಿ.ಅರ್ಪಿತ ಮತ್ತು ರಕ್ಷಿತಾ ತಂಬೂರಿ ನಿರ್ವಹಿಸಿದರು.