ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಕೋಮ ಭಾವನೆ ಕೆರಳಿಸುವ, ಸಮಾಜದ ಸಾಮರಸ್ಯ ಕದಡುವ ದುಷ್ಟಶಕ್ತಿಗಳ ವಿರುದ್ಧ ಕವಿಗಳು ತಮ್ಮ ಸಾಹಿತ್ಯದಲ್ಲಿ ಪ್ರತಿರೋಧ ಒಡ್ಡಬೇಕು ಎಂದು ಸಾಹಿತಿ ಟಿ.ಸತೀಶ್ ಜವರೇಗೌಡ ಕರೆ ನೀಡಿದರು.ತಾಲೂಕಿನ ಬಾಬುರಾಯನ ಕೊಪ್ಪಲಿನ ಮಣಿಕರ್ಣಿಕಾ ಗುಂಜಾ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕವಿಗೋಷ್ಠಿ, ಕವಿ ಮತ್ತು ಶಿಕ್ಷಕ ಕೊ.ನಾ.ಪುರುಷೋತ್ತಮ ಅವರ ಸುಲಗ್ನ ಸಾವಧಾನ ಹನಿಗವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾವೈಕ್ಯತೆ, ಸಾಮರಸ್ಯ, ಸೌಹಾರ್ದತೆ, ವಿಶ್ವಮಾನವತೆ ವರ್ತಮಾನದ ಬದುಕಿಗೆ ಅಗತ್ಯವಿರುವ ಜೀವನ ಮೌಲ್ಯಗಳು. ಕನ್ನಡ ಸಾಹಿತ್ಯ ಪರಂಪರೆಯು ತನ್ನ ಒಡಲಲ್ಲಿ ಈ ಮೌಲ್ಯಗಳನ್ನು ಜತನ ಮಾಡಿಕೊಂಡು ಬಂದಿದೆ. ಅದಕ್ಕೆ ಕನ್ನಡ ನೆಲ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಶೀಶಾಂತಿಯ ತೋಟಕ್ಕೆ ಬೆಂಕಿ ಹಚ್ಚುವ, ಸಮಾಜವನ್ನು ವಿಘಟಿಸುವ ಕೋಮುವಾದಿಗಳ ವಿರುದ್ಧ ಸಾಹಿತ್ಯ ಪ್ರತಿಭಟಿಸುವ ಮೂಲಕ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯಬೇಕು ಎಂದರು.ಬಿಎಂಶ್ರೀ, ಪುತಿನ, ಸುಜನಾ, ಕೆ.ಎಸ್.ನ., ಎಂ.ಎಲ್.ಶ್ರೀಕಂಠೇಶಗೌಡ, ಎ.ಎನ್. ಮೂರ್ತಿರಾಯ, ಎಚ್.ಎಲ್. ನಾಗೇಗೌಡ, ಬೆಸಗರಹಳ್ಳಿ ರಾಮಣ್ಣ, ಪ್ರೊ.ಎಚ್.ಎಲ್.ಕೇಶವಮೂರ್ತಿ ಪ್ರತಿಭಾವಂತ ಸಾಹಿತಿಗಳಾಗಿ ಮಂಡ್ಯದ ನೆಲಕ್ಕೆ ಕೀರ್ತಿ ತಂದವರು. ಇವರ ಹಾಗೆಯೇ ಜಿಲ್ಲೆಯ ಸಮಕಾಲೀನ ಯುವ ಕವಿಗಳು ಸಾಹಿತ್ಯ ಕೃಷಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕವಿಗಳು ಯಾವುದೇ ಜಾತಿ, ಮತ, ಧರ್ಮ, ಪಂಥ, ಪಕ್ಷಗಳಿಗೆ ಬಂಧಿಯಾಗಬಾರದು. ಎಲ್ಲಾ ಮಿತಿಗಳನ್ನೂ ಚೌಕಟ್ಟುಗಳನ್ನು ಮೀರಿ ಅನುಭವ ನಿಷ್ಠ, ಜೀವಪರವಾದ ಸಾಹಿತ್ಯ ಕೃಷಿ ಮೂಲಕ ಸಮಾಜದ ಸ್ವಾಸ್ಥ್ಯ ಕಾಯಬೇಕು. ಜನಮನದಲ್ಲಿ ಸಾಮರಸ್ಯದ, ವೈಚಾರಿಕತೆಯ ಬೀಜಗಳನ್ನು ಬಿತ್ತಬೇಕು ಎಂದರು.ಪುಸ್ತಕ ಲೋಕಾರ್ಪಣೆ ಮಾಡಿದ ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಮಾತನಾಡಿ, ಕವಿ ಕೊ.ನಾ.ಪುರುಷೋತ್ತಮ ಅವರಲ್ಲಿ ಮುಗ್ಧತೆ ಮತ್ತು ಸೂಕ್ಷ್ಮತೆಯಿದೆ. ಪ್ರಾಸ ಮತ್ತು ಪಂಚ್ ಮೂಲಕ ಹನಿಗವನಗಳನ್ನು ಉತ್ತಮವಾಗಿ ರಚಿಸಬಲ್ಲ ಪ್ರತಿಭಾವಂತ ಕವಿ. ಬದುಕನ್ನು ಅವಲೋಕಿಸಿ ಹಲವು ಅತ್ಯುತ್ತಮವಾದ ಹನಿಗವನಗಳನ್ನು ರಚಿಸಿದ್ದಾರೆ. ಈ ಸಂಕಲನ ಕವಿಯ ಮಾಗಿದ ಮನಸ್ಸನ ಪ್ರತಿಬಿಂಬ ಎಂದು ಬಣ್ಣಿಸಿದರು.
ಕವಯತ್ರಿ ಎಂ.ಯು.ಶ್ವೇತ ಕವನ ಸಂಕಲನ ಕುರಿತು ಮಾತನಾಡಿದರು. ಸಮಾಜ ಸೇವಕ ಬಿ.ಎಂ.ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಸಿದ್ದಲಿಂಗು, ಸಾಹಿತಿ ಮಾರೇನಹಳ್ಳಿ ಲೋಕೇಶ್, ಹನಿಗವನ ಸಂಕಲನದ ರಚನಕಾರ ಕೊ.ನಸ. ಪುರುಷೋತ್ತಮ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕದಲಗೆರೆ ಜಯರಾಮ್ ಉಪಸ್ಥಿತರಿದ್ದರು.ಕವಿಗೋಷ್ಠಿಯಲ್ಲಿ ಲೋಕೇಶ್ ಕಲ್ಕುಣಿ, ಎನ್.ಧನಂಜಯ, ವಡಿಯಾಂಡಹಳ್ಳಿ ಅಶ್ವಿನಿ, ಸಿಂಗಾಪುರ ಲಕ್ಷ್ಮೇಗೌಡ, ದಾಸ್ ಬಲ್ಲೇನಹಳ್ಳಿ, ಎಚ್.ಪಿ.ತೇಜಸ್, ಪೂಜಾ ಶ್ರೀನಿವಾಸ್, ಪುನೀತ್ ಭಾಸ್ಕರ್ ಮೊದಲಾದವರು ತಮ್ಮ ಕವನಗಳನ್ನು ವಾಚಿಸದರು. ಮೂರು ಉತ್ತಮ ಜೋಡಿಗಳಿಗೆ ದಾಂಪತ್ಯ ಅನುಸಂಧಾನ ಪ್ರಶಸ್ತಿ ಪ್ರದಾನ ಮಾಡಲಾಯಿತು.