ಕಾಂಗ್ರೆಸ್‌ ಸರ್ಕಾರದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲ: ಆರಗ ಜ್ಞಾನೇಂದ್ರ

| Published : May 26 2024, 01:42 AM IST / Updated: May 26 2024, 10:30 AM IST

ಕಾಂಗ್ರೆಸ್‌ ಸರ್ಕಾರದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲ: ಆರಗ ಜ್ಞಾನೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಅಪರಾಧ ಪ್ರಕರಣಗಳು ಬಹಳಷ್ಟು ಹೆಚ್ಚಾಗಿದ್ದು, ಒಂದು ವರ್ಷದಲ್ಲಿ 1,87,742 ವಿವಿಧ ಘೋರ ಅಪರಾಧ ಪ್ರಕರಣ ಜರುಗಿವೆ.

 ಶಿವಮೊಗ್ಗ

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಅಪರಾಧ ಪ್ರಕರಣಗಳು ಬಹಳಷ್ಟು ಹೆಚ್ಚಾಗಿದ್ದು, ಒಂದು ವರ್ಷದಲ್ಲಿ 1,87,742 ವಿವಿಧ ಘೋರ ಅಪರಾಧ ಪ್ರಕರಣ ಜರುಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಜನರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ಸಾಮಾನ್ಯ ಜನರಿಗೆ ಇರಲಿ, ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಾದಕ ವಸ್ತು ಸಾಗಾಟ, ಮಾರಾಟ, ರೇವ್ ಪಾರ್ಟಿಗಳು ಎಗ್ಗಿಲ್ಲದೇ ನಡೆಯುತ್ತಿವೆ. ಈ ಸರ್ಕಾರ ಬದುಕಿದೆಯಾ ಎಂಬ ಸಂಶಯ ಕಾಡುತ್ತಿದೆ ಎಂದು ಕಿಡಿಕಾರಿದರು. ಕಾಂಗ್ರೆಸ್‌ ಅಧಿಕಾರದಲ್ಲಿ ಅಪರಾಧಿಗಳಿಗೆ ಪೊಲೀಸರ ಭಯ ಇಲ್ಲವಾಗಿದೆ. ಈ ಸರ್ಕಾರ ಪೊಲೀಸ್ ವ್ಯವಸ್ಥೆಯ ರಾಜಕಾರಣಕ್ಕೆ ಬಳಸಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದೆ. 

ಚನ್ನಗಿರಿ ಪ್ರಕರಣ ನಾಚಿಕೆಗೇಡು:

ಶುಕ್ರವಾರ ಚನ್ನಗಿರಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ಲಾಕಪ್ ಡೆತ್ ಎಂದು ಆರೋಪಿಸಿ ಕೆಲವೇ ನಿಮಿಷಗಳಲ್ಲಿ ಸಾವಿರಾರು ಮಂದಿ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸ್ ವಾಹನಗಳ ಧ್ವಂಸಗೊಳಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಈ ಹಿಂದೆ ಕೆಜೆ ಹಳ್ಳಿ, ಡಿಜೆ ಹಳ್ಳಿ ಮತ್ತು ಹುಬ್ಬಳ್ಳಿ ಗಲಭೆ ಸಂದರ್ಭದಲ್ಲಿ ಅದನ್ನು ಮಾಡಿದವರ ಪರ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ ತಾಳಿತ್ತು. ಅವರು ಅಮಾಯಕರು ಎಂದು ಅವರ ಮೇಲಿನ ಪ್ರಕರಣಗಳ ಹಿಂಪಡೆಯಲು ಪತ್ರ ನೀಡಿತು. ಇದರಿಂದ ಯಾವ ಸಂದೇಶ ಹೋಗಿದೆ ಎಂದು ಈಗ ಗೊತ್ತಾಗುತ್ತಿದೆ ಎಂದು ಕಿಡಿಕಾರಿದರು.ವಿಧಾನಸೌಧದ ಒಳಗೆಯೇ ಪಾಕಿಸ್ತಾನ ಜಿಂದಾಬಾದ್ ಎಂದರೆ ಈ ಸರ್ಕಾರ ಅದನ್ನು ನಿರಾಕರಿಸುತ್ತದೆ. ಎಫ್ಎಸ್ಎಲ್ ವರದಿ ಬಂದ ಬಳಿಕ ಒಪ್ಪಿಕೊಳ್ಳುತ್ತದೆ. ಮೊನ್ನೆ ಕೊಪ್ಪದಲ್ಲಿ ಕೂಡ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ. ಆದರೂ ಈ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ರಾಜ್ಯ ಅಶಾಂತಿಯ ತೋಟವಾಗಿದೆ:

ಹುಬ್ಬಳ್ಳಿಯ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಪ್ರಕರಣ ನಡೆದಾಗಲೂ ಗೃಹ ಸಚಿವರು ಅದು ಪ್ರೇಮ ಪ್ರಕರಣ ಎಂದು ಬೇಜವಾಬ್ದಾರಿಯ ಹೇಳಿಕೆ ನೀಡುತ್ತಾರೆ. ಯಾದಗಿರಿಯಲ್ಲಿ ರೊಟ್ಟಿ ಕೇಳಲು ಹೋದ ದಲಿತನ ಕೊಲೆಯಾಗುತ್ತದೆ. ಆಂಧ್ರದಿಂದ ಇಲ್ಲಿಗೆ ಬಂದು ರೇವ್ ಪಾರ್ಟಿ ನಡೆಸುತ್ತಾರೆ. ವಿವಿಧ ಮಾದಕ ವಸ್ತುಗಳನ್ನು ಬಹಿರಂಗವಾಗಿ ಸೇವನೆ ಮಾಡುತ್ತಾರೆ. ಸ್ಥಳೀಯರು ಒತ್ತಡ ಹೇರಿದ ಮೇಲೆ ಬೇರೆ ಪೊಲೀಸರು ಬಂದು ಕೇಸ್ ದಾಖಲಿಸುತ್ತಾರೆ. ತುಷ್ಟೀಕರಣ ರಾಜಕಾರಣದಿಂದ ಕರ್ನಾಟಕ ಅಶಾಂತಿಯ ತೋಟವಾಗಿದೆ. ಎಲ್ಲಾ ಶಕ್ತಿಗಳು ತಲೆ ಎತ್ತುತ್ತಿವೆ. ದೇಶದ್ರೋಹಿಗಳು ಇದು ನಮ್ಮ ಸರ್ಕಾರ ಎಂದು ಹೆಮ್ಮೆಯಿಂದ ಹೇಳುತ್ತಾರೆ. ನಕಲಿ ಚಟುವಟಿಕೆಗಳು ಗರಿಗೆದರಿವೆ. ಕ್ರೈಂ ಗೂ ಕಾಂಗ್ರೆಸ್‌ಗೂ ಬಾಂಧವ್ಯವಿದೆ ಎಂದರು.

ಗೋ ವಧೆ ಮಸೂದೆ ಜಾರಿಯಲ್ಲಿದ್ದರೂ ಸಾಕ್ಷಿ ಸಮೇತ ಅದನ್ನು ಹಿಡಿದುಕೊಟ್ಟರೆ, ಆರೋಪಿಗಳ ಬಿಟ್ಟು ಹಿಡಿದುಕೊಟ್ಟವರ ಮೇಲೆಯೇ 307 ಕೇಸ್ ಹಾಕುತ್ತಿದ್ದಾರೆ. ರಾಜಕೀಯ ಸೇಡಿನ ಮನೋಭಾವದಿಂದ ಸರ್ಕಾರ ವರ್ತಿಸುತ್ತಿದೆ. ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ನಮ್ಮ ಪಕ್ಷ ಮತ್ತು ನಾಯಕರು ಇದನ್ನು ಖಂಡಿಸಿದ್ದಾರೆ. ಸರ್ಕಾರ ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್. ದತ್ತಾತ್ರಿ, ರತ್ನಾಕರ್ ಶೆಣೈ, ಕೆ.ವಿ.ಅಣ್ಣಪ್ಪ, ಭವಾನಿರಾವ್ ಮೋರೆ ಇದ್ದರು.

ಪೊಲೀಸರ ಮಾನಸಿಕತೆ ಬದಲಾಗಿದೆ

ರಾಜ್ಯ ಸರ್ಕಾರದ ಬಗ್ಗೆ ಟೀಕಿಸಿದರೆ ಗೃಹ ಸಚಿವರು ಟೀಕೆ ಮಾಡಬೇಡಿ ಬ್ರ್ಯಾಂಡ್ ಬೆಂಗಳೂರಿಗೆ ಹೊಡೆತ ಬೀಳುತ್ತದೆ. ಬಂಡವಾಳ ಶಾಹಿಗಳು ಬರುವುದಿಲ್ಲ ಎನ್ನುತ್ತಾರೆ. ಇವರ ದುರಾಡಳಿತದಿಂದ ರಾಜ್ಯಕ್ಕೆ ಮತ್ತು ಬೆಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪೊಲೀಸರ ಮಾನಸಿಕತೆ ಬದಲಾಗಿದ್ದು, ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ರೌಡಿಶೀಟ್ ಓಪನ್ ಮಾಡಿ ವಿವಿಧ ಸೆಕ್ಷನ್ ಗಳ ಹಾಕಿ ಜೈಲಿಗಟ್ಟುವ ಕಾರ್ಯ ನಡೆಸಲಾಗುತ್ತಿದೆ.

ಆರಗ ಜ್ಞಾನೇಂದ್ರ, ಮಾಜಿ ಗೃಹಸಚಿವ