ಸರಣಿ ಕಳವು ಪ್ರಕರಣ ಬೇಧಿಸಿಸ ಪೊಲೀಸರು

| Published : May 27 2025, 12:27 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕಳ್ಳತನವಾಗಿದ್ದ ಚಿನ್ನಾಭರಣ, ಬೆಳ್ಳಿಯ ಪದಾರ್ಥಗಳು ಹಾಗೂ ಕ್ಯಾಮೆರಾ ಮತ್ತು ಕ್ಯಾಮೆರಾ ಲೆನ್ಸ್‌ಗಳನ್ನು ಪ್ರದರ್ಶಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಮೂರು ಕಡೆ ೪೨ ಲಕ್ಷದ ೨೬ ಸಾವಿರ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಪದಾರ್ಥಗಳು ಹಾಗೂ ಕ್ಯಾಮೆರ ಮತ್ತು ಕ್ಯಾಮೆರಾ ಲೆನ್ಸ್‌ಗಳ ಕಳ್ಳತನವನ್ನು ಬೇಧಿಸಿರುವ ಪೊಲೀಸರು ನಾಲ್ವರನ್ನು ಬಂಧಿಸಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಸಿದ್ದಾರ್ಥನಗರದ ರೇಣುಕಾ ಅವರ ನಿವಾಸ, ಅಂಬೇಡ್ಕರ್ ಬಡಾವಣೆಯ ಮಂಜುಳ ಮತ್ತು ಪ್ರಗತಿ ನಗರದ ನಟರಾಜು ಎಂಬುವರು ತಮ್ಮ ಮನೆಗಳಲ್ಲಿ ಕಳ್ಳತನವಾಗಿರುವ ಬಗ್ಗೆ ನೀಡಿದ ದೂರಿನ ಮೇಲೆ ಸವಾಲಾಗಿದ್ದ ಈ ಕಳ್ಳತನವನ್ನು ಬೇಧಿಸಲು ನಗರದ ಸಿ.ಇ.ಎನ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಾಗರ್ ಎಸ್.ಎಲ್.ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ನೇಮಿಸಿ ಕಾರ್ಯಾಚರಣೆ ನಡೆಸಲಾಯಿತು ಎಂದರು.ಮೂರು ಪ್ರಕರಣಗಳಲ್ಲಿ ಒಟ್ಟು ೪೧೮ ಗ್ರಾಂ ಚಿನ್ನದ ಗಟ್ಟಿ ಹಾಗೂ ಚಿನ್ನಾಭರಣಗಳು, ೮.೫ ಕೆ.ಜಿ ತೂಕದ ಬೆಳ್ಳಿಯ ಪದಾರ್ಥಗಳು, ೨ ಲಕ್ಷ ಬೆಲೆಬಾಳುವ ಕ್ಯಾಮೆರ ಮತ್ತು ಕ್ಯಾಮೆರ ಲೆನ್ಸ್ ಇವುಗಳ ಮೌಲ್ಯ ಸುಮಾರು ೪೨,೨೫,೦೦೦ ರು. ಎಂದು ಅಂದಾಜು ಮಾಡಲಾಗಿದ್ದು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಮೊಟಾರ್ ಬೈಕ್‌ನ್ನು ವಶಪಡಿಸಲಾಗಿದೆ ಎಂದರು.ಆರೋಪಿಗಳು ಚಾಮರಾಜನಗರ ತಾಲೂಕಿನ ಕೋಳಿಪಾಳ್ಯದ ದೇವರಾಜು, ಹೌಸಿಂಗ್ ಬೋರ್ಡ್‌ನ ದೀಪುನಾಯಕ, ಜಾಲಹಳ್ಳಿಹುಂಡಿಯ ಅರ್ಜುನ, ರಾಮುಸಮುದ್ರದ ಅವಿನಾಶ್‌ ಇವರನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಣೆಗೆಗೊಳಪಡಿಸಿದಾಗ ಕಳ್ಳತನ ಮಾಡಿದ್ದು ಗೊತ್ತಾಗಿ, ಪದಾರ್ಥಗಳನ್ನು ಇಟ್ಟಿದ್ದ ಜಾಗಗಳನ್ನು ಪತ್ತೆ ಹಚ್ಚಿ, ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಈ ವಿಶೇಷ ಕಾರ್ಯಾಚರಣೆ ತಂಡದಲ್ಲಿ ಸಾಗರ್ ಜೊತೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್, ಸಿಬ್ಬಂದಿ ಆರ್.ಮೋಹನ್ ಕುಮಾರ್, ಮಹೇಶ್. ಮಹದೇವ ಮಂಜುನಾಥ, ಮೋಹನ್ ನಿಂಗರಾಜು ಎಸ್.ಹಾಗೂ ತಾಂತ್ರಿಕ ವಿಭಾಗದ ವೆಂಕಟೇಶ್, ಎಎಸ್‌ಐ ಶಂಕರ್ ರಾಜು, ತನಿಖಾ ಸಹಾಯಕರಾದ ಮಹೇಶ್ ಶ್ರೀನಿವಾಸಮೂರ್ತಿ, ಗಿರೀಶ್, ಚಾಲಕ ಮಲ್ಲೇಶ್, ಕುಮಾರ್ ಭಾಗವಹಿಸಿದ್ದು, ಇವರ ಕಾರ್ಯಾಚರಣೆಯನ್ನು ಶ್ಲಾಘೀಸಿ ನಗದು ಬಹುಮಾನ ಕೊಡಲಾಗುವುದು ಎಂದರು. ಸಿಸಿ ಕ್ಯಾಮೆರಾಗಳು ಕಳ್ಳರ ಪತ್ತೆಗೆ ಹೆಚ್ಚು ಸಹಕಾರಿಯಾಗುವುದರಿಂದ ಸಾರ್ವಜನಿಕರು ಸುಂದರ ಮನೆಗಳನ್ನು ನಿರ್ಮಿಸಿಕೊಳ್ಳುವ ಜೊತೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಿ ಎಂದು ಮನವಿ ಮಾಡಿದರು. ಆಯಕಟ್ಟು ಜಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಮುಂದುವರಿದಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ಶ್ರೀಧರ್, ಡಿವೈಎಸ್ಪಿ ಲಕ್ಷ್ಮಯ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿ ಇದ್ದರು.