ಕನ್ನಡಪ್ರಭ ವಾರ್ತೆ ಕುಣಿಗಲ್
ಕೊಲೆ ಮಾಡುವವರು ಮಾತನಾಡಿಕೊಂಡು ಕೊಲೆ ಮಾಡುವುದು ಸಾಮಾನ್ಯವಾದ ವಿಚಾರ ಆದರೆ ಮೈಸೂರು ಜಿಲ್ಲೆಯ ನಂಜನಗೂಡು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿ ಕಾಣೆ ಕೇಸೊಂದರಲ್ಲಿ ಆರೋಪಿಗಳಿಗೆ ಮಾತು ಬರಲ್ಲ ಕಿವಿಯೂ ಕೇಳಲ್ಲ ಆದರೂ ಸಹ ಓರ್ವನನ್ನು ಕೊಲೆ ಮಾಡಿ ಈಗ ಸಿಕ್ಕಿ ಹಾಕಿಕೊಂಡಿದ್ದಾರೆ.ಆಗಿದ್ದೇನು?: ಫೆ.15ರಂದು ಮನೆಯಿಂದ ನಾಪತ್ತೆಯಾಗಿದ್ದ ಸ್ವಾಮಿ (32) ಎನ್ನುವ ವಿಶೇಷ ಚೇತನ ವ್ಯಕ್ತಿಯನ್ನು ಹುಡುಕುವ ನಿಟ್ಟಿನಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಅಚ್ಚರಿಯ ಬೆಳವಣಿಗೆ ಬೆಳಕಿಗೆ ಬಂದಿದೆ. ಪ್ರಕರಣ ಬೆನ್ನತ್ತಿದ ಪೊಲೀಸರು ತನಿಖೆ ಆರಂಭಿಸಿ ನಾಪತ್ತೆಯಾಗಿದ್ದ ಸ್ವಾಮಿ ಉಪಯೋಗಿಸುತ್ತಿದ್ದ ದೂರವಾಣಿ ಸಂಖ್ಯೆ, ವಾಟ್ಸಾಪ್, ಸೇರಿದಂತೆ ಹಲವಾರು ಕೋನಗಳ ಮುಖಾಂತರ ತನಿಖೆ ಚುರುಕುಗೊಳಿಸಿದಾಗ ಕಾಣೆಯಾದ ವ್ಯಕ್ತಿ ಚಲನವಲನದ ಮೊಬೈಲ್ ನೆಟ್ವರ್ಕ್ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ಭಾಗದಲ್ಲಿ ಅಂತ್ಯ ಆಗಿರುವುದು ಕಂಡು ಬಂದಿತ್ತು. ಸ್ವಾಮಿ ಹಾಗೂ ಆತನ ಪತ್ನಿಯೂ ಸಹ ಮಾತುಬಾರದ ಮೂಕಿಯಾಗಿದ್ದು ಆತನ ಸ್ನೇಹಿತ ಇಂದಿರಾನಗರದ ಗಂಗಾಧರ್ ಜೊತೆಯಲ್ಲಿ ವಿಡಿಯೋ ಕಾಲ್ ನಲ್ಲಿ ಆಕೆಯ ಸ್ನೇಹ ಸಂಬಂಧ ಇತ್ತು ಎಂದು ಮೇಲ್ನೋಟಕ್ಕೆ ತಿಳಿದು ಬಂದಿತ್ತು. ಪೊಲೀಸರು ಈ ದಿಕ್ಕಿನಲ್ಲಿ ತನಿಖೆ ಆರಂಭಿಸಿದಾಗ ನಂಜನಗೂಡು ಮೂಲದ ಸ್ವಾಮಿಗೆ ಪಾರ್ಟಿ ಕೊಡಿಸುವುದಾಗಿ ಹನುಮಾಪುರದ ಶ್ರೀನಿವಾಸ, ಇಂದಿರಾನಗರದ ಗಂಗಾಧರ ಹಾಗೂ ದೇವರಾಜ್ ಎಂಬುವರು ಫೆಬ್ರವರಿ 15ರಂದು ಇಂದಿರಾನಗರಕ್ಕೆ ಕರೆಸಿಕೊಂಡು ಆತನಿಗೆ ಪಾರ್ಟಿ ಕೊಡಲು ಹೊಸಹಳ್ಳಿ ತೋಟದ ಬಾವಿ ಬಳಿ ಕರೆಸಿ ಅತಿಯಾದ ಮದ್ಯ ಸೇವನೆ ಮಾಡಿಸಿ ನಂತರ ಕೊಲೆ ಮಾಡಿ ಬಾವಿಗೆ ಬಿಸಾಕಿದ್ದರು ಎಂದು ತಿಳಿದು ಬಂದಿದೆ. ನಂತರ ಆರೋಪಿಗಳಾದ ಇಂದಿರಾನಗರದ ಗಂಗಾಧರ ಹಾಗೂ ಹನುಮಾಪುರದ ಶ್ರೀನಿವಾಸ ಎಂಬ ಇಬ್ಬರನ್ನು ಬಂಧಿಸಿದಾಗ ಕೊಲೆ ಮಾಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ. ನಾಪತ್ತೆಯಾಗಿರುವ ದೇವರಾಜ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ 22 ದಿನದ ಶವವನ್ನು ಪೊಲೀಸರು ಹೊರ ತೆಗೆದಿದ್ದಾರೆ.
ಕೊಲೆಗಾರರಿಗೆ ಮಾತು ಬರಲ್ಲ ಕಿವಿ ಕೇಳಲ್ಲಈ ಕೊಲೆಯನ್ನು ಸಾಮಾನ್ಯ ವ್ಯಕ್ತಿಗಳು ಮಾಡಿದ್ದರೆ ಅದು ಬೇರೆ ಆಯಾಮದಲ್ಲಿ ತನಿಖೆ ಸಾಗುತ್ತಿತ್ತು. ಆದರೆ ಇಲ್ಲಿ ಎದುರಾದ ಸಮಸ್ಯೆಯೇ ಸ್ವಾಮಿ ಹೆಂಡತಿ ಲತಾ (ಹೆಸರು ಬದಲಾಯಿಸಲಾಗಿದೆ) ಹಾಗೂ ಇಬ್ಬರು ಆರೋಪಿಗಳಾದ ಗಂಗಾಧರ ಹಾಗೂ ಶ್ರೀನಿವಾಸ್ ಅವರಿಗೆ ಮಾತು ಬರಲ್ಲ ಹಾಗೂ ಕಿವಿ ಕೇಳುವುದಿಲ್ಲ. ಆದರೂ ಸಹ ಗಂಗಾಧರ ಜೊತೆಗೆ ಮಾತು ಬಾರದ ಲತಾಗೆ ಪ್ರೇಮಾಂಕುರವಾಗಿತ್ತು. ಅವರ ಜೊತೆಗೆ ಆಕೆ ಪ್ರತಿ ದಿನ ಸಂಪರ್ಕದಲ್ಲಿಲೂ ಎಂದು ಪೊಲೀಸರಿಗೆ ತನಿಖೆಯಲ್ಲಿ ಗೊತ್ತಾಗಿದೆ. ಈ ಪ್ರೇಮ ಪ್ರಕರಣವೇ ಈಗ ಸ್ವಾಮಿ ಕೊಲೆಯಲ್ಲಿ ಅಂತ್ಯ ಕಂಡಿದೆ. ಈ ಸಂಬಂಧ ನಂಜನಗೂಡು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.