ಕನ್ನಡಪ್ರಭ ವಾರ್ತೆ ತಾಳಿಕೋಟೆ

ಹೈದ್ರಾಬಾದ್‌ದಿಂದ ಮಗಳನ್ನು ಕರೆದುಕೊಂಡು ಬಾಗಲಕೋಟೆಗೆ ತೆರಳುತ್ತಿದ್ದ ಸಮಯದಲ್ಲಿ ತಾಳಿಕೋಟೆ ಸಮೀಪದ ಆಲದಮರಕ್ಕೆ ಕಾರು ಡಿಕ್ಕಿಯಾಗಿ ತಂದೆ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಬೆಳಗಿನಜಾವ ನಡೆದಿದೆ.

ಬಾಗಲಕೋಟೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಎಚ್‌ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ನಿಸಾರಹಮ್ಮದ ಅಬ್ದುಲ್‌ ರಜಾಕ ಹಿಪ್ಪರಗಿ(50) ಮೃತಪಟ್ಟವರು. ನಿಸಾರಹಮ್ಮದ ಹಿಪ್ಪರಗಿ ಎಂಬಾತ ತನ್ನ ಮಗಳಾದ ನೇಹಾಳನ್ನು ಹೈದ್ರಾಬಾದ್‌ಗೆ ಐಪಿಎಸ್ ಕೋಚಿಂಗ್ ಬಿಟ್ಟಿದ್ದು, ಕೋಚಿಂಗ್ ನಂತರ ಹೈದ್ರಾಬಾದನಲ್ಲಿಯೇ ಐಪಿಎಸ್ ಪರೀಕ್ಷೆ ಮುಗಿದಿದ್ದರಿಂದ ಸ್ನೇಹಿತ ಬಸವರಾಜ ಸೊನಾ ಎಂಬುವರ ಜೊತೆಗೂಡಿ ಮಗಳನ್ನು ಕರೆದುಕೊಂಡು ಬರುತ್ತಿದ್ದರು ಎನ್ನಲಾಗಿದೆ.

ತಾಳಿಕೋಟೆ ಸಮೀಪ ಬರುತ್ತಿದ್ದಾಗ ಕರ್ವಿಂಗ್‌ನಲ್ಲಿ ನಿಸಾರಹಮ್ಮದ್‌ ಅವರ ಅಜಾಗರೂಕತೆ ಕಾರು ಚಲಾವಣೆಯಿಂದ ಬಲಗಡೆ ಇರುವ ಆಲದಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದಾರೆ ಎಂದು ಮೃತನ ಅಳಿಯ ಅಜೀಜಹಮ್ಮದ ಕುಡಚಿ ಅವರು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾರಿನಲ್ಲಿದ್ದ ಮಗಳಾದ ನೇಹಾ(22) ಮತ್ತು ಅಪಘಾತದಲ್ಲಿ ಮೃತಪಟ್ಟ ನಿಸಾರಹಮ್ಮದನ ಸ್ನೇಹಿತ ಎಎಸ್‌ಐ ಬಸವರಾಜ ಸೋನಾ (51) ಗಂಭೀರ ಸ್ವರೂಪದ ಗಾಯಗಳಾಗಿದ್ದು, ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ಮಹ್ಮದ ಪಸೀವುದ್ದೀನ, ಪಿಎಸ್‌ಐ ಜ್ಯೋತಿ ಖೋತ, ಅಪರಾಧ ವಿಭಾಗದ ಪಿಎಸ್‌ಐ ಎಸ್.ಎಂ.ಪಡಶೆಟ್ಟಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.