ವಿಶೇಷ ವರದಿ
ಮಂಗಳೂರು: ದ.ಕ. ಜಿಲ್ಲೆಯಿಂದ ಪೊಲೀಸ್ ಇಲಾಖೆಗೆ ಸೇರ ಬಯಸುವ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸಲು, ಜಾಗೃತಿ ಮೂಡಿಸಲು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಸಹಯೋಗದೊಂದಿಗೆ ವಿಶೇಷ ಅಣಕು ಪರೀಕ್ಷೆ (ಮಾಕ್ಟೆಸ್ಟ್) ನಡೆಸಿ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ.ದ.ಕ.ಜಿಲ್ಲೆಯಿಂದ ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರಿ ಉದ್ಯೋಗಕ್ಕೆ ಸೇರಬಯಸಲು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದ್ದು, ಈ ಹಿನ್ನಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳನ್ನು ಪೊಲೀಸ್ ಇಲಾಖೆ, ಸರ್ಕಾರಿ ಉದ್ಯೋಗಕ್ಕೆ ಸೇರುವಂತೆ ಪ್ರೋತ್ಸಾಹಿಸಲು ಈ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ.
ಹೇಗಿರಲಿದೆ ಪರೀಕ್ಷೆ:ಪೊಲೀಸ್ ಇಲಾಖೆ ಇತ್ತೀಚೆಗೆ 3,395 ಪೊಲೀಸ್ ಕಾನ್ಸ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಅದಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ಅರ್ಹ ವಿದ್ಯಾರ್ಥಿಗಳೂ ಈ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದು. ಕರ್ನಾಟಕ ರಾಜ್ಯ ನಾಗರಿಕ ಪೊಲೀಸ್ ಇಲಾಖೆಗೆ ಅರ್ಜಿ ಹಾಕಿದ ಸ್ವೀಕೃತಿಯ ಪ್ರತಿಯನ್ನು ಈ ಸಾಮಾನ್ಯ ಜ್ಞಾನ ಪರೀಕ್ಷೆಗೆ ನೋಂದಣಿ ವೇಳೆ ಸಲ್ಲಿಸಬೇಕು. ಜೊತೆಗೆ ಆಧಾರ್ ನಂಬರ್, ವಿಳಾಸ ಮಾಹಿತಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಯಾವುದೇ ಪರೀಕ್ಷಾ ಶುಲ್ಕ ಇರುವುದಿಲ್ಲ. ಅಣಕು ಪರೀಕ್ಷೆ ದಿನ ಅರ್ಜಿ ಸಲ್ಲಿಸಿರುವುದಕ್ಕೆ (ಪೊಲೀಸ್ ನೇಮಕಾತಿಗೆ) ಅರ್ಜಿ ಸಲ್ಲಿಸಿದ ಸ್ವೀಕೃತಿ ಪ್ರತಿ ಅಥವಾ ಇತರೆ ದಾಖಲೆ ಕಡ್ಡಾಯವಾಗಿ ತರಬೇಕು.
90 ನಿಮಿಷಗಳ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಯಲಿದ್ದು, ಮೂಲ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಮಾದರಿಯಲ್ಲೇ 100 ಬಹು ಆಯ್ಕೆ ಪ್ರಶ್ನೆಗಳಿರಲಿದೆ. ಋಣಾತ್ಮಕ ಮೌಲ್ಯಮಾಪನ (ತಪ್ಪು ಉತ್ತರಕ್ಕೆ 0.25 ಅಂಕ ಕಡಿತ ) ಇರುತ್ತದೆ. ಕಡಬ ತಾಲೂಕಿನ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಪರೀಕ್ಷೆ ನಡೆಯಲಿದೆ.
ಜು.10ರ ಮೊದಲು ನೊಂದಣಿ ಮಾಡಿಕೊಳ್ಳಬೇಕು. 19ರಂದು ಭಾನುವಾರ ಬೆಳಗ್ಗೆ 11ರಿಂದ 12.30ರ ವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು 30 ನಿಮಿಷ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. 9535556173, 9035556143 ಈ ವಾಟ್ಸಪ್ ಸಂಖ್ಯೆಗೆ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 8861894957, 9632715231 ಸಂಪರ್ಕಿಸಬಹುದು.
ಆಕರ್ಷಕ ಬಹುಮಾನ:ನೇಮಕಾತಿ ಪರೀಕ್ಷೆ ಮಾದರಿಯಲ್ಲೇ ಈ ಸಾಮಾನ್ಯ ಜ್ಞಾನ ಪರೀಕ್ಷೆ (ಅಣುಕು ಪರೀಕ್ಷೆ) ನಡೆಯಲಿದೆ. ಪರೀಕ್ಷೆ ಬಳಿಕ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮ ಪರೀಕ್ಷೆ ಎದುರಿಸುವ ಬಗ್ಗೆ ಮಾಹಿತಿ ನೀಡಲಿದ್ದಾರೆ. ಹಾಗೂ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಅಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನ 10,000 ರು, ದ್ವಿತೀಯ 8,000 ರು., ತೃತೀಯ 6,000 ರು., ಚತುರ್ಥ 4,000 ರು. ನಗದು ಬಹುಮಾನ ಘೋಷಿಸಲಾಗಿದೆ.
ಪೊಲೀಸ್ ಇಲಾಖೆ, ಸರ್ಕಾರಿ ಉದ್ಯೋಗಕ್ಕೆ ಸೇರುವಂತೆ ಜಿಲ್ಲೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸುಬ್ರಹ್ಮಣ್ಯದಲ್ಲಿ ಈ ಸಾಮಾನ್ಯ ಜ್ಞಾನ ಅಣಕು ಪರೀಕ್ಷೆ ಆಯೋಜಿಸಲಾಗಿದೆ. ಯಾವ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದೆ, ಪರೀಕ್ಷೆ ಎದುರಿಸುವ ಬಗ್ಗೆ ಅರಿತುಕೊಳ್ಳಲು ಇದು ಸಹಕಾರಿ.
-ಆಂಜನೇಯ ರೆಡ್ಡಿ, ಉಪನಿರೀಕ್ಷಕರು, ಸುಬ್ರಹ್ಮಣ್ಯ ಪೊಲೀಸ್ ಠಾಣೆ.