ಸಾರಾಂಶ
ಇಂದು ಅಕ್ಷರಸ್ಥರು, ಅನಕ್ಷರಸ್ಥರು ಎಂಬ ಬೇಧವಿಲ್ಲದೆ ಬಹುತೇಕರನ್ನು ವಂಚಿಸುತ್ತಿರುವ ಸೈಬರ್ ಕ್ರೈಂ ಬಗ್ಗೆ ಮತ್ತು ಅಪರಾಧ ಪ್ರಕರಣಗಳನ್ನು ಶಿಕ್ಷೆಗೆ ಒಳಪಡಿಸಲು ಅಗತ್ಯವಿರುವ ಸಾಕ್ಷಿ ಸಂಗ್ರಹ, ತನಿಖೆಗೆ ಅಗತ್ಯವಿರುವ ತಾಂತ್ರಿಕ ಜ್ಞಾನದ ತರಬೇತಿ ನೀಡಬೇಕಿದೆ.
ಧಾರವಾಡ:
ಪೊಲೀಸ್ ಇಲಾಖೆಗೆ ವಿವಿಧ ವಿಷಯಗಳ ಪದವಿ, ಸ್ನಾತಕೋತ್ತರ ಪದವೀಧರರು ಸೇರಿಕೊಳ್ಳುತ್ತಿದ್ದಾರೆ. ಅವರಿಗೆ ಇಂದು ಅಕ್ಷರಸ್ಥರು, ಅನಕ್ಷರಸ್ಥರು ಎಂಬ ಬೇಧವಿಲ್ಲದೆ ಬಹುತೇಕರನ್ನು ವಂಚಿಸುತ್ತಿರುವ ಸೈಬರ್ ಕ್ರೈಂ ಬಗ್ಗೆ ಮತ್ತು ಅಪರಾಧ ಪ್ರಕರಣಗಳನ್ನು ಶಿಕ್ಷೆಗೆ ಒಳಪಡಿಸಲು ಅಗತ್ಯವಿರುವ ಸಾಕ್ಷಿ ಸಂಗ್ರಹ, ತನಿಖೆಗೆ ಅಗತ್ಯವಿರುವ ತಾಂತ್ರಿಕ ಜ್ಞಾನದ ತರಬೇತಿ ನೀಡಬೇಕಿದೆ ಎಂದು ನಿವೃತ್ತ ಪೊಲೀಸ್ ಅಧೀಕ್ಷಕ ಎ.ಎಸ್. ಮಗೆಣ್ಣವರ ಸಲಹೆ ನೀಡಿದರು.ಪೊಲೀಸ್ ಇಲಾಖೆ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕವಾಯತು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಮತ್ತು ಸೇವಾ ನಿವೃತ್ತರಿಗೆ ಗೌರವ ಸನ್ಮಾನದಲ್ಲಿ ಮಾತನಾಡಿದ ಅವರು, ಅಪರಾಧ ಪ್ರಕರಣ ಪತ್ತೆ ಮಾಡಿದರೆ ಸಾಲದು. ಅಪರಾಧಿಗಳು ಮಾಡಿದ ಅಪರಾಧ ಸಾಬೀತಾಗಿ, ಅವರಿಗೆ ಶಿಕ್ಷೆ ಆಗುವವರೆಗೆ ಬೆನ್ನು ಹತ್ತಬೇಕು ಎಂದ ಅವರು, ಸಾರ್ವಜನಿಕರ ಸಹಕಾರವಿಲ್ಲದೆ ನಮ್ಮ ಕರ್ತವ್ಯ ಪೂರ್ಣವಾಗುವುದಿಲ್ಲ. ಸಾರ್ವಜನಿಕರ ಶಾಂತಿ, ಸುರಕ್ಷತೆ ಮತ್ತು ಸುವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆ ಕಾಳಜಿವಹಿಸುವುದರಿಂದ ಜನರೊಂದಿಗೆ ಇಲಾಖೆಯ ಸಂಬಂಧ ಉತ್ತಮವಾಗಿ ಬೆಳೆಯುತ್ತದೆ ಎಂದರು.
ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಕಳೆದ ಸಾಲಿನ ಪೊಲೀಸ್ ಕಲ್ಯಾಣ ಚಟುವಟಿಕೆಗಳ ವರದಿ ಮಂಡಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಬರಮನಿ ವಂದಿಸಿದರು. ಮಾಯಾ ರಾಮನ್ ನಿರೂಪಿಸಿದರು.ಆಕರ್ಷಕ ಪಥಸಂಚಲನ:
ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪರೇಡ್ ಕಮಾಂಡರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್ಪಿಐ ವಿಠ್ಠಲ್ ಟಿ. ಕೋಕಟನೂರ ಹಾಗೂ 2ನೇ ಪರೇಡ್ ಕಮಾಂಡರ್ ಆರ್.ಎಸ್. ಗುಡನಟ್ಟಿ ನಾಯಕತ್ವದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. ಪಥಸಂಚಲನದ ವಿವಿಧ ತಂಡಗಳಿಗೆ ಮಲ್ಲನಗೌಡ ಗುತ್ತರಗಿ, ಮಂಜುನಾಥ ಕುರಗೋಡ, ಆನಂದಕುಮಾರ ಬಿ., ಮಲ್ಲಿಕಾರ್ಜುನ ನರಗುಂದ, ಲಕ್ಷ್ಮಿ ದೇಗಿನಾಳ ಮತ್ತು ವಾಸು ರಕ್ಷೇದ ನೇತೃತ್ವವಹಿಸಿದ್ದರು.ಆರ್ಎಸ್ಐ ವೈ.ಎಫ್. ಭಜಂತ್ರಿ ಹಾಗೂ ಸ್ಟಿಕ್ ಮೇಜರ್ ಸಾಗರ ಬಸರಕೋಡಿ ಅವರ ತಂಡ ಮಧುರವಾದ ಹಿನ್ನಲೆ ಸಂಗೀತದೊಂದಿಗೆ ಪೊಲೀಸ್ ಬ್ಯಾಂಡ್ ನುಡಿಸಿತು.
ಏಪ್ರಿಲ್ ೨೦೨೩ರಿಂದ ಮಾರ್ಚ್ ೨೦೨೪ರ ಅವಧಿಯಲ್ಲಿ ಸೇವಾ ನಿವೃತ್ತರಾದ ಪೊಲೀಸ್ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಕೇಂದ್ರ ಕಾರಾಗೃಹ ಅಧೀಕ್ಷಕ ಡಾ. ಕೆ.ಎಂ. ಮರಿಗೌಡ ಸೇರಿದಂತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.