ರಾಣಿಬೆನ್ನೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಿನ್ನಾಭರಣ ಹಾಗೂ ಮೋಟಾರ್ ಸೈಕಲ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಮಾಲು ಸಮೇತ ಶಹರ ಪೊಲೀಸರು ಇತ್ತೀಚಿಗೆ ನಗರದ ಎನ್‌ವಿ ಹೊಟೇಲ್ ಬಳಿ ಬಂಧಿಸಿದ್ದಾರೆ. ಸೆಂಟ್ರಿಂಗ್ ಕೆಲಸ ಮಾಡುವ ನಗರದ ಗವಾರದವರ ಓಣಿಯ ನಿವಾಸಿ ಮುಬಾರಕ್ ಮೊಟಿಯಾ ತಂದೆ ಹುಸೇನ್ ಬ್ಯಾಡಗಿ (23) ಹಾಗೂ ಗುಜರಿ ವ್ಯಾಪಾರಿ ನಗರದ ಇಸ್ಲಾಂಪುರ ಓಣಿ ಬಿಲಾಲ್ ಮಸೀದಿ ಹತ್ತಿರದ ನಿವಾಸಿ ಮಹ್ಮದ್ ಕಲಂದರ ಉರ್ಪ್ ಶಾಹಿಲ್ ಬಿಲಾಲ್ ಬಂಧಿತ ಆರೋಪಿಗಳು. ಆರೋಪಿತರಿಂದ ಸುಮಾರು ರು. 65 ಸಾವಿರ ಮೌಲ್ಯದ 4.5 ಗ್ರಾಂ ತೂಕದ ಒಂದು ಜೊತೆ ಬಂಗಾರದ ಜುಮುಕಿ, ಸುಮಾರು ರು.45 ಸಾವಿರ ಮೌಲ್ಯದ ಒಂದು ಜೊತೆ ಸಣ್ಣ ಕಿವಿ ಓಲೆ, ಸುಮಾರು ರು.25500 ಮೌಲ್ಯದ 10 ತೊಲೆ ಎರಡು ಜೊತೆ ಬೆಳ್ಳಿ ಕಾಲು ಚೈನ್, ಸುಮಾರು 4 ಸಾವಿರ ಮೌಲ್ಯದ 16 ಗ್ರಾಂ ತೂಕದ ಒಂದು ಜೊತೆ ಬೆಳ್ಳಿ ದೀಪ, ಸುಮಾರು 4500 ಸಾವಿರ ಮೌಲ್ಯದ 600 ಮಿಲಿ ತೂಕದ ಒಂದು ಬೆಳ್ಳಿ ಕೈಗಡ ಸೇರಿದಂತೆ ಒಟ್ಟು ರು. 1.34 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗರದಲ್ಲಿ ಕಳ್ಳತನ ಮಾಡಿದ ಸುಮಾರು 50 ಸಾವಿರ ಮೌಲ್ಯದ ಹಿರೋ ಪ್ಯಾಶನ್ ಪ್ರೋ ಮೋಟಾರ್ ಸೈಕಲ್, ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಸುಮಾರು 50 ಸಾವಿರ ಮೌಲ್ಯದ ಟಿವಿಎಸ್ ಸ್ಕೂಟಿ ವಾಹನ, ಹಾವೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಸುಮಾರು 1.50 ಸಾವಿರ ಮೌಲ್ಯದ ಎನ್‌ಫೀಲ್ಡ್ ಬುಲೆಟ್ ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ರು. 3.84.000/- ಮೌಲ್ಯದ ಚಿನ್ನಾಭರಣ ಹಾಗೂ 3 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳರ ಪತ್ತೆಗಾಗಿ ಎಸ್‌ಪಿ ಯಶೋದ ವಂಟಗೋಡಿ, ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಡಿಎಸ್‌ಪಿ ಲೋಕೇಶ ಮಾರ್ಗದರ್ಶನದಲ್ಲಿ ಶಹರ ಸಿಪಿಐ ವೆಂಕಟೇಶ ಎನ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಪರಮೇಶ ಡಿ. ಜಿ., ಎಚ್.ಎನ್. ದೊಡ್ಡಮನಿ, ಶಹರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪಿ ಕೆ ಸನದಿ, ದÀನವಿನಮನಿ, ಎಚ್.ಟಿ. ನಗಾವತ್, ಎಲ್.ಬಿ. ಕರಿಗಾರ, ಚಾಲಕ ಶ್ರೀಕಾಂತ ಕೊರವರ ಮತ್ತು ತಾಂತ್ರಿಕ ಸಿಬ್ಬಂದಿಯವರನ್ನು ಒಳಗೊಂಡ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು.ರಾಣಿಬೆನ್ನೂರು ಶಹರ ವೃತ್ತದ ಅಧಿಕಾರಿ ಮತ್ತು ಶಹರ ಠಾಣೆಯ ಸಿಬ್ಬಂದಿಯವರ ತಂಡಕ್ಕೆ ಎಸ್‌ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.