ಬೆಳ್ಳಂಬೆಳಗ್ಗೆಯೇ 55 ರೌಡಿ ಶೀಟರ್‌ಗಳಿಗೆ ಪೊಲೀಸರ ದರ್ಶನ!

| Published : May 16 2025, 01:47 AM IST

ಬೆಳ್ಳಂಬೆಳಗ್ಗೆಯೇ 55 ರೌಡಿ ಶೀಟರ್‌ಗಳಿಗೆ ಪೊಲೀಸರ ದರ್ಶನ!
Share this Article
  • FB
  • TW
  • Linkdin
  • Email

ಸಾರಾಂಶ

ರೌಡಿ ಶೀಟರ್ ಕಣುಮ ಸಂತೋಷನ ಹತ್ಯೆ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ, ಅಪರಾಧ ತಡೆ ನಿಟ್ಟಿನಲ್ಲಿ ನಗರದ ವಿವಿಧೆಡೆ 55 ರೌಡಿ ಶೀಟರ್‌ಗಳ ಮನೆಗಳಿಗೆ ಗುರುವಾರ ಬೆಳ್ಳಂಬೆಳಗ್ಗೆಯೇ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿ-ಸಿಬ್ಬಂದಿ ತೆರಳಿ, ಪರಿಶೀಲಿಸಿದ್ದಾರೆ.

- ಯಾರ ಮನೆಯಲ್ಲೂ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ । ಅಕ್ರಮ ನಡೆಸದಂತೆ ಎಚ್ಚರಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ರೌಡಿ ಶೀಟರ್ ಕಣುಮ ಸಂತೋಷನ ಹತ್ಯೆ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ, ಅಪರಾಧ ತಡೆ ನಿಟ್ಟಿನಲ್ಲಿ ನಗರದ ವಿವಿಧೆಡೆ 55 ರೌಡಿ ಶೀಟರ್‌ಗಳ ಮನೆಗಳಿಗೆ ಗುರುವಾರ ಬೆಳ್ಳಂಬೆಳಗ್ಗೆಯೇ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿ-ಸಿಬ್ಬಂದಿ ತೆರಳಿ, ಪರಿಶೀಲಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್‌, ನಗರ ಪೊಲೀಸ್ ಉಪಾಧೀಕ್ಷಕ ಬಿ.ಶರಣ ಬಸವೇಶ್ವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿವಿಧೆಡೆ ರೌಡಿ ಶೀಟರ್‌ಗಳ ಮನೆಗಳಿಗೆ ಭೇಟಿಯಿತ್ತರು.

ಪೊಲೀಸರು ರೌಡಿ ಶೀಟರ್‌ಗಳ ಮನೆಗಳು, ಶೆಡ್‌ಗಳಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ ಯಾವುದೇ ಕಾನೂನು ಬಾಹಿರ ವಸ್ತುಗಳ ಸಂಗ್ರಹ ಕಂಡುಬರಲಿಲ್ಲ. ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಕೃತ್ಯಗಳಲ್ಲಿ ತೊಡಗದಂತೆ ರೌಡಿ ಶೀಟರ್‌ಗಳಿಗೆ ಮನೆ ಅಂಗಳದಲ್ಲಿ ನಿಂತು ಎಚ್ಚರಿಸಲಾಯಿತು. ಕೆಲವು ರೌಡಿ ಶೀಟರ್‌ಗಳು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೆ, ಮತ್ತೆ ಕೆಲವರು ಜೀವನೋಪಾಯಕ್ಕೆ ಬೇರೆ ಕೆಲಸ ಮಾಡುತ್ತಿರುವುದಾಗಿ ಪೊಲೀಸ್‌ ಅಧಿಕಾರಿಗಳಿಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

- - - * 645 ರೌಡಿ ಶೀಟರ್‌ಗಳ ಪಿಎಆರ್: ಎಸ್‌ಪಿ ದಾವಣಗೆರೆ: ದಾವಣಗೆರೆಯಲ್ಲಿ 645 ರೌಡಿ ಶೀಟರ್‌ಗಳಿದ್ದು, ಅಂತಹವರ ವಿರುದ್ಧ ಮುಂಜಾಗ್ರತೆಯಾಗಿ ಪಿಎಆರ್‌ (ಪ್ರಿವೆನ್ಷನ್‌ ಆ್ಯಕ್ಟ್‌ ಆನ್ ರಿಪೋರ್ಟ್‌)ನಡಿ ಬಾಂಡ್ ಓವರ್ ಮಾಡಲಾಗಿದೆ. ಯಾವುದೇ ರೌಡಿ ಶೀಟರ್‌, ಕಿಡಿಗೇಡಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಕಂಡುಬಂದರೆ ತಕ್ಷಣ‍ವೇ ಸಮೀಪದ ಪೊಲೀಸ್ ಠಾಣೆ ಅಥವಾ 112ಗೆ ಕರೆ ಮಾಡಿ. ಇಲ್ಲದಿದ್ದರೆ ನೇರವಾಗಿ ಜನತೆ ತಮ್ಮ ಗಮನಕ್ಕೆ ತರಬೇಕು ಎಂದು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಹೇಳಿದರು.

ನಗರದಲ್ಲಿ ಮೇ 5ರಂದು ರೌಡಿ ಶೀಟರ್ ಕಣುಮ ಸಂತೋಷನ ಬರ್ಬರ ಹತ್ಯೆಯಾದ ಹಿನ್ನೆಲೆ ದಾವಣಗೆರೆಯ ವಿವಿಧೆಡೆ ವಾಸಿಸುತ್ತಿರುವ 55 ರೌಡಿ ಶೀಟರ್‌ಗಳ ಮನೆಗಳಿಗೆ ನಮ್ಮ ಪೊಲೀಸ್ ಅಧಿಕಾರಿ, ಸಿಬ್ಬಂದಿ ಗುರುವಾರ ಬೆಳಂಬೆಳಗ್ಗೆಯೇ ಭೇಟಿ ನೀಡಿ, ಪರಿಶೀಲಿಸಿದರು. ರೌಡಿ ಚಟುವಟಿಕೆಗೆ ನಿಯಂತ್ರಣ, ಬೇರೆ ಯಾವುದಾದರೂ ಪ್ರಕರಣಗಳಲ್ಲಿ ರೌಡಿಶೀಟರ್‌ಗಳು ಭಾಗಿಯಾಗಿದ್ದಾರಾ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದರು.

ರೌಡಿ ಶೀಟರ್‌ಗಳ ಮನೆಯಲ್ಲಿ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಸಾರ್ವಜನಿಕರ ರಕ್ಷಣೆಗೆ ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದರು.

- - -

-15ಕೆಡಿವಿಜಿ9, 10:

ದಾವಣಗೆರೆ ನಗರದ ವಿವಿಧ ರೌಡಿ ಶೀಟರ್‌ಗಳ ಮನೆಗೆ ಗುರುವಾರ ಬೆಳ್ಳಂಬೆಳಗ್ಗೆಯೇ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಕ್ರಮಗಳಲ್ಲಿ ತೊಡಗದಂತೆ ಎಚ್ಚರಿಸಿದರು. -15ಕೆಡಿವಿಜಿ11: ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ