ಸಾರಾಂಶ
ಗಂಗಾವಳಿ ನದಿಯ ಸೇತುವೆಯ ಕಟ್ಟೆ ಮೇಲೆ ಪುಟ್ಟ ಮಗುವನ್ನು ಅಪಾಯಕಾರಿ ಸ್ಥಿತಿಯಲ್ಲಿಟ್ಟ ಪ್ರವಾಸಿ ದಂಪತಿಯ ಹುಚ್ಚಾಟವನ್ನು ಇಲ್ಲಿನ ಪೊಲೀಸರು ಸಿಸಿ ಕ್ಯಾಮೆರಾ ಮೂಲಕ ಗಮನಿಸಿ ಕ್ಯಾಮೆರಾದ ಮೂಲಕವೇ ಸೈರನ್ ಮೊಳಗಿಸಿ ಎಚ್ಚರಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಗೋಕರ್ಣ: ಗಂಗಾವಳಿ ನದಿಯ ಸೇತುವೆಯ ಕಟ್ಟೆ ಮೇಲೆ ಪುಟ್ಟ ಮಗುವನ್ನು ಅಪಾಯಕಾರಿ ಸ್ಥಿತಿಯಲ್ಲಿಟ್ಟ ಪ್ರವಾಸಿ ದಂಪತಿಯ ಹುಚ್ಚಾಟವನ್ನು ಇಲ್ಲಿನ ಪೊಲೀಸರು ಸಿಸಿ ಕ್ಯಾಮೆರಾ ಮೂಲಕ ಗಮನಿಸಿ ಕ್ಯಾಮೆರಾದ ಮೂಲಕವೇ ಸೈರನ್ ಮೊಳಗಿಸಿ ಎಚ್ಚರಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ವಾಹನ ಸಂಚಾರಕ್ಕೆ ಮುಕ್ತಗೊಂಡ ಸೇತುವೆ ಮೇಲೆ ಗೋಕರ್ಣದಿಂದ ಅಂಕೋಲಾಕ್ಕೆ ಪ್ರವಾಸಿ ದಂಪತಿ ಕಾರಿನಲ್ಲಿ ತೆರಳುತ್ತಿದ್ದರು. ಸೇತುವೆಯ ಬಳಿ ವಾಹನ ನಿಲ್ಲಿಸಿ ಪೋಟೋ ತೆಗೆಯಲು ಸೇತುವೆ ಕಟ್ಟೆ ಬಳಿ ತೆರಳಿದ್ದಾರೆ. ಕೈಯಲ್ಲಿರುವ ಪುಟ್ಟ ಮಗುವನ್ನು ನಿಲ್ಲಿಸಿದ್ದು, ಸ್ವಲ್ಪ ಯಾಮಾರಿದರೂ ನದಿಪಾಲಾಗುವ ಅಪಾಯವಿತ್ತು. ಠಾಣೆಯಲ್ಲಿ ಈ ದೃಶ್ಯವನ್ನು ಗಮನಿಸಿದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು.ಮಗುವನ್ನು ರಕ್ಷಿಸಿಕೊಳ್ಳುವಂತೆ ಪಿಐ ಶ್ರೀಧರ್ ಎಸ್.ಆರ್. ಅನೌನ್ಸ್ ಮಾಡಿದ್ದು, ಯಾರೂ ಇಲ್ಲದ ಸ್ಥಳದಲ್ಲಿ ಏಕಾಏಕಿ ಧ್ವನಿ ಕೇಳಿದ ದಂಪತಿ ತಕ್ಷಣ ಪುಟ್ಟ ಕಂದಮ್ಮನನ್ನು ತಬ್ಬಿಕೊಂಡು ಬದಿಯಲ್ಲಿ ತೆರಳಿದರು. ಸಮಯಪ್ರಜ್ಞೆಯಿಂದ ಪುಟ್ಟ ಮಗುವಿನ ಜೀವ ಉಳಿಸಿದ ಇಲ್ಲಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.
ಇತ್ತೀಚೆಗೆ ಎಸ್ಪಿ ಎಂ. ನಾರಾಯಣ ಮಾರ್ಗದರ್ಶನದಂತೆ ಪೊಲೀಸ್ ಮಾಹಿತಿ ಕೇಂದ್ರ ಪುನರ್ ಆರಂಭಿಸಿದ್ದು, ಈ ವೇಳೆ ಹಲವಾರು ಕಡೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಇದರಂತೆ ಗೋಕರ್ಣದಿಂದ ಐದು ಕಿ.ಮೀ. ಹೆಚ್ಚು ದೂರದ ನೂತನ ಗಂಗಾವಳಿ ಸೇತುವೆಯ ಮೇಲೆ ಕ್ಯಾಮೆರಾ ಅಳವಡಿಸಲಾಗಿತ್ತು. ಅದು ಇಂದು ಮಗುವಿನ ರಕ್ಷಣೆಗೆ ನೆರವಾಗಿದೆ.