ಕನ್ನಡಪ್ರಭ ವಾರ್ತೆ ಗುಬ್ಬಿ

ಮಕ್ಕಳಿಗೆ ಪೋಲಿಯೋ ಲಸಿಕೆ ಜೀವಾಮೃತವಿದ್ದಂತೆ ಎಂದು ಸಿವಿಲ್ ನ್ಯಾಯಾಧೀಶರಾದ ಎಸ್.ಬಿ. ಕಿರಣ್ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ಪೋಷಕರು ಹುಟ್ಟಿದ ಮಗುವಿನಿಂದ ಐದು ವರ್ಷದವರೆಗೆ ಎಲ್ಲಾ ಮಕ್ಕಳಿಗೆ ಆರೋಗ್ಯ ಇಲಾಖೆಯ ಹತ್ತಿರದ ಲಸಿಕ ಕೇಂದ್ರಗಳಿಗೆ ಹೋಗಿ ತಪ್ಪದೇ ಎರಡು ಹನಿ ಲಸಿಕೆಯನ್ನು ಹಾಕಿಸುವ ಮೂಲಕ ಪೋಲಿಯೋ ಮುಕ್ತ ಭಾರತ ನಿರ್ಮಾಣ ಮಾಡಲು ಕೈಜೋಡಿಸಬೇಕು ಎಂದು ತಿಳಿಸಿದರು.ತಾಲೂಕು ತಾಲೂಕು ವೈದ್ಯಾಧಿಕಾರಿ ಡಾ. ವಿಜಯಕುಮಾರ್ ಮಾತನಾಡಿ, ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಆದರೆ ಪಕ್ಕದ ಪಾಕಿಸ್ತಾನ ಅಫ್ಘಾನಿಸ್ತಾನದಂತಹ ದೇಶಗಳಲ್ಲಿ ಇನ್ನೂ ಪೋಲಿಯೋ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ದೇಶಕ್ಕೆ ಯಾವುದೇ ಕಾರಣಕ್ಕೂ ಯಾವ ಮಕ್ಕಳು ಇದರಿಂದ ಸಮಸ್ಯೆಗೆ ಸಿಲುಕಬಾರದು ಎಂದು ಪ್ರತಿವರ್ಷವೂ ಕೂಡ ಪೋಲಿಯೋ ಹನಿಗಳನ್ನು ಹಾಕುವ ಮೂಲಕ ಅಂಗವಿಕಲತೆಯನ್ನು ತಡೆಯಲು ಸರ್ಕಾರ ಪಣತೊಟ್ಟಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೇಶವರಾಜು, ತಾಪಂ ಇಒ ಜೆ.ಬಿ.ರಂಗನಾಥ್, ಸ್ತ್ರೀರೋಗ ತಜ್ಞ ಡಾ.ಶಿವರಾಜು, ಮಕ್ಕಳ ತಜ್ಞ ಡಾ.ವಿನಯ್, ಡಾ.ನಾಗರಾಜು ,ಬಿಇಒ ಎಂ.ಎಸ್.ನಟರಾಜು, ಸಿಡಿಪಿಒ ಕೃಷ್ಣಮೂರ್ತಿ, ಜಗದೀಶ್, ಮಧುಸೂದನ್, ಜಯಮ್ಮ, ರಮೇಶ್, ಬಲರಾಮಯ್ಯ, ಲಯನ್ಸ್ ಸಂಸ್ಥೆಯ ಜಿ.ಆರ್.ಶಿವಕುಮಾರ್, ಮಲ್ಲಪ್ಪ ಇತರರಿದ್ದರು.