ಸಾರಾಂಶ
ಇಂದಿಗೂ ದಮನಿತ ವರ್ಗಗಳು ಶೋಷಣೆಗೆ ಒಳಪಟ್ಟಿದ್ದಾರೆ. ಸಂವಿಧಾನ ಉಳಿಸುವ, ಆದರ ಆಶಯ ರಕ್ಷಿಸುವ ಕೆಲಸ ಯುವ ಸಮುದಾಯದ ಮೇಲೆ ಇದೆ.
ಧಾರವಾಡ:
ಒಂದು ಕಾಲದಲ್ಲಿ ರಾಜಕೀಯ ಪಕ್ಷಗಳಿಗೆ ಬೇಡವಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಇಂದು ಎಲ್ಲ ಪಕ್ಷಗಳಿಗೆ ಬೇಕಾಗಿದ್ದಾರೆ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಸಾಮಾಜಿಕ ಚಿಂತಕ ಶಿವಸುಂದರ ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯ ಶುಕ್ರವಾರ ಇಲ್ಲಿಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 68ನೇ ಮಹಾಪರಿನಿರ್ವಾಣ ದಿನದಲ್ಲಿ ಮಾತನಾಡಿದ ಅವರು, ಇಂದು ರಾಜಕಾರಣದಲ್ಲಿ ಮೃಗೀಯತೆ ಕಾಣುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.
ನಿಮ್ಮ ಅನುಭವಕ್ಕೆ ಬಂದ ಸತ್ಯ ಅನಿಸಿದ್ದನ್ನು ಮಾತ್ರ ನಂಬಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು, ಅಂಬೇಡ್ಕರ್ ಅವರು ತಮ್ಮ ತ್ಯಾಗದ ಮೂಲಕ ದಮನಿತ ವರ್ಗದ ಜನರ ಹಿತಕ್ಕಾಗಿ ಹೋರಾಟ ನಡೆಸಿದ ಮಹಾತ್ಮರು ಎಂದು ಹೇಳಿದರು.ಮೈಸೂರಿನ ಉರಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ವೀಡಿಯೋ ಕಾನ್ಫೆರನ್ಸ್ ಮೂಲಕ ಮಾತನಾಡಿ, ಅಂಬೇಡ್ಕರ್ ಅವರ ಪರಿಮಹಾರಿನಿರ್ವಾಣ ಎಂದರೆ ಅವರ ಭಾವಚಿತ್ರಕ್ಕೆ ಮೇಣದ ಭತ್ತಿ ಹಚ್ಚುವುದಲ್ಲ. ಅವರ ತತ್ವ, ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕಿದೆ ಎಂದರು.
ಹಂಪಿಯ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಮಾತನಾಡಿ, ಇಂದಿಗೂ ದಮನಿತ ವರ್ಗಗಳು ಶೋಷಣೆಗೆ ಒಳಪಟ್ಟಿದ್ದಾರೆ. ಸಂವಿಧಾನ ಉಳಿಸುವ, ಆದರ ಆಶಯ ರಕ್ಷಿಸುವ ಕೆಲಸ ಯುವ ಸಮುದಾಯದ ಮೇಲೆ ಇದೆ ಎಂದ ಅವರು, ಜಾತಿ ಕಾರಣಕ್ಕೆ ಇಂದಿಗೂ ಅನೇಕ ಸಮುದಾಯಗಳು ನೋವು ಅನುಭವಿಸುತ್ತಿರುವುದು ವಿಪರ್ಯಾಸ ಎಂದರು.ಕರ್ನಾಟಕ ವಿವಿ ಅಂಬೇಡ್ಕರ್ ಅಧ್ಯಯನ ವಿಭಾಗದ ಸಂಯೋಜಕ ಡಾ. ಸುಭಾಷ ನಾಟೀಕಾರ, ಅಂಬೇಡ್ಕರ್ ರಚಿಸಿದ ಸಂವಿಧಾನವು ದೇಶಕ್ಕೆ ನೀಡಿದ ದೊಡ್ಡ ಕೊಡುಗೆ. ಮಹಿಳೆಯರಿಗೆ ಸೇರಿದಂತೆ ದಮನಿತ ವರ್ಗಗಳಿಗೆ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಮೀಸಲಾತಿ ನೀಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕವಿವಿ ಸಮಾಜ ನಿಖಾಯದ ಡೀನ್ ಡಾ. ಜಯಶ್ರೀ ಎಸ್. ಅಧ್ಯಕ್ಷತೆ ವಹಿಸಿದ್ದರು. ಸಿವೈಸಿಡಿ ಕಲಾ ತಂಡದಿಂದ ಅಂಬೇಡ್ಕರ್ ಕುರಿತು ಕ್ರಾಂತಿಗೀತೆಗಳನ್ನು ಹಾಡಲಾಯಿತು. ಕುಲಸಚಿವ ಡಾ. ಎ. ಚೆನ್ನಪ್ಪ, ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಡಾ. ಅನುಸಯಾ ಕಾಂಬಳೆ ಇದ್ದರು.