ಕನ್ನಡಪ್ರಭ ವಾರ್ತೆ ಮಂಡ್ಯ
ದೇಶದೆಲ್ಲೆಡೆ ಭ್ರಷ್ಟಾಚಾರ ಹೆಚ್ಚಾಗಲು ರಾಜಕಾರಣಿಗಳೇ ಕಾರಣ. ಹಣ ಮಾಡುವ ದಂಧೆಯಿಂದ ಹೊರ ಬಂದಾಗ ಮಾತ್ರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಚ್.ಎಂ.ಕುಮಾರಸ್ವಾಮಿ ಅಭಿಪ್ರಾಯಿಸಿದರು.ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವದನಲ್ಲಿ ರಾಷ್ಟ್ರೀಯ ಭ್ರಷ್ಚಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಆಫ್ ಇಂಡಿಯಾ ವತಿಯಿಂದ ನಡೆದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದರು.
ಸರ್ಕಾರಿ ನೌಕರ ಅಥವಾ ಅಧಿಕಾರಿ ಯಾವ ಸ್ಥಳಕ್ಕೆ ನಿಯೋಜನೆ ಆಗುತ್ತಾನೋ ಅಲ್ಲಿಗೆ ಹೋಗಬೇಕು. ಅದು ಬಿಟ್ಟು ರಾಜಕಾರಣಿಗಳ ಬೆಂಬಲ ಪಡೆದು ತನಗೆ ಬೇಕಿರುವ ಸ್ಥಳಕ್ಕೆ ನಿಯೋಜನೆ ಮಾಡಿಕೊಳ್ಳುವುದರಿಂದ ಲಂಚಾವತಾರ ಪ್ರಾರಂಭವಾಗುತ್ತದೆ. ಶೇ.80ರಷ್ಟು ಭ್ರಷ್ಟಾಚಾರ ಅಧಿಕಾರಿಗಳಿಂದ ನಡೆಯುತ್ತಿದ್ದು, ಇದರಿಂದ ಉಳಿದ ಶೇ.20ರಷ್ಟು ಪ್ರಾಮಾಣಿಕ ಅಧಿಕಾರಿ, ನೌಕರರಿಗೂ ಕಿರುಕುಳ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸ್ವಾತಂತ್ರ್ಯ ಬಂದು 25 ವರ್ಷಗಳವರೆಗೆ ಯಾವುದೇ ಭ್ರಷ್ಟಾಚಾರ ಇರಲಿಲ್ಲ. 70-80ರ ದಶಕದಲ್ಲಿ ಲಂಚಾವತಾರ ಪ್ರಾರಂಭವಾಗಿಯಿತು. ಯಾವುದೇ ಕೆಲಸ ಮಾಡಬೇಕಾದರೂ ಹಣ ಕೊಡಬೇಕು. ಇಲ್ಲದಿದ್ದರೆ ಆಗುವುದಿಲ್ಲ ಎಂಬ ಭಾವನೆ ಸಮಾಜಲ್ಲಿ ನೆಲೆಸಿತ್ತು. ಮೊದಲು ಜನಸಾಮಾನ್ಯರಲ್ಲಿ ಅರಿವು ಮೂಡಿ ಲಂಚ ಕೊಡದೆ ಕೆಲಸ ಮಾಡಿಸಿಕೊಳ್ಳುವಂತಹ ವಾತಾವರಣ ಸೃಷ್ಠಿಯಾಗಬೇಕು ಎಂದರು.
ಲಂಚ ಕೇಳಿದರೆ ಆ ವ್ಯಕ್ತಿ ಬಗ್ಗೆ ಸಂಪೂರ್ಣ ಮಾಹಿತಿ, ಸಾಕ್ಷ್ಯವನ್ನು ಸಂಗ್ರಹಿಸಿ ಲೋಕಾಯುಕ್ತದಂತಹ ಸಂಸ್ಥೆಗಳಿಗೆ ದೂರು ನೀಡಬೇಕು. ಜನಸಾಮಾನ್ಯರು ಪೊಲೀಸ್ ಠಾಣೆ, ಲೋಕಾಯುಕ್ತ ಕಚೇರಿಯಂತಹ ಕಡೆಗಳಿಗೆ ಹೋಗಬೇಕು. ಹೋಗದೆ ಮನೆಯಲ್ಲಿ ಕುಳಿತುಕೊಂಡರೆ ಲಂಚವಿಲ್ಲದೆ ಕೆಲಸ ಆಗುವುದಿಲ್ಲ ಎಂಬಂತಹ ವಾತಾವರಣ ಸೃಷ್ಠಿಯಾಗಿದೆ ಎಂದು ವಿಷಾದಿಸಿದರು.
ಸರ್ಕಾರಿ ಕಚೇರಿಗೆ ಆಗಮಿಸಿದ ಜನಸಾಮಾನ್ಯರು ಅತಿ ಬೇಗನೇ ನಮ್ಮ ಕೆಲಸ ಆಗಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ನೌಕರರು ಟೇಬಲ್ನಿಂದ ಟೇಬಲ್ಗೆ ಬೇಗನೇ ಪೈಲುಗಳನ್ನು ಕಳುಹಿಸಬೇಕು. ಜನರು ಸರ್ಕಾರಿ ಕಚೇರಿಗೆ ಹೋಗಿ ಕೇಳಿದರೆ ಗೊತ್ತಿಲ್ಲ ಎಂದು ಬೇಕೆಂತಲೇ ಸಬೂಬು ಹೇಳುತ್ತಾರೆ. ಇಂತಹವರ ಬಗ್ಗೆ ನಿಗಾ ವಹಿಸಿ ಅವರ ವಿರುದ್ಧ ಲೋಕಾಯುಕ್ತಕ್ಕೆ ಸಾಕ್ಷಿಗಳ ಸಮೇತ ದೂರುಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ನಿವೃತ್ತ ಅಧಿಕಾರಿ ಚಿಕ್ಕತಿಮ್ಮಯ್ಯ, ನಿವೃತ್ತ ವೈದ್ಯಾಧಿಕಾರಿ ಡಾ.ಎಚ್.ಎಂ.ವಿರೂಪಾಕ್ಷ, ಸಂಘಟನೆ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್, ಕಾರ್ಯಾಧ್ಯಕ್ಷ ಸಾಬರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ದಯಾನಂದ್ ಇತರರು ಭಾಗವಹಿಸಿದ್ದರು.