ಯಾವುದೇ ಸಹಕಾರ ಸಂಘಗಳು ಆರ್ಥಿಕವಾಗಿ ಬೆಳೆದು ಅಭಿವೃದ್ಧಿ ಹೊಂದಬೇಕಾದರೆ ಪೂರಕ ತರಬೇತಿ ಪಡೆಯುವುದು ಅತ್ಯಂತ ಅವಶ್ಯಕ. ಸಂಘಗಳಲ್ಲಿ ಯಾವುದೇ ಪಕ್ಷ, ಜಾತಿ, ಮತ ಹಾಗೂ ಧರ್ಮದ ಭೇದಭಾವವಿಲ್ಲದೆ ಹಣಕಾಸು ವ್ಯವಹಾರ ನಡೆಸಿದರೆ ಮಾತ್ರ ಅವು ಉತ್ತಮವಾಗಿ ಬೆಳೆಯಲು ಸಾಧ್ಯ ಎಂದು ಸಹಕಾರ ರತ್ನ ಪುರಸ್ಕೃತ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿ.ಇ. ಅಜ್ಜಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಯಾವುದೇ ಸಹಕಾರ ಸಂಘಗಳು ಆರ್ಥಿಕವಾಗಿ ಬೆಳೆದು ಅಭಿವೃದ್ಧಿ ಹೊಂದಬೇಕಾದರೆ ಪೂರಕ ತರಬೇತಿ ಪಡೆಯುವುದು ಅತ್ಯಂತ ಅವಶ್ಯಕ. ಸಂಘಗಳಲ್ಲಿ ಯಾವುದೇ ಪಕ್ಷ, ಜಾತಿ, ಮತ ಹಾಗೂ ಧರ್ಮದ ಭೇದಭಾವವಿಲ್ಲದೆ ಹಣಕಾಸು ವ್ಯವಹಾರ ನಡೆಸಿದರೆ ಮಾತ್ರ ಅವು ಉತ್ತಮವಾಗಿ ಬೆಳೆಯಲು ಸಾಧ್ಯ ಎಂದು ಸಹಕಾರ ರತ್ನ ಪುರಸ್ಕೃತ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿ.ಇ. ಅಜ್ಜಪ್ಪ ಹೇಳಿದರು.ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ನಗರದ ಐಶ್ವರ್ಯ ನವೀನ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಂಗಳೂರು ವಿಭಾಗದ ಆಯ್ದ ಅಲ್ಪಸಂಖ್ಯಾತರ ಸಹಕಾರ ಸಂಘಗಳ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ಸಂಸ್ಥೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಉತ್ತಮವಾಗಿ ಕೆಲಸ ನಿರ್ವಹಿಸಲು ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎನ್ ತಿಪ್ಪೇಸ್ವಾಮಿ ಮಾತನಾಡಿ, ಸಹಕಾರ ಕ್ಷೇತ್ರವು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ಮಹತ್ವದ ಹೆಬ್ಬಾಗಿಲಾಗಿದೆ. ಸಹಕಾರ ಸಂಘಗಳ ಚುನಾವಣೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಮೀಸಲಾತಿ ನೀಡುವ ಕುರಿತು ಕಾನೂನು ತಿದ್ದುಪಡಿಯಾಗಿದೆ. ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯವರು ಕಾನೂನಾತ್ಮಕವಾಗಿ, ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದರೆ ಯಾವುದೇ ರೀತಿಯ ಬಾಹ್ಯ ಹಸ್ತಕ್ಷೇಪಗಳು ಬರುವುದಿಲ್ಲ ಎಂದು ತಿಳಿಸಿದರು.ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಆರ್.ಮಲ್ಲೇಶಪ್ಪ ಮಾತನಾಡಿ, ಕರ್ನಾಟಕ ಸಹಕಾರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಯೂನಿಯನ್ಗಳು ಮಾತೃ ಸಂಸ್ಥೆಗಳಾಗಿ ಎಲ್ಲಾ ಸಂಘಗಳಿಗೆ ತರಬೇತಿ ನೀಡುತ್ತ ಬಂದಿವೆ. ಚಿತ್ರದುರ್ಗ, ಬೆಂಗಳೂರು, ದಾವಣಗೆರೆ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಆಗಮಿಸಿರುವ ಪ್ರತಿನಿಧಿಗಳು ಸಹಕಾರ ಕಾಯ್ದೆ ಹಾಗೂ ಅಲ್ಪಸಂಖ್ಯಾತರ ನಿಗಮದ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಮತ್ತೋರ್ವ ನಿರ್ದೇಶಕ ಎಚ್.ಎಂ. ಮಂಜುನಾಥಪ್ಪ ಮಾತನಾಡಿ, ಚುನಾಯಿತ ಅಧ್ಯಕ್ಷರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ತೆಗೆದುಕೊಂಡು ಸಂಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಎಚ್.ಎಸ್. ನಾಗರಾಜಯ್ಯ ಅವರು ಸಹಕಾರ ಕಾಯ್ದೆಯ ತಿದ್ದುಪಡಿ ಹಾಗೂ ಮುಖ್ಯಾಂಶಗಳ ಕುರಿತು, ಹಿರಿಯ ಪತ್ರಕರ್ತ ಡಾ.ಎಚ್.ಬಿ ಮಂಜುನಾಥ್ ಅವರು ಸಮಯ ಪ್ರಜ್ಞೆ ಮತ್ತು ಒತ್ತಡ ನಿರ್ವಹಣೆ ಕುರಿತು ಹಾಗೂ ಚಿತ್ರದುರ್ಗ ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕ ಮಹೆಬೂಬ್ ಅಲಿ ಅವರು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸೌಲಭ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಯೂನಿಯನ್ ನಿರ್ದೇಶಕ ಜಿ.ವಿ ಗಂಗಾಧರಪ್ಪ ಉಪಸ್ಥಿತರಿದ್ದರು. ಜಿಲ್ಲಾ ಸಹಕಾರ ಶಿಕ್ಷಕ ನಾಗರಾಜ್ ಪಾಟೀಲ್ ಸ್ವಾಗತಿಸಿದರು. ಯೂನಿಯನ್ ಸಿಇಒ ಜಯಶ್ರೀ ಪಿ. ಹುನಗುಂದ ನಿರೂಪಿಸಿ ವ್ಯವಸ್ಥಾಪಕಿ ಸೌಮ್ಯ ವಂದಿಸಿದರು.