ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿಯೊಂದಕ್ಕೂ ರಾಜಕೀಯ ತರೋದು ಸರಿಯಲ್ಲ. ಸಾವಿನ ಮನೆಯಲ್ಲಿ ರಾಜಕೀಯ ಯಾರಿಗೂ ಒಳ್ಳೆಯದು ಮಾಡಲ್ಲ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ತಿಳಿಸಿದರು.ಬೆಂಗಳೂರು ಕಾಲ್ತುಳಿತ ಪ್ರಕರಣ ಸಂಬಂಧ ಬಿಜೆಪಿ ಪ್ರತಿಭಟನೆ ಕುರಿತು ಗುರುವಾರ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ರಾಜಕೀಯ ಮಾಡೋರಿಗೆ ಕಿವಿಮಾತು ಹೇಳುತ್ತೇನೆ. ನಡೆಯಬಾರದ ಘಟನೆ ನಡೆದು ಹೋಗಿದೆ. ನೊಂದ ಕುಟುಂಬಗಳಿಗೆ ಸಾಂತ್ವನ ಹೇಳುವುದರ ಮೂಲಕ ಜೊತೆಗೆ ನಿಲ್ಲೋದು ನಮ್ಮ ಕರ್ತವ್ಯ ಎಂದರು.
ಆರ್ ಸಿಬಿ ಕರ್ನಾಟಕದ ತಂಡ. ಅದರಲ್ಲಿ ಕನ್ನಡಿಗರು ಇದ್ದರೋ ಇಲ್ವೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದ ಆಟಗಾರರಿಗೂ ಪ್ರೇರಣೆ ಸಿಗುವಂತಾಗಬೇಕು. ವಿಜಯೋತ್ಸವ ಮಾಡಿದ್ದು ಸರಿಯೋ ತಪ್ಪೋ ಎಂಬ ವಿಶ್ಲೇಷಣೆ ಆಮೇಲೆ ಮಾಡೋಣ. ಈಗಾಗಲೇ ಸಿಐಡಿ, ನ್ಯಾಯಾಂಗ ತನಿಖೆಗೆ ಅವಕಾಶ ಮಾಡಿಕೊಟ್ಟಿದೆ. ಸತ್ಯಾಸತ್ಯತೆಗಳು ಹೊರ ಬರುತ್ತವೆ ಎಂದು ಅವರು ಹೇಳಿದರು.ಕೆಲ ಆತುರದ ನಿರ್ಧಾರದಿಂದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಇದು ಸರಿಯೋ ತಪ್ಪೋ ನಂತರ ಚರ್ಚೆ ಮಾಡೋಣ.
ವಿಜಯೋತ್ಸವ ಆಚರಣೆ ವೇಳೆ ನಾವು ಹಿಡಿತದಲ್ಲಿರಬೇಕು. ನಾವು ದಸರಾ ಮಾಡ್ತೇವೆ, ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತಲೂ ಹೆಚ್ಚು ಜನ ಸೇರ್ತಾರೆ ಎಂದರು.ನಮ್ಮಲ್ಲಿ ಇರುವ ಪೊಲೀಸ್ ವ್ಯವಸ್ಥೆ, ಆಡಳಿತ ವ್ಯವಸ್ಥೆ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದನ್ನು ಒಪ್ಪಿಕೊಳ್ಳಬೇಕು. ನಾವು ಮುಂಜಾಗ್ರತೆ ಕೈಗೊಂಡಿದ್ದರೆ ಇಂತಹ ಘಟನೆ ಆಗುತ್ತಿರಲಿಲ್ಲ. ಸಾರ್ವಜನಿಕವಾಗಿ ಉತ್ತರ ಕೊಡುವ ಜವಾಬ್ದಾರಿ ನಮ್ಮದೇ. ಉತ್ತರ ಕೊಡೋದಕ್ಕೆ ನಾವು ಮುಂದಾಗಬೇಕು. ಕಾಂಗ್ರೆಸ್ ಹೈಕಮಾಂಡ್ ಕೂಡ ವಿವರಣೆ ಕೇಳುತ್ತಿದೆ. ಅಂತಿಮವಾಗಿ ಏನು ಹೊರ ಬರುತ್ತೋ ನೋಡೋಣ ಎಂದು ಅವರು ತಿಳಿಸಿದರು. ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಎಂಬ ಸುದ್ದಿಗಾರರ ಪ್ರಶ್ನೆಗೆ ತನ್ವೀರ್ ಸೇಠ್ ಅವರು, ಇಂತಹ ವಿಚಾರಗಳಿಗೆ ನಾನು ಪ್ರತಿಕ್ರಿಯೆ ನೀಡೋದಿಲ್ಲ ಎಂದರು.