ಧಾರವಾಡ:
ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಪೆಟ್ರೋಲ್- ಡೀಸೆಲ್ ದರ ಹೆಚ್ಚಳದ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜಕೀಯ ಲಾಭಕ್ಕಾಗಿ ಬಳಸುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತಿನಲ್ಲಿ ಎಲ್ಲ ರಾಷ್ಟ್ರಗಳು ತೈಲ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ವೇಳೆ ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವುದು ಸರಿಯಲ್ಲ, ಪಾಕಿಸ್ತಾನದಲ್ಲಿ ₹ 400 ಆಗಿದೆ. ನಮ್ಮ ದೇಶದಲ್ಲಿ ಈಗ ₹ 3 ಮಾತ್ರ ಏರಿಕೆಯಾಗಿದೆ ಎಂದರು.
ಜನಸಾಮಾನ್ಯರಿಗೆ ಭಾರ ಆಗದಂತೆ ಬೆಲೆ ಏರಿಕೆಯಾಗಿದೆ ಎಂದು ಸಮರ್ಥಿಕೊಂಡ ಶೆಟ್ಟರ್, ಪ್ರಧಾನಿ ನರೇಂದ್ರ ಮೋದಿ ಜನ ಸಾಮಾನ್ಯರಿಗೆ ಹೋರೆಯಾಗದಂತೆ ಹಾಗೂ ತೈಲ ಕಂಪನಿಗಳು ನಷ್ಟಕ್ಕೆ ಸಿಲುಕಬಾರದು ಎಂದು ಅಲ್ಪ ಪ್ರಮಾಣದಲ್ಲಿ ದರ ಹೆಚ್ಚಳ ಮಾಡಿದ್ದಾರೆ. ದೇಶದ ಭವಿಷ್ಯದ ಹಿತದೃಷ್ಟಿಯಿಂದ ದರ ಹೆಚ್ಚಳ ಅನಿವಾರ್ಯತೆ ಇದೆ ಎಂದು ಹೇಳಿದರು.ಎಲ್ಲವನ್ನೂ ರಾಜಕೀಯವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುವುದು ಸರಿಯಲ್ಲ ಎಂದ ಅವರು, ದೇಶದ ಜನಪ್ರತಿನಿಧಿಗಳ ಭದ್ರತಾ ವಾಹನ ಬಳಕೆ ಕಡಿಮೆ ಮಾಡಲಾಗಿದೆ. ನಾವು ಸುಮ್ಮನೆ ಮಾತನಾಡುವುದಲ್ಲ, ನಾನು ಅವಶ್ಯಕತೆ ಇದ್ದಷ್ಟು ಬಳಸುತ್ತಾ ಬಂದಿದ್ದೇನೆ. ಯಾವ ಸೌಲಭ್ಯವೂ ದುರ್ಬಳಕೆ ಮಾಡುವುದಿಲ್ಲ, ಮಿತವಾಗಿ ಏನು ಮಾಡಬೇಕು ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.