ದಾಳಿಂಬೆ ಬೆಳೆಗಾರರಿಂದ ಶಾಯೋನ ಬಯೋಟಿಕ್ ಕಂಪನಿ ವಿರುದ್ಧ ದೂರು
ಕನ್ನಡಪ್ರಭ ವಾರ್ತೆ ಶಿರಾಕಳಪೆ ದಾಳಿಂಬೆ ಸಸಿ ನೀಡಿದ ಶಾಯೋನ ಬಯೋಟಿಕ್ ಕಂಪನಿ ವಿರುದ್ಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ದಾಳಿಂಬೆ ಬೆಳೆಗಾರ ರೈತರು.ದೂರು ನೀಡಿ ಮಾತನಾಡಿದ ದಾಳಿಂಬೆ ಬೆಳೆಗಾರ ಸೀಗಲಹಳ್ಳಿ ವೀರೇಂದ್ರ ಶಿರಾ ತಾಲೂಕಿನಲ್ಲಿ ಮಳೆಯ ಅಭಾವವಿದ್ದು ಇರುವಂತ ಅಲ್ಪಪ್ರಮಾಣದ ನೀರಿನಲ್ಲಿ ತೋಟಗಾರಿಕೆ ಕೃಷಿ ಮಾಡಬೇಕೆಂದು ರೈತರು ದಾಳಿಂಬೆ ಬೆಳೆಯಲು ಮುಂದಾಗಿ ಶಾಯೋನ ಬಯೋಟಿಕ್ ಕಂಪನಿಯಿಂದ ೧ಲಕ್ಷಕ್ಕೂ ಹೆಚ್ಚು ದಾಳಿಂಬೆ ಸಸಿಗಳನ್ನು ಖರೀದಿ ಮಾಡಿ ಬೆಳೆ ಇಟ್ಟಿದ್ದರು. ಲಕ್ಷಾಂತರ ರುಪಾಯಿ ಖರ್ಚು ಮಾಡಿ ದಾಳಿಂಬೆ ತೋಟ ಬೆಳೆಸಿದ್ದ ರೈತರಿಗೆ ದಾಳಿಂಬೆ ಗಿಡಗಳು ಆಘಾತ ನೀಡಿದ್ದು, ಶಾಯೋನ ಬಯೋಟಿಕ್ ಕಂಪನಿ ನೀಡಿದ ಸಸಿಗಳು ಸಂಪೂರ್ಣ ಕಳಪೆಯಿಂದ ಕೂಡಿವೆ. ಈ ತಳಿಯಲ್ಲಿ ಬಿಟ್ಟ ದಾಳಿಂಬೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ. ರೈತರು ಕಂಗಾಲಾಗಿದ್ದಾರೆ. ಇದರಿಂದ ಶಿರಾ ತಾಲೂಕಿನ ರೈತರಿಗೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ. ತಕ್ಷಣ ಈ ಕಂಪನಿ ವಿರುದ್ಧ ದೂರು ದಾಖಲಿಸಿ ಕಂಪನಿಯಿಂದ ಬೆಳೆ ನಷ್ಟ ಪರಿಹಾರ ಕೊಡಿಸುವುದರ ಜೊತೆಗೆ, ರೈತರಿಗೆ ಮೋಸ ಮಾಡಿದ ಈ ಕಂಪನಿ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ರೈತರಿಗೆ ಮೋಸ ಮಾಡಿದ ಶಾಯೋನ ಬಯೋಟಿಕ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ರೈತರು ಆಗ್ರಹಿಸಿದ್ದಾರೆ. ದಾಳಿಂಬೆ ಬೆಳೆಗಾರರಾದ ಸೀಗಲಹಳ್ಳಿ ವೀರೇಂದ್ರ, ಉದ್ದರಾಮನಹಳ್ಳಿ ಕಾಂತರಾಜು, ಗೋಪಿ ಕುಂಟೆ ನರಸಿಂಹಮೂರ್ತಿ, ಹೊಸಹಳ್ಳಿ ಹನುಮಂತರಾಯಪ್ಪ, ಹೆಂದೊರೆ ಮೋಹನ್, ಮದ್ದೇವಳ್ಳಿ ನಾಗಣ್ಣ ಸೇರಿದಂತೆ ಹಲವಾರು ರೈತರು ಹಾಜರಿದ್ದರು.