ತಾಲೂಕಿನ ಅಂಬಡಬೆಟ್ಟು ಎಂಬಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆ ಬಳಿ ನಿರ್ಮಿಸಲಾಗಿದ್ದ ತಾತ್ಕಾಲಿಕ ರಸ್ತೆ ಇತ್ತೀಚೆಗೆ ಮಳೆಗೆ ಕೊಚ್ಚಿ ಹೋಗಿದ್ದು ಗುರಿಪಳ್ಳ, ನಡ, ಇಂದಬೆಟ್ಟು, ಪಡ್ಪು ಮೊದಲಾದ ಪರಿಸರದ ಸಾವಿರಾರು ಕುಟುಂಬಗಳು ಸಂಪರ್ಕ ಕಳೆದುಕೊಂಡಿದ್ದವು.
ಬೆಳ್ತಂಗಡಿ: ತಾಲೂಕಿನ ಅಂಬಡಬೆಟ್ಟು ಎಂಬಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆ ಬಳಿ ನಿರ್ಮಿಸಲಾಗಿದ್ದ ತಾತ್ಕಾಲಿಕ ರಸ್ತೆ ಇತ್ತೀಚೆಗೆ ಮಳೆಗೆ ಕೊಚ್ಚಿ ಹೋಗಿದ್ದು ಗುರಿಪಳ್ಳ, ನಡ, ಇಂದಬೆಟ್ಟು, ಪಡ್ಪು ಮೊದಲಾದ ಪರಿಸರದ ಸಾವಿರಾರು ಕುಟುಂಬಗಳು ಸಂಪರ್ಕ ಕಳೆದುಕೊಂಡಿದ್ದವು.
ಶಾಸಕ ಹರೀಶ್ ಪೂಂಜ ಅವರು ಸಂಪರ್ಕ ಕಳೆದುಕೊಂಡಿದ್ದ ಊರಿಗೆ ತಕ್ಷಣ ಬೇಕಾದ ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಿನ ಮುತುವರ್ಜಿ ವಹಿಸಿ ಮಾಡಿಕೊಟ್ಟಿದ್ದಾರೆ. ಅಂಬಡಬೆಟ್ಟು ಎಂಬಲ್ಲಿ ಹರಿಯುವ ಹಳ್ಳದ ಹಳೇ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿತ್ತು. ಬಹು ವರ್ಷದ ಬೇಡಿಕೆಯಾದ ಇಲ್ಲಿನ ಕಿರು ಸೇತುವೆಗೆ ಸುಮಾರು ಎರಡು ವರ್ಷದ ಹಿಂದೆ ಅನುಮೋದನೆ ದೊರಕಿ ಅನುದಾನ ಬಿಡುಗಡೆಯ ಹಂತವನ್ನು ತಲುಪಿತ್ತು. ಆದರೆ ರಾಜಕೀಯ ಮೇಲಾಟಗಳಿಂದ ಇದರ ಶಿಲಾನ್ಯಾಸಕ್ಕೆ ತೊಡಕಾಗಿತ್ತು.2.50 ಕೋಟಿ ರು. ವೆಚ್ಚದ ಈ ಕಿರು ಸೇತುವೆಗೆ ಫೆ.10ರಂದು ಕೊನೆಗೂ ಕಾಲ ಕೂಡಿಬಂದು ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು. ಕೊನೆಗೂ ಏ.16ರಂದು ಕಾಮಗಾರಿ ಆರಂಭವಾಯಿತು. ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಇದೀಗ ಕೇವಲ ತಡೆಗೋಡೆಯ ಕೆಲಸ ನಡೆಯುತ್ತಿದೆ. ಇದಕ್ಕೆ ಬೇಕಾದ ಸ್ಲ್ಯಾಬ್ ಅಳವಡಿಸುವ ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ.ಹಳೆ ಸೇತುವೆ ತೆರವುಗೊಳಿಸಿ, ಬದಿಯಲ್ಲಿ ಹಳ್ಳಕ್ಕೆ ಮೋರಿಗಳನ್ನು ಅಳವಡಿಸಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು ಮಂಗಳವಾರ ಸಂಜೆ ಹಳ್ಳದಲ್ಲಿ ಹೆಚ್ಚಿನ ನೀರು ಹರಿದು ಪರಿಣಾಮ ರಸ್ತೆ ಸುಮಾರು ಐದು ಅಡಿ ಆಳದಷ್ಟು ಕೊಚ್ಚಿ ಹೋಗಿ ಜನರು ಕಾಲ್ನಡಿಗೆಯಲ್ಲಿ ಹೋಗಬೇಕಾದರೂ ಅಸಾಧ್ಯ ಸ್ಥಿತಿ ನಿರ್ಮಾಣವಾಗಿತ್ತು.
ಇದೀಗ ಸಮಸ್ಯೆ ಪರಿಹಾರವಾಗಿ ಶಾಸಕ ಹರೀಶ್ ಪೂಂಜ ಹಳ್ಳಕ್ಕೆ ದೊಡ್ಡ ಗಾತ್ರದ ಮೋರಿಗಳನ್ನು ಅಳವಡಿಸಿ ರಸ್ತೆ ನಿರ್ಮಿಸಲು ಸ್ಪಂದಿಸಿದರು. ಇದರಿಂದ ಇಲ್ಲಿನ ಜನರು ಮತ್ತೆ ಈ ರಸ್ತೆಯ ಮೂಲಕ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗಿದೆ.ಅಂಬಡಬೆಟ್ಟುವಿನ ಕಿರು ಸೇತುವೆ ಕಾಮಗಾರಿಯನ್ನು ವೇಗವಾಗಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸದ್ಯ ಇಲ್ಲಿನ ಜನರಿಗೆ ಬದಲಿ ಮಾರ್ಗಗಳಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗಿದ್ದು ಮುಂದಿನ 40ದಿನಗಳ ಅವಧಿಯಲ್ಲಿ ಹೊಸ ಸೇತುವೆಯನ್ನು ಸಂಚಾರಕ್ಕೆ ಸಿದ್ಧಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಇಇ ರಾಘವೇಂದ್ರ ರಾವ್ ತಿಳಿಸಿದ್ದಾರೆ.