ದಾಬಸ್‍ಪೇಟೆ: ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ನೀಡುತ್ತದೆ ಎಂಬ ದೇವನೂರ ಮಹಾದೇವ ಅವರ ಮಾತು ಇಂದಿನ ಕಾಳಸಂತೆಯಲ್ಲಿ ಮಾರಾಟವಾಗುವ ಬಿತ್ತನೆ ಬೀಜಗಳಿಗೆ ಅನ್ವಯವಾಗದು. ಬೇಸಿಗೆ ಸಂಕಷ್ಟದ ನಡುವೆಯೂ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಸೋಂಪುರ ಹೋಬಳಿ ವೀರಸಾಗರ ಗ್ರಾಮದ ರೈತರಿಗೆ ಕಳಪೆ ಬಿತ್ತನೆ ಬೀಜ ಭಾರಿ ಪೆಟ್ಟು ನೀಡಿದೆ. ಎಂಎನ್‌ಸಿ ಕಂಪನಿಯೊಂದು ಪೂರೈಸಿದ ಹುರುಳಿ ಬೀಜಗಳು ಮೊಳಕೆಯೊಡೆಯದೆ ರೈತರು ಬೀದಿಗೆ ಬೀಳುವಂತಾಗಿದೆ.

ಅಶೋಕ್ ಎಂಎನ್‌ಸಿ ಕಂಪನಿಯ ಅಶೋಕ ಎನ್.ಜೆಡ್. ಎಂಬ ತಳಿಯ ಹುರುಳಿ ಬೀಜಗಳನ್ನು ಬಿತ್ತನೆ ಮಾಡಲಾಗಿತ್ತು. ದಾಬಸ್‍ಪೇಟೆಯ ಮಾರುತಿ ಅಗ್ರೋ ಫಾರಂ ಮೂಲಕ ಈ ಬೀಜಗಳನ್ನು ವಿತರಿಸಲಾಗಿತ್ತು. ಬಿತ್ತನೆ ಮಾಡಿ 9 ದಿನ ಕಳೆದರೂ ಒಂದು ಕಾಳು ಕೂಡ ಮೊಳಕೆಯೊಡೆದಿಲ್ಲ. ಇದರಿಂದ ರವಿ ವಿ.ಎನ್ (7 ಕೆಜಿ), ಕರಿಯಣ್ಣ (17 ಕೆಜಿ), ಉಮೇಶ್ (5 ಕೆಜಿ) ಮತ್ತು ಗಿರೀಶ್ (2 ಕೆಜಿ) ರೈತರು ನಷ್ಟ ಅನುಭವಿಸಿದ್ದಾರೆ.

ನಷ್ಟ ಪರಹಾರಕ್ಕೆ ಒತ್ತಾಯ: ರೈತ ರವಿ ಮಾತನಾಡಿ, ಬೆಲೆ ಏರಿಕೆ ಬಿಸಿ ಹಾಗೂ ಕೂಲಿ ಕಾರ್ಮಿಕರ ಕೊರತೆ ನಡುವೆ ಕಷ್ಟಪಟ್ಟು ಕಳೆದ 9 ದಿನಗಳ ಹಿಂದೆ ಅಶೋಕ ಎನ್.ಜೆಡ್. ಎಂಬ ತಳಿಯ ಹುರುಳಿ ಬೀಜ ಬಿತ್ತನೆ ಮಾಡಿದ್ದೆ. ಇಲ್ಲಿಯವರೆಗೂ ಬೀಜ ಮೊಳಕೆ ಒಡೆದಿಲ್ಲ. ಇದರಿಂದ ನನಗೆ 30-40 ಸಾವಿರ ರು.ಗಳವರೆಗೂ ನಷ್ಟವಾಗಿದೆ. ಕಂಪನಿಯವರು ನನಗೆ ನಷ್ಟ ಪರಿಹಾರ ಕಟ್ಟಿಕೊಡಬೇಕು ಎಂದು ಒತ್ತಾಯಿಸಿದರು.

ಕೃಷಿ ಅಧಿಕಾರಿ ವಿರುದ್ಧ ಆಕ್ರೋಶ:

ಸೋಂಪುರ ರೈತ ಕೇಂದ್ರದ ಕೃಷಿ ಸಹಾಯಕ ಅಧಿಕಾರಿ ರವಿಕುಮಾರ್ ಸಹ ರೈತರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಕಚೇರಿಗೆ ಮಾಹಿತಿ ಪಡೆಯಲು ಹೋದರೆ ಅಸಡ್ಡೆಯಿಂದ ಕಾಣುತ್ತಿದ್ದಾರೆ. ರಿಯಾಯಿತಿ ದರದಲ್ಲಿ ಕೃಷಿ ಸಲಕರಣೆಗಳನ್ನು ಕೇಳಿದರೆ ನೀಡದೇ ರೈತರಿಂದಲೇ ಲಂಚ ಕೇಳುತ್ತಾರೆ. ಕೃಷಿಗೆ ಸಂಬಂಧಪಟ್ಟ ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ಮಾಡದೇ ಇರುವುದರಿಂದಲೇ ಸೋಂಪುರ ಹೋಬಳಿಯಲ್ಲಿ ನಕಲ ಬೀಜಗಳು ಮಾರಾಟವಾಗುತ್ತಿವೆ. ಆದರೂ ಕೃಷಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಹಲ ರೈತರಿಂದ ಖರೀದಿ:

ಇದೇ ತಳಿಯ ಬೀಜಗಳನ್ನು ಇನ್ನೂ ಹಲವು ರೈತರು ಖರೀದಿಸಿದ್ದು, ಅವರಿಗೂ ಇದೇ ಪರಿಸ್ಥಿತಿ ಎದುರಾಗುವ ಆತಂಕದಲ್ಲಿದ್ದಾರೆ. ಕೂಡಲೇ ಸಂಬಂಧಪಟ್ಟ ಕಂಪನಿ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಇಂತಹ ಕಳಪೆ ಬೀಜ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ವೀರಸಾಗರದ ಅನ್ನದಾತರು ಒತ್ತಾಯಿಸಿದ್ದಾರೆ.

ಬೇರೆ ಬಿತ್ತನೆ ಬೀಜ ನೀಡುತ್ತೇವೆ: ಅಶೋಕ ಎಂಎನ್‌ಸಿ ಕಂಪನಿಯ ಮಾರುಕಟ್ಟೆ ವ್ಯವಸ್ಥಾಪಕ ಶ್ರೀಧರ್ ಪ್ರತಿಕ್ರಿಯಿಸಿ ಈ ಬಗ್ಗೆ ಪರಿಶೀಲನೆ ನಡೆಸಿ ಕಂಪನಿಯ ಗಮನಕ್ಕೆ ತಂದು ಬೇರೆ ಬಿತ್ತನೆ ಬೀಜ ವಿತರಿಸಲು ಕ್ರಮ ವಹಿಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪೋಟೋ 7 : ಸೋಂಪುರ ಹೋಬಳಿ ವೀರಸಾಗರದಲ್ಲಿ ನಕಲಿ ಹುರುಳಿ ಬಿತ್ತನೆ ಬೀಜ ನೀಡಿದ ಕಂಪನಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಪೋಟೋ 8 :

ರೈತರಿಗೆ ವಿತರಿಸಿದ ನಕಲಿ ಬಿತ್ತನೆ ಬೀಜಗಳು