ಯುಜಿಸಿ ನಿಯಮಗಳಿಂದಾಗಿ ಕಳಪೆ ಗುಣಮಟ್ಟದ ಸಂಶೋಧನೆ

| Published : Nov 19 2025, 01:00 AM IST

ಯುಜಿಸಿ ನಿಯಮಗಳಿಂದಾಗಿ ಕಳಪೆ ಗುಣಮಟ್ಟದ ಸಂಶೋಧನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ನಿಯಮಗಳಿಂದ ವಿ.ವಿ.ಗಳಲ್ಲಿ ಕಳಪೆ ಗುಣಮಟ್ಟದ ಸಂಶೋಧನೆಗಳು ನಡೆಯುತ್ತಿವೆ ಎಂದು ಇತಿಹಾಸ ಸಂಶೋಧಕ ಡಾ. ಡಿ. ಎನ್. ಯೋಗೀಶ್ವರಪ್ಪ ವಿಷಾದಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ನಿಯಮಗಳಿಂದ ವಿ.ವಿ.ಗಳಲ್ಲಿ ಕಳಪೆ ಗುಣಮಟ್ಟದ ಸಂಶೋಧನೆಗಳು ನಡೆಯುತ್ತಿವೆ ಎಂದು ಇತಿಹಾಸ ಸಂಶೋಧಕ ಡಾ. ಡಿ. ಎನ್. ಯೋಗೀಶ್ವರಪ್ಪ ವಿಷಾದಿಸಿದರು.

ನಗರದ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಹೆರಿಟೇಜ್ ಕ್ಲಬ್ ಮತ್ತು ಐತಿಹಾಸಿಕ ದಾಖಲೆಗಳ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿ ಪರಂಪರೆ ಅತ್ಯಂತ ಪ್ರಾಚೀನತೆಯನ್ನು ಹೊಂದಿದೆ. ನಮ್ಮ ರಾಜ್ಯದಲ್ಲಿ ಹದಿನಾಲ್ಕು ವಿಶ್ವವಿದ್ಯಾನಿಲಯಗಳಿದ್ದರೂ ಇತಿಹಾಸದಲ್ಲಿ ನಡೆಯುವ ಸಂಶೋಧನೆಗಳು ಕೇವಲ ಬಡ್ತಿಗಾಗಿ ನಡೆಸುವ ಸಂಶೋಧನೆಗಳಾಗಿದ್ದು, ಅವುಗಳ ಗುಣಮಟ್ಟ ಕಡಿಮೆ ಇರುವುದರಿಂದ ಅವುಗಳನ್ನು ಪ್ರಕಟಿಸುವ ಗೋಜಿಗೆ ಹೋಗುವುದಿಲ್ಲ. ತುಮಕೂರು ಜಿಲ್ಲೆಯಲ್ಲಿ ಸಂಶೋಧನೆಗೆ ವಿಪುಲವಾದ ಅವಕಾಶಗಳಿವೆ ಇವುಗಳನ್ನು ಯಾರೂ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಕೋಟಿ ಕೊತ್ತಲಗಳು ಕೆರೆಗಳಲ್ಲಿನ ನೀರಿನ ಹಂಚಿಕೆ ದೇವಾಲಯ ವಾಸ್ತುಶಿಲ್ಪ ಶಾಸನ ವೀರಗಲ್ಲುಗಳಂತಹ ಐತಿಹಾಸಿಕ ಆಕರಗಳ ಭಂಡಾರವೇ ಈ ಜಿಲ್ಲೆಯಲ್ಲಿದೆ. ಪ್ರಾಗಿತಿಹಾಸದ ನೆಲೆಗಳು ಇಲ್ಲಿ ಹೇರಳವಾಗಿವೆ. ಇದುವರೆಗೂ ವಿಜಯನಗರದ ಚಕ್ರವರ್ತಿ ಕೃಷ್ಣದೇವರಾಯನ ಮರಣದ ನಿಖರವಾದ ದಾಖಲೆ ದೊರೆತಿರಲಿಲ್ಲ ಅದು ಈಗ ತುಮಕೂರು ನಗರದ ಸಮೀಪ ಇರುವ ಹೊನ್ನೇನಹಳ್ಳಿಯಲ್ಲಿ ದೊರೆತಿದ್ದು ನಾಡಿನ ಇತಿಹಾಸಕಾರರ ಗಮನವನ್ನು ಸೆಳೆದಿದೆ ಎಂದರು.

ವಿದ್ಯಾರ್ಥಿ ಜೀವನದಲ್ಲೇ ಸಂಶೋಧನಾ ಹವ್ಯಾಸ ರೂಢಿಸಿಕೊಂಡರೆ ಮುಂದಿನ ದಿನಗಳಲ್ಲಿ ನಮಗೆ ಅನೇಕ ಹೊಸ ಹೊಸ ವಿಚಾರಧಾರೆಗಳಿಗೆ ಆಧಾರವಾಗುವ ಪಾರಂಪರಿಕ ಸಂಗತಿಗಳನ್ನು ತಿಳಿಯಲು ಸಹಾಯವಾಗುತ್ತದೆ. ಕಾಲಗರ್ಭದಲ್ಲಿ ಹುದುಗಿ ಹೋಗಿರುವ ಅನೇಕ ಸಂಗತಿಗಳು ಬೆಳಕಿಗೆ ಬರುವುದರ ಜೊತೆಗೆ ಸಮಾಜಕ್ಕೆ ಉಪಯುಕ್ತ ಸಂಗತಿಗಳನ್ನು ಒದಗಿಸಿದ ಸಂತೃಪ್ತಿ ಸಂಶೋಧಕನಿಗೆ ನೀಡುತ್ತದೆ. ಜಗತ್ತಿನಲ್ಲಿ ಮೊದಲಿಗೆ ಕಬ್ಬಿಣದ ಮಹತ್ವ ಕಂಡುಹಿಡಿದವರು ಭಾರತೀಯರು ಎರಡನೇ ಚಂದ್ರಗುಪ್ತ ಮೌರ್ಯ ದೆಹಲಿಯಲ್ಲಿ ಸ್ಥಾಪಿಸಿರುವ ಕಬ್ಬಿಣದ ಸ್ತಂಭಕ್ಕೆ ೨೩೦೦ ವರ್ಷಗಳ ಇತಿಹಾಸವಿದೆ ಇಂದಿಗೂ ಅದು ತುಕ್ಕು ಹಿಡಿದಿಲ್ಲ ಈ ಕುರಿತು ದೇಶವಿದೇಶಗಳಲ್ಲಿ ಅನೇಕ ಸಂಶೊಧನೆಗಳು ನಡೆದಿವೆ. ಆದರೂ ಇದರ ಕುರಿತು ಭಾರತದಲ್ಲಿ ಹೆಚ್ಚು ಸಂಶೋಧನೆಗಳಾಗಿಲ್ಲ ಈ ಸ್ತಂಭ ಭಾರತೀಯರ ತಂತ್ರಜ್ಞಾನದ ನಿಪುಣತೆಗೆ ಸಾಕ್ಷಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಕೆ ದಕ್ಷಿಣಮೂರ್ತಿಯವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಊರಿನ ಬಗ್ಗೆ ಅಲ್ಲಿನ ಹಿರಿಯರು ಹೇಳುವ ವಿಚಾರಗಳನ್ನು ಸಂಗ್ರಹಿಸಿ ಪ್ರಬಂಧ ರಚನೆ ಮಾಡಿದರೆ ಅದು ನಿಮಗೆ ಸಂಶೋಧನೆಯಲ್ಲಿ ಆಸಕ್ತಿ ಮೂಡಿಸುತ್ತದಲ್ಲಿದೆ ಭವಿಷ್ಯಕ್ಕೆ ಅದು ಆಧಾರವಾಗಿ ಪರಿಗಣಿತವಾಗುತ್ತದೆ ಎಂದರು.

ವೇದಿಕೆಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾದ ಪ್ರೊ. ಕೆ ಪಿ ಶೀಲಾ ಹಾಜರಿದ್ದರು ಇತಿಹಾಸ ವಿಭಾಗದ ಮುಖ್ಯಸ್ಥ ಬಿ ರಮೇಶ್ ಸ್ವಾಗತಿಸಿದರು ಪ್ರೊ. ಲತಾ ಎಸ್ ವಂದಿಸಿದರು ಚಂದ್ರಿಕಾ ಹೆಚ್ ಎನ್ ನಿರೂಪಿಸಿದರು.