ಬಡಕುಟುಂಬದಲ್ಲಿ ಜನಿಸಿದ ಅಂಬೇಡ್ಕರ್‌ರವರು ಬಾಲ್ಯದಿಂದಲೇ, ಸಾಮಾಜಿಕ ಅಸಮಾನತೆ, ಅಸ ಸ್ಪೃಶ್ಯತೆಯ ಅವಮಾನ ಕಂಡು ಬೆಳೆದರು. ಉತ್ತಮ ವಿದ್ಯಾರ್ಜನೆ ಮೂಲಕ ದೇಶಕ್ಕೆ ಉತ್ತಮ ಸಂವಿಧಾನ ನೀಡಿ ಶಿಲ್ಪಿ ಎನಿಸಿದ್ದಾರೆ. ಈ ಮಹಾನ್ ಸಾಧಕರ ಆದರ್ಶ ಪಾಲಿಸುವ ಪ್ರತಿಜ್ಞೆ ಮಾಡೋಣ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಬಾಬಾ ಸಾಹೇಬರ ಭಾವಚಿತ್ರವನ್ನು ಬೆಳ್ಳಿ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು.

ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರವಾಸಿ ಮಂದಿರದ ಆವರಣದಿಂದ ಸಾಗಿದ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಮೇಳೈಸಿದ್ದವು. ಉರಿ ಬಿಸಿಲಿನಲ್ಲಿಯೂ ಕೂಡಾ ಸಾವಿರಾರು ಜನರು ಪಾಲ್ಗೊಂಡಿದ್ದರು.

ಶಾಸಕ ಎಚ್.ಟಿ.ಮಂಜು, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್ ನೇತೃತ್ವದಲ್ಲಿ ತಮಟೆ ಸದ್ದಿಗೆ ನೂರಾರು ಜನರು ಹೆಜ್ಜೆ ಹಾಕಿದರು.

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಶಾಸಕ ಎಚ್.ಟಿ.ಮಂಜು ಉದ್ಘಾಟಿಸಿದರು.

ಕಾರ್ಯಕ್ರಮದ ಸಂಘಟಕರು ನಾಡಗೀತೆಯ ನಂತರ ರೈತಗೀತೆ ಹಾಡಿಸುವ ವೇಳೆ ಮುಂಭಾಗದಲ್ಲಿದ್ದ ದಲಿತ‌ ಮುಖಂಡರು ಮೊದಲು ಅಂಬೇಡ್ಕರ್ ಗೀತೆಯನ್ನು ಹಾಡಿ ಎಂದು ಸ್ವಯಂ ಅವರೆ ವೇದಿಕೆಯೇರಿ ಹಾಡಲು ಶುರುವಿಟ್ಟುಕೊಂಡರು. ನಂತರ ಶಾಸಕರು ಮಧ್ಯೆ ಪ್ರವೇಶಿಸಿ ಇದು ರಾಜಕೀಯ ವೇದಿಕೆಯಲ್ಲ. ಎಲ್ಲರೂ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋಣ ಎಂದು ಹೇಳಿ ಸಮಾಧಾನಗೊಳಿಸಿದರು.‌

ಬಡಕುಟುಂಬದಲ್ಲಿ ಜನಿಸಿದ ಅಂಬೇಡ್ಕರ್‌ರವರು ಬಾಲ್ಯದಿಂದಲೇ, ಸಾಮಾಜಿಕ ಅಸಮಾನತೆ, ಅಸ ಸ್ಪೃಶ್ಯತೆಯ ಅವಮಾನ ಕಂಡು ಬೆಳೆದರು. ಉತ್ತಮ ವಿದ್ಯಾರ್ಜನೆ ಮೂಲಕ ದೇಶಕ್ಕೆ ಉತ್ತಮ ಸಂವಿಧಾನ ನೀಡಿ ಶಿಲ್ಪಿ ಎನಿಸಿದ್ದಾರೆ. ಈ ಮಹಾನ್ ಸಾಧಕರ ಆದರ್ಶ ಪಾಲಿಸುವ ಪ್ರತಿಜ್ಞೆ ಮಾಡೋಣ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕದಂಬ ಪಿಯು ಕಾಲೇಜಿನ ಉಪನ್ಯಾಸಕ ಕರುಣಾನಿಧಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಜಿಪಂ ಮಾಜಿ ಸದಸ್ಯ ಡಾ.ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಕ್ಕಿಹೆಬ್ಬಾಳು ರಘು, ಟಿಎಪಿಸಿಎಂಎಸ್ ನಿರ್ದೇಶಕ ಮಲ್ಲೇನಹಳ್ಳಿ ಮೋಹನ್, ದಿಶಾ ಸಮಿತಿ ಸದಸ್ಯ ನರಸನಾಯಕ್, ತಾಪಂ ಇಒ ಕೆ.ಸುಷ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಪುರಸಭೆ ಮುಖ್ಯಾಧಿಕಾರಿ ಅಶೋಕ್, ದಲಿತ ಮುಖಂಡ ಬಸ್ತಿರಂಗಪ್ಪ ಸೇರಿದಂತೆ ಬಹುತೇಕ ದಲಿತ ಮುಖಂಡರು ಇದ್ದರು.