ಸ್ವಾಧೀನಾನುಭವ ಪ್ರಮಾಣ ಪತ್ರ ಕಡ್ಡಾಯ

| Published : May 10 2025, 01:01 AM IST

ಸಾರಾಂಶ

ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ಸ್ವಾಧೀನಾನುಭವ ಪ್ರಮಾಣ ಪತ್ರ, ವಾಸಯೋಗ್ಯ ಪ್ರಮಾಣ ಪತ್ರ ಪಡೆಯಲು ಕಡ್ಡಾಯವೆಂದು ಮಹಾನಗರಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ಸ್ವಾಧೀನಾನುಭವ ಪ್ರಮಾಣ ಪತ್ರ, ವಾಸಯೋಗ್ಯ ಪ್ರಮಾಣ ಪತ್ರ ಪಡೆಯಲು ಕಡ್ಡಾಯವೆಂದು ಮಹಾನಗರಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಸೂಚನೆ ನೀಡಿದ್ದಾರೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬೆಳವಣಿಗೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಸುತ್ತೋಲೆ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ಯಾವುದೇ ಕಟ್ಟಡ ನಿರ್ಮಾಣದಾರರು, ಮಾಲೀಕರು ತಮ್ಮ ಸ್ವತ್ತಿಗೆ ಸಂಬಂಧಿಸಿದಂತೆ ಪಾಲಿಕೆಯಿಂದ ಅಗತ್ಯ ಮಂಜೂರಾತಿ ಪರವಾನಗಿ ಪಡೆದು ಅದರಂತೆ ಕಟ್ಟಡ ನಿರ್ಮಾಣ ಕೈಗೊಂಡು ಪೂರ್ಣಗೊಂಡ ನಂತರ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ಪಡೆಯಬೇಕು. ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆದ ನಂತರವಷ್ಟೇ ಮಾಲೀಕರು, ಫಲಾನುಭವಿಯು ಕಟ್ಟಡದಲ್ಲಿ ವಾಸಿಸುವ ಬಗ್ಗೆ ಮುಚ್ಚಳಿಕೆ ಪ್ರಮಾಣ ಪತ್ರವನ್ನು ಪಾಲಿಕೆಗೆ ಸಲ್ಲಿಸತಕ್ಕದ್ದು.

ಕಟ್ಟಡ ನಿರ್ಮಾಣದಾರರು, ಮಾಲೀಕರು ಸ್ವತ್ತಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಿಂದ ಮಂಜೂರಾದ ಕಟ್ಟಡ ನಕ್ಷೆಯ ಪ್ರತಿಯನ್ನು ನಿರ್ಮಾಣ ಸ್ಥಳದಲ್ಲಿ ಪ್ರದರ್ಶಿಸಬೇಕು. ಅನುಮೋದಿತ ಕಟ್ಟಡ ನಕ್ಷೆಯನುಸಾರ ಕಟ್ಟಡವನ್ನು ನಿರ್ಮಿಸಲಾಗುತ್ತಿದೆಯೇ ಎಂಬ ಬಗ್ಗೆ ಮಹಾನಗರಪಾಲಿಕೆ ವಾರ್ಡ್ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ ಕಟ್ಟಡದ ಪ್ರಾರಂಭಿಕ ತಳಪಾಯ ಹಂತ, ಬೇಸ್‌ಮೆಂಟ್ ಹಂತ ಹಾಗೂ ಛಾವಣಿ ಹಂತದಲ್ಲಿ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲಾಗುವುದು. ಒಂದು ವೇಳೆ ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ ನಿರ್ಮಾಣ ಕಾರ್ಯವನ್ನು ಕೈಗೊಂಡಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಹಾಗೂ ಅಲ್ಲಿಯವರೆಗೆ ವಾಸಯೋಗ್ಯ ಪ್ರಮಾಣ ಪತ್ರವನ್ನು ನೀಡಲು ಅವಕಾಶವಿಲ್ಲ.ಕಟ್ಟಡದ ನಿರ್ಮಾಣದ ಮುಕ್ತಾಯ, ವಾಸಯೋಗ್ಯ ಪ್ರಮಾಣ ಪತ್ರ ಪಡೆದ ನಂತರವಷ್ಟೇ ಅಗತ್ಯ ಸೇವೆಗಳಾದ ವಿದ್ಯುತ್, ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕವನ್ನು ನೀಡಲಾಗುವುದು. ಕಟ್ಟಡ ಮಾಲೀಕರು/ನಿರ್ಮಾಣದಾರರು ಕಟ್ಟಡ ವಾಸಯೋಗ್ಯ ಪ್ರಮಾಣ ಪತ್ರ ಪಡೆದ ನಂತರವಷ್ಟೇ, ಸದರಿ ಕಟ್ಟಡದಲ್ಲಿ ಯಾವುದೇ ವ್ಯವಹಾರ/ವ್ಯಾಪಾರ ನಡೆಸಲು ಅನುಮತಿ ನೀಡಲಾಗುವುದು.ಕಟ್ಟಡ ನಿರ್ಮಾಣದಾರರು/ಮಾಲೀಕರು ಯಾವುದೇ ಕಟ್ಟಡವನ್ನು ನಿರ್ಮಾಣ ಮಾಡುವ ಮುನ್ನ ಮಹಾನಗರಪಾಲಿಕೆಯಿಂದ ಅಗತ್ಯ ಪರವಾನಗಿಯನ್ನು ಪಡೆದುಕೊಂಡು ಅನುಮೋದಿತ ಕಟ್ಟಡ ನಕ್ಷೆಯನುಸಾರವೇ ನಿರ್ಮಾಣವನ್ನು ಕೈಗೊಂಡು, ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರ ಮಹಾನಗರಪಾಲಿಕೆಯಿಂದ ವಾಸಯೋಗ್ಯ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳತಕ್ಕದ್ದು. ಇಲ್ಲದಿದ್ದಲ್ಲಿ ಸದರಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ, ನೀರು ಸರಬರಾಜು ಹಾಗೂ ಒಳಚಂಡಿ ಸಂಪರ್ಕ ನೀಡಲಾಗುವುದಿಲ್ಲವೆಂದು ಅವರು ತಿಳಿಯಪಡಿಸಿದ್ದಾರೆ.ಮಹಾನಗರಪಾಲಿಕೆ ವ್ಯಾಪ್ತಿಯ ಇ-ಆಸ್ತಿ(ಎ-ರಿಜಿಸ್ಟರ್ ಹಾಗೂ ಬಿ-ರಿಜಿಸ್ಟರ್)ಗೆ ಸಂಬಂಧಿಸಿದಂತೆ ಇ-ಆಸ್ತಿ ವರ್ಗಾವಣೆ ಶುಲ್ಕ ಹಾಗೂ ಕಂದಾಯ ಪಾವತಿಗಾಗಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗುವುದು. ವಿಶೇಷ ಕೌಂಟರ್‌ನಲ್ಲಿ ರಜಾ ದಿನಗಳಾದ ಮೇ 10 ಹಾಗೂ 11ರ ಬೆಳಿಗ್ಗೆ 10 ರಿಂದ ಸಂಜೆ 5:30 ಗಂಟೆವರೆಗೆ ಕಂದಾಯ ಶಾಖೆಯ ಎಲ್ಲಾ ಹಂತದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.