ಸಾರಾಂಶ
ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹರಿದಾಡಿದ ಬೆನ್ನಲ್ಲೇ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ಶಾಸಕ ಬಸವರಾಜ ಶಿವಣ್ಣನವರ ಭೂಮಿಪೂಜೆ ಕಾರ್ಯಕ್ರಮಕ್ಕೆ ನುಗ್ಗಿ ಘೇರಾವ್ ಹಾಕಿ ಅಡ್ಡಿಪಡಿಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆಯಿತು.
ಅಗಲೀಕರಣಕ್ಕೆ ಕಳೆದ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಕೆಲ ದಿನಗಳಲ್ಲೇ ಅಗಲೀಕರಣ ಪ್ರಕ್ರಿಯೆ ಆರಂಭವಾಗುತ್ತಿರುವ ಬೆನ್ನಲ್ಲೇ ಪೋಸ್ಟರ್ವೊಂದು ಅಗಲೀಕರಣ ಹೋರಾಟ ಸಮಿತಿ ಹಾಗೂ ಶಾಸಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.ಪೋಸ್ಟರ್ ತಂದ ಕುತ್ತು: ನಗರ ಆಶ್ರಯ ಸಮಿತಿ ಸದಸ್ಯ ಗಿರೀಶ ಇಂಡಿಮಠ ಎಂಬ ವ್ಯಕ್ತಿ ಶಾಸಕರ ಭಾವಚಿತ್ರ ಬಳಸಿ, ಗಜೇಂದ್ರಗಡ - ಸೊರಬ-136 ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿ ಕಿ.ಮೀ. 237.97ರಿಂದ 238.90 ಹಾಗೂ 249.20 ರಿಂದ 249.40 ಎಂದು ನಮೂದಿಸಿದ್ದೇ ಅಗಲೀಕರಣ ಹೋರಾಟ ಸಮಿತಿ ಸೇರಿದಂತೆ ಸಾರ್ವಜನಿಕರನ್ನು ಕೆರಳುವಂತೆ ಮಾಡಿತು.
ಭೂಮಿಪೂಜೆಗೆ ಅಡ್ಡಿ: ಭೂಮಿಪೂಜೆ ಸ್ಥಳಕ್ಕೆ ತೆರಳಿದ ಸದಸ್ಯರು ಯಾವುದೇ ಕಾರಣಕ್ಕೂ ಭೂಮಿಪೂಜೆ ಮಾಡಲು ಬಿಡುವುದಿಲ್ಲ. ವೈರಲ್ ಆಗಿರುವ ಪೋಸ್ಟರ್ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಬಿಗಿಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಅಗಲೀಕರಣ ಹೋರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ, ಈ ಕಾರ್ಯಕ್ರಮಕ್ಕೂ ವೈರಲ್ ಆಗಿರುವ ಪೋಸ್ಟರ್ಗೂ ಸಂಬಂಧವಿದೆಯೇ? ಹಾಗಿದ್ದರೆ ಮುಖ್ಯರಸ್ತೆ ಅಗಲೀಕರಣದ ವಿಷಯದ ಕುರಿತು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಬಳಿಕವೇ ಭೂಮಿಫೂಜೆ ಮಾಡುವಂತೆ ಬಿಗಿಪಟ್ಟು ಹಿಡಿದರು.ಯಾರು ಶಾಸಕರು?: ಶಾಸಕರ ಮಾತಿನ ಮೇಲೆ ವಿಶ್ವಾಸವಿಟ್ಟು ಅಗಲೀಕರಣ ಹೋರಾಟ ಸಮಿತಿ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದೆ. ಆದರೆ ಇವತ್ತಿನ ಘಟನೆ ಹೋರಾಟ ಸಮಿತಿ ಸದಸ್ಯರು ದಿಗ್ಭ್ರಮೆ ಮೂಡುವಂತೆ ಮಾಡಿದ್ದಲ್ಲದೇ ನಮ್ಮನ್ನು ಕೆರಳುವಂತೆ ಮಾಡಿದೆ. ಅಗಲೀಕರಣ ವಿಷಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಉದ್ದೇಶ ತಿಳಿಯುತ್ತಿಲ್ಲ, ಪ್ರತಿ ಪೋಸ್ಟರಗಳಲ್ಲಿಯೂ ಶಾಸಕರಿಗಿಂತ ತಮ್ಮದೇ ಪೋಟೋಗಳನ್ನು ದೊಡ್ಡದು ಮಾಡಿ ಹಾಕಿಕೊಳ್ಳುತ್ತಿರುವುದು ಸ್ಥಳೀಯ ಶಾಸಕರು ಯಾರೆಂಬ ಅನುಮಾನ ಮೂಡುವಂತಾಗಿದೆ. ಕೂಡಲೇ ಇಂತಹ ಘಟನೆಗಳಿಗೆ ಬ್ರೇಕ್ ಹಾಕದಿದ್ದಲ್ಲಿ ಶಾಸಕರು ಮುಜುಗುರಕ್ಕೆ ಒಳಗಾಗಲಿದ್ದಾರೆ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಪೋಸ್ಟರ್ಗಳಲ್ಲಿ ಹಾಕಿದಂತೆ ಈ ಭೂಮಿಪೂಜೆ ಕಾರ್ಯಕ್ರಮವಲ್ಲ, ಬದಲಾಗಿ ಅಪಘಾತಗಳನ್ನು ತಪ್ಪಿಸಿ ಸುರಕ್ಷಿತ ವೃತ್ತಗಳನ್ನು ನಿರ್ಮಿಸುವ ಉದ್ದೇಶದಿಂದ ಸೇಫ್ಟಿ ಸರ್ಕಲ್ ನಿರ್ಮಾಣದ ಯೋಜನೆಯಡಿಯಲ್ಲಿ ಪಟ್ಟಣದ ಮೂರು ಸರ್ಕಲ್ಗಳನ್ನು ಅಭಿವೃದ್ಧಿಪಡಿಸಲು ಅನುದಾನ ತಂದಿದ್ದೇನೆ. ಹೀಗಾಗಿ ತಮ್ಮೆಲ್ಲರಿಗೂ ತಪ್ಪು ಗ್ರಹಿಕೆ ಆಗಿದ್ದು ಮುಂದಿನ ಬಾರಿ ಹೀಗಾಗದಂತೆ ಎಚ್ಚರಿಕೆ ವಹಿಸಲಿದ್ದೇನೆ. ಅಗಲೀಕರಣ ವಿಚಾರದಲ್ಲಿ ಯಾರೊಂದಿಗೂ ರಾಜೀ ಮಾಡಿಕೊಳ್ಳುವ ಪ್ರಶ್ನೆಯಿಲ್ಲ. ನನ್ನ ಅವಧಿಯಲ್ಲೇ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೋರಾಟಗಾರರಿಗೆ ತಿಳಿಸಿದರು.ನೀವು ಅನುಮತಿ ನೀಡಿದರೆ ಮಾತ್ರ ಭೂಮಿಪೂಜೆ ನೆರವೇರಿಸುತ್ತೇನೆ. ಇಲ್ಲವಾದಲ್ಲಿ ಇಲ್ಲಿಂದ ನಿರ್ಗಮಿತ್ತೇನೆ, ನನ್ನ ಮಾತುಗಳ ಮೇಲೆ ವಿಶ್ವಾಸವಿಟ್ಟು ಭೂಮಿಪೂಜೆಗೆ ಅವಕಾಶ ಮಾಡಿಕೊಡುವಂತೆ ಹೋರಾಟಗಾರರ ಮನವೊಲಿಸಿದರಲ್ಲದೇ ಭೂಮಿ ಫೂಜೆ ನೆರವೇರಿಸಿ ಅಲ್ಲಿಂದ ನಿರ್ಗಮಿಸಿದರು.
ಅಗಲೀಕರಣ ಹೋರಾಟ ಸಮಿತಿಯ ಪಾಂಡು ಸುತಾರ, ಹರೀಶಕುಮಾರ ರಿತ್ತಿ, ಶಿವಕುಮಾರ ಕಲ್ಲಾಪೂರ, ಬಸವರಾಜ ಸಂಕಣ್ಣನವರ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))