ದಕ್ಷ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್ ಆರಂಭ:ಎಂಬಿಎ, ಎಂಸಿಎ ತರಗತಿಗಳಿಗೆ ಪ್ರೊ.ಡಿ. ಆನಂದ್ ಚಾಲನೆ

| Published : Jan 05 2025, 01:34 AM IST

ದಕ್ಷ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್ ಆರಂಭ:ಎಂಬಿಎ, ಎಂಸಿಎ ತರಗತಿಗಳಿಗೆ ಪ್ರೊ.ಡಿ. ಆನಂದ್ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಅತಿಥಿಯಾಗಿ ಆಲ್ಟೋಸ್ ಕಂಪ್ಯೂಟಿಂಗ್ ಇಂಟಿಯಾ ಲಿಮಿಟೆಡ್ನ ಪ್ರಧಾನ ವ್ಯವಸ್ಥಾಪಕ ಸಂಜಯ್ ವಿರ್ನಾವೆ ಮಾತನಾಡಿ, ನಾವು ಬೇರೊಬ್ಬರನ್ನು ಸಂಧಿಸಿದಾಗ, ಅವರೊಂದಿಗೆ ಮಾತನಾಡುವಾಗ ನಮ್ಮ ಸಂವಹನ ಅಥವಾ ಪ್ರಶ್ನೆಗಳು ಸರಿ ಇರದಿದ್ದರೆ ಉದ್ದೇಶ ಮತ್ತು ಪರಸ್ಪರ ಹೊಂದಾಣಿಕೆ ಹಾಳಾಗಬಹುದು ಎಂದು ತಮ್ಮ ವೃತ್ತಿ ಬದುಕಿನ ಘಟನೆಯೊಂದನ್ನು ಉದಾಹರಿಸಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಹೂಟಗಳ್ಳಿಯಲ್ಲಿರುವ ದಕ್ಷ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಬಿಎ, ಎಂಸಿಎ ಕೋರ್ಸ್ಗಳಿಗೆ ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಡಿ. ಆನಂದ್ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, 21ನೇ ಶತಮಾನವು ಪದವೀಧರ ಕ್ಷೇತ್ರಕ್ಕೆ ಬಹು ದೊಡ್ಡ ಸವಾಲನ್ನೆ ಒಡ್ಡಿದೆ. ನೀವು ಸೇರಿರುವ ಕೋರ್ಸ್ ಯಾವುದೇ ಇರಲಿ. ಆದರೆ, ಸೇರಿದ ಬಳಿಕ ನಿಮ್ಮ ಗುರಿ ಏನು ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಇಂದು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಸೂಕ್ತವಾದ ಕ್ಷೇತ್ರದಲ್ಲಿ ಗುರುತಿಸಿಕೊಂಡು ಮುಕ್ತವಾಗಿ ಬೆಳೆಯಿರಿ ಎಂದು ಶುಭ ಕೋರಿದರು. ಎಲ್ಲೇ ಆಗಲಿ, ಯಾವುದಕ್ಕೇ ಆಗಲಿ ಹಿಂಜರಿಕೆ ಬಿಡಿ. ಕನಸುಗಾರರಾಗಿರಿ. ದೊಡ್ಡ ದೊಡ್ಡ ಆಲೋಚನೆಗಳತ್ತ ಗಮನ ಹರಿಸಿ. ಯಾವುದೇ ಕಾರಣಕ್ಕೂ ನಕಾರಾತ್ಮಕವಾಗಿ ಯೋಚಿಸುವುದನ್ನು ಬಿಟ್ಟುಬಿಡಿ. ತರಗತಿಯಲ್ಲಿ ಕೇಳಿದ್ದರ ಜತೆಗೆ ಗ್ರಂಥಾಲಯಕ್ಕೆ ಹೋಗಿ ಅಧ್ಯಯನ ಮಾಡುವುದನ್ನು ರೂಢಿಸಿಕೊಳ್ಳಿ. ಮನೆಯಲ್ಲಿದ್ದಾಗ ಈ ಅರಿವನ್ನು ಬೆಳೆಸಲು ಶ್ರಮಿಸಿ ಎಂದು ಅವರು ತಿಳಿಸಿದರು.

ಮುಖ್ಯಅತಿಥಿಯಾಗಿ ಆಲ್ಟೋಸ್ ಕಂಪ್ಯೂಟಿಂಗ್ ಇಂಟಿಯಾ ಲಿಮಿಟೆಡ್ನ ಪ್ರಧಾನ ವ್ಯವಸ್ಥಾಪಕ ಸಂಜಯ್ ವಿರ್ನಾವೆ ಮಾತನಾಡಿ, ನಾವು ಬೇರೊಬ್ಬರನ್ನು ಸಂಧಿಸಿದಾಗ, ಅವರೊಂದಿಗೆ ಮಾತನಾಡುವಾಗ ನಮ್ಮ ಸಂವಹನ ಅಥವಾ ಪ್ರಶ್ನೆಗಳು ಸರಿ ಇರದಿದ್ದರೆ ಉದ್ದೇಶ ಮತ್ತು ಪರಸ್ಪರ ಹೊಂದಾಣಿಕೆ ಹಾಳಾಗಬಹುದು ಎಂದು ತಮ್ಮ ವೃತ್ತಿ ಬದುಕಿನ ಘಟನೆಯೊಂದನ್ನು ಉದಾಹರಿಸಿ ಹೇಳಿದರು.

ನೀವು ಇಲ್ಲಿರುವ ಮುಂದಿನ ಎರಡು ವರ್ಷಗಳಲ್ಲಿ ನಿಮ್ಮ ಕುಟುಂಬದವರನ್ನು ನೆನೆದು ಮುಂದೆ ಬನ್ನಿ. ಪೋಷಕರ ಶ್ರಮಕ್ಕೆ ನಿಮ್ಮ ಬೆಳವಣಿಗೆಯೇ ಪ್ರತಿಫಲ ಎಂದು ತಿಳಿಸಿದರು.

ಗ್ಲೋಬಲ್ ಎಜುಕೇಶನ್ ಟ್ರಸ್ಟ್ ಮತ್ತು ದಕ್ಷ ಕಾಲೇಜಿನ ಅಧ್ಯಕ್ಷ ಪಿ. ಜಯಚಂದ್ರ ರಾಜು ಮಾತನಾಡಿ, ಸ್ನಾತಕೋತ್ತರ ಪದವಿ ಎಂದರೆ ಕೇವಲ ಕೊಠಡಿಯೊಳಗಿನ ತರಗತಿ ಪಾಠಗಳಷ್ಠೇ ಅಲ್ಲ. ಅಲ್ಲಿಂದಾಚೆಗೂ ನಿಮಗೆ ಕಲಿಕೆ ಇದೆ. ಆ ಮಟ್ಟದಲ್ಲಿ ನಿಮ್ಮ ಮನಸ್ಥಿತಿಯನ್ನು ಬೆಳೆಸಿಕೊಂಡಾಗ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ದಕ್ಷ ಉನ್ನತ ಶಿಕ್ಷಣ ವಿಭಾಗದ ನಿರ್ದೇಶಕ ಪಿ. ಹರೀಶ್ ಮಾತನಾಡಿ, ದಕ್ಷ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ. ಮಹೇಶ, ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

ನಂತರ ಸಂಜಯ್ ವಿರ್ನಾವೆ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

--------------