ಭದ್ರಾ ನೀರು ಹರಿಸಲು ಪ್ರಾರಂಭಿಸಿ ಒಂದು ವಾರ ಕಳೆದರೂ ಕಾಲುವೆಗಳಲ್ಲಿ ನೀರು ಬಂದಿಲ್ಲ. ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದಿಂದ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ನೀರು ಹರಿಸಲು ಪ್ರಾರಂಭಿಸಿ ಒಂದು ವಾರ ಕಳೆದರೂ ಕಾಲುವೆಗಳಲ್ಲಿ ನೀರು ಬಂದಿಲ್ಲ. ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದಿಂದ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.ಮನವಿಯಲ್ಲಿ ಭದ್ರಾ ನೀರು ಕಾಲುವೆಗಳಿಗೆ ಹರಿಸಲು ಪ್ರಾರಂಭಿಸಿ ಒಂದು ವಾರ ಕಳೆದರೂ ಎಲ್ಲಿಯೂ ಕಾಲುವೆಗಳಲ್ಲಿ ನೀರು ಕಾಣಿಸುತ್ತಿಲ್ಲ. ತೋಟದ ಬಹು ವಾರ್ಷಿಕ ಬೆಳೆಗಳಿಗೆ ನೀರುಣಿಸದೆ 2 ತಿಂಗಳಾಗಿರುವುದರಿಂದ ಒಣಗುತ್ತಿವೆ. ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆಯಲು ಸಸಿ ಮಡಿಯಲ್ಲಿ ನಾಟಿಗೆ ಸಸಿಗಳು ಬೆಳೆದು ನಿಂತಿವೆ. ರೊಳೆ ಹೊಡೆಯಲು ನೀರು ಬೇಕು. ಸ್ವಂತ ಕೊಳವೆ ಬಾವಿ ಅಥವಾ ಕೆರೆಕಟ್ಟೆಯ ನೀರಿನ ಸೌಲಭ್ಯ ಇಲ್ಲದ ರೈತರು ಕಾಲುವೆಗಳಲ್ಲಿ ನೀರು ಹರಿದು ಬಂದ ನಂತರ ಭತ್ತದ ಬೀಜ ಚೆಲ್ಲಲು ಚಾತಕ ಪಕ್ಷಿಯಂತೆ ನೀರಿಗಾಗಿ ಕಾಯುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಸದಸ್ಯರು ತಿಳಿಸಿದರು.
ಇದಕ್ಕಾಗಿ ಬಿಜೆಪಿ ರೈತ ಮೋರ್ಚಾ ಜನವರಿ 1ರಿಂದಲೇ ಕಾಲುವೆಗಳಲ್ಲಿ ನೀರು ಹರಿಸಬೇಕು ಎಂದು ಆಗ್ರಹಿಸಿ, ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತ್ತು. ಆದರೆ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜ.8ರಿಂದ ನೀರು ಹರಿಸುವುದಾಗಿ ನಿರ್ಣಯಿಸಲಾಯಿತು. ಆದರೆ ಇಂದಿಗೆ ನೀರು ಹರಿಸಲು ಪ್ರಾರಂಭಿಸಿ ಒಂದು ವಾರ ಕಳೆದರೂ ಕಾಲುವೆಗಳಲ್ಲಿ ನೀರು ಹರಿದು ಬಂದಿಲ್ಲ. ಎಲ್ಲಿ ನೋಡಿದರೂ ಬರಿ ಒಣಗಿರುವ ಕಾಲುವೆಗಳು ಕಾಣಿಸುತ್ತವೆ. ಕಳೆದ ಹಂಗಾಮಿನಲ್ಲಿ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಸಮೃದ್ಧವಾಗಿ ಸುರಿದು, ಜಲಾಶಯ ಭರ್ತಿಯಾಗಿದೆ. ಆದರೂ ಜಿಲ್ಲಾಡಳಿತ, ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನೀರು ಹರಿಸಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.ರೈತರ ಬೇಡಿಕೆಗಳು:
1.ತಕ್ಷಣ ಕಾಲುವೆಗಳಲ್ಲಿ ನೀರು ಹರಿಸಿ, ಒಣಗುತ್ತಿರುವ ತೋಟದ ಬೆಳೆಗಳನ್ನು ಉಳಿಸಬೇಕು ಮತ್ತು ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆಯಲು ಅನುವು ಮಾಡಿಕೊಡಬೇಕು.2.ಕಾಲುವೆಗಳಲ್ಲಿ ಗಿಡ ಗಂಟೆಗಳು ಬೆಳೆದು ನೀರು ಸರಾಗವಾಗಿ ಹರಿಯುತ್ತಿಲ್ಲ. ಆದ್ದರಿಂದ ಆಗಿಂದಾಗ್ಗೆ ವಿಬಿ-ಜಿ ರಾಮ-ಜಿ ಯೋಜನೆಯಡಿ ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಸಿ, ಸ್ವಚ್ಛ ಮಾಡಿಸಿ ಹೂಳು ಎತ್ತಿಸಿ, ನೀರು ಸರಾಗವಾಗಿ ಕೊನೆ ಭಾಗಕ್ಕೆ ತಲುಪುವಂತೆ ಮಾಡಲು ಕ್ರಮ ವಹಿಸಬೇಕು.
3.ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶ ಶೇಕಡ 70 ಇರುವುದರಿಂದ ಮುಂದಿನ ನೀರಾವರಿ ಸಲಹಾ ಸಮಿತಿ ಸಭೆ ದಾವಣಗೆರೆಯಲ್ಲಿ ನಡೆಯಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಜಿಲ್ಲಾ ಬಿಜೆಪಿ ರೈತ ಮೋರ್ಚಾ ನಿಯೋಗದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ.ಸತೀಶ್, ದಾವಣಗೆರೆ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಾರೇಶನಾಯ್ಕ, ಡಿ.ವಿ.ಜಯರುದ್ರಪ್ಪ, ಕಾಡಜ್ಜಿ ಬಸವರಾಜು, ಹಾಲೇಶ ನಾಯಕ, ವಾಟರ್ ಮಂಜುನಾಥ ಇತರರು ಇದ್ದರು.