ಹೆಚ್ಚುತ್ತಿರುವ ಜನಸಂಖ್ಯೆಯಿಂದ ಬಡತನ, ನಿರುದ್ಯೋಗ, ಪರಿಸರ ಮಾಲಿನ್ಯ, ಲಿಂಗ ತಾರತಮ್ಯದಂತಹ ಗಂಭೀರ ಸವಾಲುಗಳು ಎದುರಾಗುತ್ತಿದೆ.

ಗದಗ: ಜಾಗತಿಕ ಜನಸಂಖ್ಯೆ ವೇಗವಾಗಿ ಏರುತ್ತಿರುವ ಪ್ರಸ್ತುತ ದಿನಗಳಲ್ಲಿ ಕುಟುಂಬ ಯೋಜನೆ, ತಾಯಿ, ಮಕ್ಕಳ ಆರೋಗ್ಯ ಹಾಗೂ ಜನಸಂಖ್ಯಾ ನಿಯಂತ್ರಣದ ಕುರಿತು ವ್ಯಾಪಕ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಗಡಾದ ಹಾಗೂ ಬೆಟಗೇರಿ ವೈದ್ಯಾಧಿಕಾರಿ ಡಾ. ಮಧುಮತಿ ದನ್ನೂರೆ ತಿಳಿಸಿದರು.

ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರದ ಮನೋರಮಾ ಮಹಾವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ ಜಾಗೃತಿ ಜಾಥಾ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಚ್ಚುತ್ತಿರುವ ಜನಸಂಖ್ಯೆಯಿಂದ ಬಡತನ, ನಿರುದ್ಯೋಗ, ಪರಿಸರ ಮಾಲಿನ್ಯ, ಲಿಂಗ ತಾರತಮ್ಯದಂತಹ ಗಂಭೀರ ಸವಾಲುಗಳು ಎದುರಾಗುತ್ತಿದ್ದು, ಇದು ಶಿಕ್ಷಣ, ಉದ್ಯೋಗ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮೇಲೂ ತೀವ್ರ ಒತ್ತಡ ಹೇರುತ್ತಿದೆ. ಈ ನಿಟ್ಟಿನಲ್ಲಿ ಯುವಜನತೆ ಸರಿಯಾದ ತಿಳಿವಳಿಕೆ ಹೊಂದುವುದು ಅಗತ್ಯ ಎಂದರು.

ಕಾಲೇಜಿನ ಆಡಳಿತಾಧಿಕಾರಿ ಕಿಶೋರ್ ಮುದುಗಲ್, ಲಕ್ಕುಂಡಿ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಎಸ್.ಎನ್. ಲಿಂಗದಾಳ ಮಾತನಾಡಿದರು. ಸಾವಿತ್ರಿ ಪವಾರ್ ಪ್ರಾರ್ಥಿಸಿದರು. ಚೈತ್ರಾ ಗುಳೆದ್ ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ರತ್ನ ಕುತ್ನಿ ನಿರೂಪಿಸಿದರು, ಫಕೀರೇಶ ರಾಮಗಿರಿ ಜಾಥಾದ ಕುರಿತು ಮಾತನಾಡಿದರು ಹಾಗೂ ಉಪನ್ಯಾಸಕ ಹಾದಿಮನಿ ವಂದಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು, ಶಿಕ್ಷಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ವಿಶ್ವ ಜನಸಂಖ್ಯಾ ದಿನಾಚರಣೆ ಜಾಗೃತಿ

ಗದಗ: ಈ ವರ್ಷದ ಘೋಷವಾಕ್ಯವು ಆರೋಗ್ಯಕರ ಸಮಯದಲ್ಲಿ ಗರ್ಭಧಾರಣೆ ಹಾಗೂ ಮಕ್ಕಳ ನಡುವಿನ ಆರೋಗ್ಯಕರ ಅಂತರ ಕಾಪಾಡುವುದರಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ವೃದ್ಧಿಸುವುದರೊಂದಿಗೆ ಅನಗತ್ಯ ಗರ್ಭಧಾರಣೆಗಳನ್ನು ತಡೆಗಟ್ಟಬಹುದು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಶಿದ್ದಪ್ಪ ಎನ್. ಲಿಂಗದಾಳ ತಿಳಿಸಿದರು.ತಾಲೂಕಿನ ಅಡವಿಸೋಮಾಪುರ ದೊಡ್ಡತಾಂಡೆ(ಜಲ ಶಂಕರ ನಗರ)ದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ, ಸಿಎಸ್‌ಐ ಆಸ್ಪತ್ರೆ ಹಾಗೂ ಅಡವಿಸೋಮಾಪುರ ಆಯುಷ್ಮಾನ ಆರೋಗ್ಯ ಮಂದಿರದ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸೂಕ್ತವಾದ ವಯಸ್ಸಿನಲ್ಲಿ ಸದೃಢವಾದ ಮಕ್ಕಳನ್ನು ಪಡೆಯಲು ತಾಯಂದಿರು ಆರೋಗ್ಯ ಇಲಾಖೆಯ ನೀಡುವ ಸೇವೆ, ಮಾಹಿತಿಯ್ನು ಪಡೆಯಬೇಕು ಎಂದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೈ.ಎನ್. ಕಡೇಮನಿ ಮಾತನಾಡಿದರು. ಸಿಎಸ್‌ಐ ವೈದ್ಯೆ ಡಾ. ಅರುಣಿಮಾ, ಶುಶ್ರೂಷಾಧಿಕಾರಿ ಕವಿತಾ ಜಿ., ಸಂದೀಪ, ಲಕ್ಷ್ಮೀ ಪೂಜಾರ, ರೇಖಾ ಲಮಾಣಿ, ಮಂಜುಳಾ ಆರಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಗ್ರಾಮದ ಹಿರಿಯರು ಇದ್ದರು. ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಬಿ. ಗಡಾದ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಮುತ್ತಪ್ಪ ಹಟ್ಟಿಮನಿ ನಿರೂಪಿಸಿದರು. ಲಲಿತಾ ಅಂಗಡಿ ವಂದಿಸಿದರು.