ಭೈರಪ್ಪ ಅವರನ್ನು ಕಾಡಿದ್ದು ಬಡತನ, ಬೆಳಸಿದ್ದು ಅಧ್ಯಯನ : ಡಾ. ಬೆಳವಾಡಿ ಮಂಜುನಾಥ್

| Published : Oct 01 2025, 01:00 AM IST

ಭೈರಪ್ಪ ಅವರನ್ನು ಕಾಡಿದ್ದು ಬಡತನ, ಬೆಳಸಿದ್ದು ಅಧ್ಯಯನ : ಡಾ. ಬೆಳವಾಡಿ ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರನ್ನು ಕಾಡಿದ್ದು ಬಡತನ, ಬೆಳೆಸಿದ್ದು ಅಧ್ಯಯನ ಮತ್ತು ಪ್ರವಾಸ ಎಂದು ಸಾಹಿತಿ ಡಾ. ಬೆಳವಾಡಿ ಮಂಜುನಾಥ್ ಹೇಳಿದರು.

ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಶ್ರದ್ಧಾಂಜಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರನ್ನು ಕಾಡಿದ್ದು ಬಡತನ, ಬೆಳೆಸಿದ್ದು ಅಧ್ಯಯನ ಮತ್ತು ಪ್ರವಾಸ ಎಂದು ಸಾಹಿತಿ ಡಾ. ಬೆಳವಾಡಿ ಮಂಜುನಾಥ್ ಹೇಳಿದರು.ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಎಸ್.ಎಲ್. ಭೈರಪ್ಪ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ. ಎಸ್.ಎಲ್. ಭೈರಪ್ಪ ಅವರು ಸಂಶೋಧನಾ ಸೃಜನಶೀಲ ಸಾಹಿತಿ, ಆಕರಗಳಿಂದ ಸಮರ್ಥಿಸುವ ಅವರ ಕೃತಿಗಳು ಬೀಜ ರೂಪದಲ್ಲಿ ಕಾಣಿಸಿಕೊಂಡು ಬಂದು ವಸ್ತು ಅದು ವಿಸ್ತಾರವಾಗುತ್ತಾ ಮುಂದುವರಿಯುತ್ತದೆ. ಧರ್ಮಶ್ರೀ ಮತ್ತು ದಾಟು ಕಾದಂಬರಿ ಗಳಲ್ಲಿ ಉತ್ಕರ್ಷಕ್ಕೇರಿತು. ಕಥೆ ಕಟ್ಟುವ ಶೈಲಿ, ವಾಸ್ತವತೆ ಕಣ್ಮುಂದೆ ನಡೆಯದಂತೆ ಸಾದರಪಡಿಸುವ ಕೌಶಲ್ಯ ಅವರಲ್ಲಿತ್ತು. ಇವರ ಸಾಹಿತ್ಯ ಕುರಿತು 20 ಮಂದಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಸತ್ಯ ಮತ್ತು ಸೌಂದರ್ಯ ಎಂಬ ವಿಷಯ ಕುರಿತು ಸಂಶೋಧನೆ ಮಾಡುವಾಗ ತಮ್ಮ ಹಾದಿ ತತ್ವಶಾಸ್ತ್ರವಲ್ಲ. ಸಾಹಿತ್ಯ ಎಂಬುದನ್ನು ಅರಿತು ಹೊಸ ವ್ಯಖ್ಯಾನ ಬರೆದರು. ಗಟ್ಟಿ ನಿರ್ಧಾರ, ನೇರ ಮಾತು, ಸರಳ ಭಾಷೆಯಲ್ಲಿ ಗಹನವಾದ ವಿಚಾರ ಮನಮುಟ್ಟುವಂತೆ ಅಭಿವ್ಯಕ್ತಪಡಸುದುದರಿಂದ ಅತ್ಯಂತ ಜನಪ್ರಿಯರಾದವರು ಎಂದು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು ಮಾತನಾಡಿ, ತಾತ್ವಿಕ ಭಿನ್ನಾಭಿಪ್ರಾಯದ ಕನ್ನಡದ ಬಹುದೊಡ್ಡ ಸಾಹಿತಿ, ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅಧ್ಯಯನ, ಪೂರ್ವ ಸಿದ್ಧತೆಯಿಲ್ಲದೇ ಯಾವುದೇ ಕಾದಂಬರಿ ಬರೆದವರಲ್ಲ. ಅವರ ಲೇಖನಗಳು ಓದುಗರಲ್ಲಿ ಹುಚ್ಚು ಹಿಡಿಸಿದ್ದವು. ಅವರು ಅನುಭವಿಸಿದ ಬಡತನ, ಕ್ರೌರ್ಯ, ಸಂಕಟ, ಭೈರಪ್ಪನವರ ಸಾಹಿತ್ಯದಲ್ಲಿ ಮಡಿ ಮೈಲಿಗೆ, ಪ್ರಾದೇಶಿಕತೆ ಮೀರಿ ಅದರ ಆಚೆಗೂ ಹೋಗುವ ಸಾಹಸ ಮಾಡಿದ ವರು ಭೈರಪ್ಪ ಎಂದು ತಿಳಿಸಿದರು.

ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಮೇಶ್ ಬೊಂಗಾಳೆ ಭೈರಪ್ಪ ಅವರ ಸಾಹಿತ್ಯ ಕೃತಿ, ಕಾದಂಬರಿಗಳ ಕವನ ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಮಾಜಿ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಬಿಡಿಆರ್ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್, ಕಾಂಗ್ರೆಸ್ ಮುಖಂಡ ಎನ್.ಡಿ. ಚಂದ್ರಪ್ಪ, ಮಾಧ್ಯಮ ಪ್ರತಿಷ್ಢಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಹುಣಸೇ ಮಕ್ಕಿ ಲಕ್ಷ್ಮಣ್, ಕಲ್ಯಾಣ ನಗರ ಸಾಹಿತ್ಯ ವೇದಿಕೆ ಅಧ್ಯಕ್ಷ ಲೋಕೇಶ್ ನುಡಿ ನಮನ ಸಲ್ಲಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಮಾವಿನಕೆರೆ ದಯಾನಂದ್, ನಗರ ಅಧ್ಯಕ್ಷ ಸಚಿನ್ ಸಿಂಗ್ ಉಪಸ್ಥಿತರಿದ್ದರು. ಮಂಜುನಾಥಸ್ವಾಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 29 ಕೆಸಿಕೆಎಂ 3ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ಇತ್ತೀಚಿಗೆ ಸಾಹಿತಿ ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.