ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಪೊನ್ನಪೇಟೆ ತಾಲೂಕು ಹುದಿಕೇರಿ ಪಟ್ಟಣ ಸಮೀಪ ಹೈಸೊಡ್ಲೂರು ಗ್ರಾಮದಲ್ಲಿ 19.34 ಕೋಟಿ ರು. ಅನುದಾನದಲ್ಲಿ ನಿರ್ಮಾಣವಾಗಲಿರುವ 66 /11 ವಿದ್ಯುತ್ ಸರಬರಾಜು ಉಪ ಕೇಂದ್ರದ ಕಾಮಗಾರಿಗೆ ಶನಿವಾರ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೂಮಿಪೂಜೆ ಸಲ್ಲಿಸಿದರು.ನಂತರ ಮಾತನಾಡಿದ ಅವರು, ಜನರ ಬಹುಕಾಲದ ಬೇಡಿಕೆಯಾದ ಹುದಿಕೇರಿ ಹೋಬಳಿಯ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಭಾಗದ ಎಲ್ಲ ಮುಖಂಡರು ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ನಮ್ಮ ಜನರ ಬೇಡಿಕೆಗೆ ಬೇಡಿಕೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸಹಕಾರ ನೀಡಿದ್ದು, ನಮ್ಮ ಸರ್ಕಾರ ಸ್ಪಂದಿಸಿದೆ. ದೇವರ ಅನುಗ್ರಹದೊಂದಿಗೆ, ಸುಗಮವಾಗಿ ಗುಣಮಟ್ಟದಲ್ಲಿ ಕಾಮಗಾರಿ ನಡೆಯುವಂತಾಗಲಿ. ಟೆಂಡರ್ನಲ್ಲಿ ನಮೂದಿಸಿದ ಕಾಲಮಿತಿಯಲ್ಲಿ ಕಾಮಗಾರಿ ಪೂರೈಸುವಂತಾಗಲಿ ಎಂದು ಹೇಳಿದರು.
ಈ ಉಪ ಕೇಂದ್ರ ಸ್ಥಾಪನೆಯಾದ ನಂತರ ಹುದಿಕೇರಿ ಹೋಬಳಿಯ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಇದಲ್ಲದೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಐದು ವಿದ್ಯುತ್ ಉಪ ಕೇಂದ್ರಗಳನ್ನು ಸರ್ಕಾರ ಮಂಜೂರಾತಿ ನೀಡಿದೆ. ಇದರಲ್ಲಿ ಬಾಳೆಲೆ, ಸಿದ್ದಾಪುರ, ಮೂರ್ನಾಡು ಉಪಕೇಂದ್ರಗಳು ಟೆಂಡರ್ ಆಗಿದ್ದು, ಸದ್ಯದಲ್ಲಿಯೇ ಕಾಮಗಾರಿಯನ್ನು ಗುತ್ತಿಗೆದಾರರು ಕೈಗೆತ್ತಿಕೊಳ್ಳಲಿದ್ದಾರೆ ಎಂದರು.33/11 ಉಪಕೇಂದ್ರಗಳು ಕಳತ್ಮಾಡು, ಸಂಪಾಜೆ, ಭಾಗಮಂಡಲದಲ್ಲಿ ಸಹ ಸ್ಥಾಪನೆಗೆ ಸರ್ಕಾರದಿಂದ ಮಂಜೂರಾಗಿದೆ. ಇದಲ್ಲದೆ 230 ಕೋಟಿ ರು. ಅನುದಾನದಲ್ಲಿ ವಿದ್ಯುತ್ ಮಾರ್ಗವನ್ನು ಹಾಗೂ ಪರಿವರ್ತಕಗಳನ್ನು ಅದರ ಸಾಮರ್ಥ್ಯವನ್ನು ಹೆಚ್ಚಿಸಿ ಬಲವರ್ಧನೆಗೊಳಿಸುವ ವಿಶೇಷ ಯೋಜನೆ ಈಗಾಗಲೇ ಚಾಲನೆಯಲ್ಲಿದ್ದು, ಇದು ಇದೇ ಡಿಸೆಂಬರ್ ವೇಳೆಗೆ ಮುಕ್ತಾಯಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಇಟಾ ಎಂಜಿನಿಯಯರ್ಸ್ ಬೆಂಗಳೂರು ಪ್ರೈವೇಟ್ ಲಿಮಿಟೆಡ್ ಕಾಮಗಾರಿ ಗುತ್ತಿಗೆ ಪಡೆದಿದ್ದು, ಸ್ಥಳವನ್ನು ಕಳ್ಳೇಂಗಡ ಸುರೇಶ್ ಮತ್ತು ಕೊಡಂಗಡ ಉಮ್ಮಕ್ಕ ಅವರು ನೀಡಿದ್ದಾರೆ.ಕಾರ್ಯಕ್ರಮದಲ್ಲಿ ರಾಜ್ಯ ಚೀಫ್ ಎಲೆಕ್ಟ್ರಿಕ್ ಆಫೀಸರ್ ತೀತಿರ ರೋಷನ್ ಅಪ್ಪಚ್ಚು, ಕೆಪಿಟಿಸಿಎಲ್ ಹಿರಿಯ ಅಧೀಕ್ಷಕ ಎಂಜಿನಿಯರ್ ರಮೇಶ್ ಟಿ.ಎಸ್., ಕಾರ್ಯನಿರ್ವಾಹಕ ಎಂಜಿನಿಯರ್ (ಯೋಜನಾ ವಿಭಾಗ ಕೊಡಗು) ಮಾದೇಶ್, ಸೆಸ್ಕ್ ಗೋಣಿಕೊಪ್ಪ ಎಇಇ ಸತೀಶ್, ಹಿರಿಯರಾದ ಚೆಕ್ಕೇರ ವಾಸು ಕುಟ್ಟಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳ ಮಾಡ ಲಾಲ ಅಪ್ಪಣ್ಣ, ಚೆಕ್ಕೇರ ಸುಧೀರ್, ಚೆಕ್ಕೇರ ಸಚಿನ್ ಸೋಮಯ್ಯ, ಅಜ್ಜಿಕುಟ್ಟಿರ ಗಿರೀಶ್, ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಕುಪ್ಪಣಮಾಡ ನೀಮ ಕಾವೇರಮ್ಮ, ಹಿರಿಯರಾದ ಅಪ್ಪಚ್ಚಂಗಡ ಮೋಟಯ್ಯ, ಗ್ರಾ.ಪಂ. ಸದಸ್ಯರಾದ ಕೊಡಂಗಡ ವಾಸು ಬಿದ್ದಪ್ಪ, ಕೊಡಂಗಡ ದಮಯಂತಿ, ಬೊಜ್ಜಂಗಡ ಸುನಿಲ್ ಹಾಜರಿದ್ದರು.