ತುಮಕೂರು ವಿವಿ ನೀಡಿದ ಗೌರವ ಡಾಕ್ಟರೇಟ್ ಪಡೆದ ಕೆ.ಆರ್.ಪ್ರದೀಪ್, ಲೀಗಲ್ ಲ್ಯೂಮಿನರಿ ಅವಾರ್ಡ್ 2026 ಪಡೆದ ಅನುರಾಧ ಪ್ರದೀಪ್ಗೆ ಗೌರವಕನ್ನಡಪ್ರಭ ವಾರ್ತೆ ರಾಮನಗರ
ಇತಿಹಾಸ ಮರೆತವರು, ಇತಿಹಾಸ ಸೃಷ್ಟಿಸಲಾರರು ಎಂಬ ಮಾತಿನಂತೆ ಇತ್ತೀಚೆಗಷ್ಟೆ ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಡಾ.ಕೆ.ಆರ್.ಪ್ರದೀಪ್ ಸಮಾಜಕ್ಕೆ ಆದರ್ಶ ಪ್ರಾಯರಾಗಿ ಇತಿಹಾಸ ಬರೆದಿದ್ದಾರೆ ಎಂದು ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಅಧ್ಯಕ್ಷ ರಾ.ಪ.ರವಿಶಂಕರ್ ಬಣ್ಣಿಸಿದರು.ನಗರದ ಶ್ರೀ ಕನ್ನಿಕಾಮಹಲ್ ನಲ್ಲಿ ಸಾಧಕ ದಂಪತಿ ಡಾ.ಕೆ.ಅರ್.ಪ್ರದೀಪ್ ಮತ್ತು ಅನುರಾಧ ಪ್ರದೀಪ್ ಅವರಿಗೆ ರಾಮನಗರ ಆರ್ಯವೈಶ್ಯ ಸಭಾ, ವಾಸವಿ ವಿದ್ಯಾನಿಕೇತನ ಟ್ರಸ್ಟ್ ಸಂಘಟನೆಗಳು, ವಾಸವಿ ವನಿತಾ ಸಂಘ, ವಾಸವಿ ಯೂತ್ಸ್ ಫೋರಂ, ವಾಸವಿ ಇಂಟರ್ ನ್ಯಾಷನಲ್ ಕ್ಲಬ್ ಮತ್ತು ವಾಸವಿ ಭಜನಾ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಸ್ವಾರ್ಥ ಭಾವನೆಯಿಂದ ಮಾಡುವ ಸೇವೆ ಸಮಾಜಕ್ಕೆ ಯಾವಾಗಲೂ ಆದರ್ಶಪ್ರಾಯವಾಗಿರುತ್ತದೆ. ಹತ್ತಾರು ಸಂಸ್ಥೆಗಳನ್ನು ಹುಟ್ಟುಹಾಕಿ ಸಮಾಜ ಸೇವೆ ಮಾಡುತ್ತಿರುವ ಡಾ.ಕೆ.ಆರ್.ಪ್ರದೀಪ್ ನಮಗೆಲ್ಲರಿಗೂ ಆದರ್ಶ. ಯಾವುದೇ ಪ್ರಚಾರವಿಲ್ಲದ ಸಾಧಕರನ್ನು ಗುರುತಿಸಿ ಅವರ ಊರಿನಲ್ಲಿಯೇ ಗೌರವಿಸುವ ಕಾರ್ಯ ನಿಜಕ್ಕೂ ಅರ್ಥಪೂರ್ಣ ಎಂದು ಹೇಳಿದರು.ಸಾಕಷ್ಟು ಮಂದಿ ಸಾಧಕರು ಪುಸ್ತಕ ಬರೆಸಿಕೊಳ್ಳುತ್ತಾರೆ. ಆದರೆ, ಪ್ರದೀಪ್ ಅವರ ಸಾಧನೆಗಳೇ ಪುಸ್ತಕ ಬರೆಯಲು ಪ್ರೇರಣೆಯಾಗಿದೆ. ಹಲವಾರು ಮಂದಿ ಹಣ ಮಾಡಿರುವವರು ತಮ್ಮ ಕುಟುಂಬಕ್ಕೆ, ತಮ್ಮ ವಂಶವನ್ನಷ್ಟೇ ನೋಡುತ್ತಾರೆ. ಆದರೆ ಸಮಾಜವನ್ನು ನೋಡುವವರ ಸಂಖ್ಯೆ ವಿರಳ, ಅವರ ಸಾಲಿಗೆ ಪ್ರದೀಪ್ ಸೇರುತ್ತಾರೆ ಎಂದು ರಾ.ಪ.ರವಿಶಂಕರ್ ತಿಳಿಸಿದರು.ಕೆ.ಆರ್.ಪ್ರದೀಪ್ ಗೆ ಪೌರ ಸನ್ಮಾನ :
ಕೆ.ಆರ್.ಪ್ರದೀಪ್ ಅವರಿಗೆ ರಾಮನಗರದ ನಾಗರೀಕರ ಪರವಾಗಿ ವಸುದೈವ ಸೇವಾ ಅನರ್ಘ್ಯ ರತ್ನ ಬಿರುದು ಪ್ರದಾನ ಮಾಡಿ ಮಾತನಾಡಿದ ನಗರಸಭಾಧ್ಯಕ್ಷ ಕೆ.ಶೇಷಾದ್ರಿ, ಪ್ರದೀಪ್ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ, ಕೊಡುಗೈ ದಾನಿಯಾಗಿದ್ದಾರೆ. ಸಾರ್ಥಕತೆ ಎಂದರೆ ಏನು ಎಂಬುದನ್ನು ಪ್ರಚುರಪಡಿಸಿದ್ದಾರೆ. ನಮ್ಮ ಊರಿನಲ್ಲಿ ವಿಶ್ವ ಮಟ್ಟದಲ್ಲಿ ನಮ್ಮ ದೇಶ ಪ್ರತಿನಿಧಿಸಿರುವವರು, ಪ್ರಸಿದ್ದಿ ಪಡೆದವರು ಇದ್ದಾರೆ ಎಂಬುದೇ ನಮ್ಮ ಹೆಮ್ಮೆ ಎಂದು ಹೇಳಿದರು.
ಅನೇಕ ಧರ್ಮಕಾರ್ಯಗಳಿಗೆ, ವಿದ್ಯಾರ್ಥಿಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ ದಾನ ನೀಡಿದ್ದು, ಸಿದ್ದಿ ಜನಾಂಗದ ಅಭಿವೃದ್ಧಿಗೆ ಸಹಾಯ ಮಾಡಿದ್ದಾರೆ. ಅವರ ಪತ್ನಿ ಅನುರಾಧ ಅವರು ವಿಶ್ವಸಂಸ್ಥೆಯಲ್ಲಿ ಮಹಿಳೆಯರ ಪರವಾಗಿ ದನಿ ಎತ್ತಿ ರಾಮನಗರ ಕೀರ್ತಿ ಎತ್ತಿ ಹಿಡಿದಿದ್ದಾರೆ. ದಂಪತಿ ಆದರ್ಶಪ್ರಾಯರು, ರಾಮನಗರ ಜನತೆಯ ಪರವಾಗಿ ಅಭಿನಂದಿಸುವ ಜೊತೆಗೆ ನಗರಸಭೆಯಿಂದ ದಂಪತಿ ಪೌರಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಆರ್.ಪ್ರದೀಪ್ , ಪ್ರಪಂಚದ ಯಾವ ಮೂಲೆಯಲ್ಲಿ ಯಾವುದೇ ಗೌರವ ಪಡೆದರೂ ಹುಟ್ಟಿದೂರಿನಲ್ಲಿ ಎಲ್ಲರ ಮಧ್ಯೆ ಸಿಗುವ ಗೌರವ ಅತ್ಯುನ್ನತವಾದದ್ದು. ನಾನು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಎಲ್ಲ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿಯೇ ಪಡೆದುಕೊಂಡಿದ್ದೇನೆ. ಯಾವುದೇ ಖಾಸಗಿ ಶಾಲೆಯಲ್ಲಿ ಅಭ್ಯಾಸ ಮಾಡಿಲ್ಲ, ಅದಕ್ಕಾಗಿ ನಾನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಋಣಿಯಾಗಿದ್ದೇನೆ ಎಂದರು.
ಸಂವಿಧಾನದಲ್ಲಿ ಎಲ್ಲರೂ ಸಮಾನರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಈಗಿನ ಪ್ರಧಾನಿ ಹೇಳಿದ್ದಲ್ಲ. ಅದು ಸಂವಿಧಾನದಲ್ಲೇ ಇದೆ. ಪ್ರಪಂಚದಲ್ಲಿ ಯಾರೂ ಬರೆಯದ ಸಂವಿಧಾನ ಡಾ.ಬಿ.ಆರ್.ಅಂಬೇಡ್ಕರ್ ಬರೆದಿದ್ದಾರೆ. ನಮ್ಮ ಇತಿಹಾಸ ನಮಗೆ ಸದಾ ನೆನಪಿರಬೇಕು. ನಾವು ಬಂದ ಹಾದಿ ನೆನೆಯಬೇಕು. ನಾವು ಏನೇ ಮಾಡಿದರೂ ಶ್ರಮವಾಗುತ್ತದೆ ಹೊರತು ಸಾಧನೆ ಆಗುವುದಿಲ್ಲ, ಸಮಾಜ ಗುರುತಿಸಿದರಷ್ಟೇ ಸಾಧನೆಯಾಗುತ್ತದೆ ಎಂದು ಹೇಳಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ಕರ್ನಾಟಕ ಆರ್ಯವೈಶ್ಯ ಮಹಿಳಾ ಸಭಾದ ಅಧ್ಯಕ್ಷೆ ಉಮಾ ಸಾಯಿರಾಂ ಮಾತನಾಡಿದರು. ಕೆ.ಆರ್.ಪ್ರದೀಪ್ ಅವರ ಬಾಲ್ಯದ ಸ್ನೇಹಿತರ ಪರವಾಗಿ ಕೆ.ವಿ.ಸುದರ್ಶನ್, ಕುಟುಂಬಸ್ಥರ ಪರವಾಗಿ ಕೆ.ಆರ್.ನಾಗೇಶ್, ರಾಮನಗರದ ನಾಗರಿಕರ ಪರವಾಗಿ ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಆರ್.ಜಿ. ಚಂದ್ರಶೇಖರ್ ಮಾತನಾಡಿದರು.ಶೈಕ್ಷಣಿಕ ಮತ್ತು ವೃತ್ತಿ ಸಾಧನೆ, ಸಮಾಜ ಸೇವೆಯನ್ನು ಗುರುತಿಸಿ ತುಮಕೂರು ವಿವಿ ನೀಡಿದ ಗೌರವ ಡಾಕ್ಟರೇಟ್ ಹಿನ್ನೆಲೆಯಲ್ಲಿ ಕೆ.ಆರ್.ಪ್ರದೀಪ್ ಮತ್ತು ಲೀಗಲ್ ಲ್ಯೂಮಿನರಿ ಅವಾರ್ಡ್ 2026ಕ್ಕೆ ಭಾಜನರಾದ ಅನುರಾಧ ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ರಾಮನಗರ ಆರ್ಯವೈಶ್ಯ ಸಭಾದ ಅಧ್ಯಕ್ಷ ಪಿ.ಜಿ.ಹರಿನಾಥ್, ವಾಸವಿ ವಿದ್ಯಾನಿಕೇತನ ಟ್ರಸ್ಟ್ ಅಧ್ಯಕ್ಷ ಬಿ.ಎಂ.ನಾಗರಾಜ ಶೆಟ್ಟಿ , ಮುಖಂಡರಾದ ನಾಗಪ್ರದೀಪ್, ಕೆ.ವಿ.ಪ್ರಸನ್ನ ಕುಮಾರ್, ಕೆ.ವಿ.ಉಮೇಶ್, ಶಾಂತ ನಾಗಪ್ರದೀಪ್, ಕೆ.ಎನ್.ಗಿರೀಶ್, ಹರ್ಷಿತಾ ಮತ್ತಿತರರು ಉಪಸ್ಥಿತರಿದ್ದರು.
-------------------------26ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಶ್ರೀ ಕನ್ನಿಕಾಮಹಲ್ ನಲ್ಲಿ ಸಾಧಕ ದಂಪತಿಗಳಾದ ಡಾ.ಕೆ.ಅರ್.ಪ್ರದೀಪ್ ಮತ್ತು ಅನುರಾಧ ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು.