ಸಾರಾಂಶ
ಒಂದು ತಿಂಗಳು ಸತಾಯಿಸಿ ಭಾರತಕ್ಕೆ ಮರಳಿದ ಪೆನ್ಡ್ರೈವ್ ಪ್ರಕರಣದ ರೂವಾರಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ತನಿಖೆಗೆ ಲಭಿಸಿದ್ದಾರೆ. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ.
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ಮರಳುತ್ತಿದ್ದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಬಂಧಿಸಿದ್ದ ವಿಶೇಷ ತನಿಖಾ ದಳವು (ಎಸ್ಐಟಿ) ಶುಕ್ರವಾರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಆರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದೆ.
ಜರ್ಮನಿಯ ಮ್ಯೂನಿಕ್ ನಗರದಿಂದ ಬಂದಿಳಿದ ಕೂಡಲೇ ಕೆಐಎನಲ್ಲಿ ಬಂಧನವಾಗಿದ್ದ ಪ್ರಜ್ವಲ್ ಅವರನ್ನು ಶುಕ್ರವಾರ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎಸ್ಐಟಿ ಅಧಿಕಾರಿಗಳು ಹಾಜರುಪಡಿಸಿದರು. ಬಳಿಕ ಅತ್ಯಾಚಾರ ಪ್ರಕರಣಗಳ ತನಿಖೆಗೆ 15 ದಿನಗಳು ತಮ್ಮ ವಶಕ್ಕೆ ನೀಡುವಂತೆ ಎಸ್ಐಟಿ ವಕೀಲರು ಮನವಿ ಮಾಡಿದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ವಾದ-ಪ್ರತಿವಾದ ಆಲಿಸಿ ಕೊನೆಗೆ ಆರು ದಿನ ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿತು.
ಈ ಆದೇಶ ಬೆನ್ನಲ್ಲೇ ನ್ಯಾಯಾಲಯದಿಂದ ಜೀಪಿನಲ್ಲಿ ಕೂರಿಸಿಕೊಂಡು ಮತ್ತೆ ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಯಲ್ಲಿರುವ ಎಸ್ಐಟಿ ಕ್ಯಾಂಪ್ಗೆ ಕರೆತಂದು ಪ್ರಜ್ವಲ್ ಅವರಿಗೆ ಎಸ್ಐಟಿ ವಿಚಾರಣೆ ನಡೆಸಿದೆ. ಇನ್ನು ಆರು ದಿನಗಳು ಪ್ರಜ್ವಲ್ಗೆ ಪ್ರಶ್ನೆಗಳ ಮುಂದಿಟ್ಟು ಎಸ್ಐಟಿ ಬೆವರಿಳಿಲಿಸಲಿದೆ. ಇದಕ್ಕೆ ತನಿಖಾ ತಂಡವು ಸಜ್ಜಾಗಿದೆ.
ಪ್ರಜ್ವಲ್ ಅವರನ್ನು ಶುಕ್ರವಾರ ಬೆಳಗ್ಗೆ ಪ್ರಾಥಮಿಕ ಹಂತದ ವಿಚಾರಣೆಗೊಳಿಸಿದ ತನಿಖಾಧಿಕಾರಿಗಳು, ಮಧ್ಯಾಹ್ನ 1 ಗಂಟೆಗೆ ವೈದ್ಯಕೀಯ ತಪಾಸಣೆಗೆ ಬೌರಿಂಗ್ ಆಸ್ಪತ್ರೆಗೆ ಅವರನ್ನು ಕರೆದೊಯ್ದರು. ಆಸ್ಪತ್ರೆಯಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ ನಂತರ ಮಧ್ಯಾಹ್ನ 3 ಗಂಟೆಗೆ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಆಗ ಹೆಚ್ಚಿನ ತನಿಖೆಗೆ ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಎಸ್ಐಟಿ ಪರ ಸರ್ಕಾರಿ ಅಭಿಯೋಜಕರು ಮನವಿ ಮಾಡಿದರು. ಆದರೆ ಇದಕ್ಕೆ ಪ್ರಜ್ವಲ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, ಆರು ದಿನಗಳು ಎಸ್ಐಟಿ ವಶಕ್ಕೆ ಪ್ರಜ್ವಲ್ ಅವರನ್ನು ನೀಡಿತು. ಈ ಆದೇಶ ಬಳಿಕ ಎಸ್ಐಟಿ ಕ್ಯಾಂಪ್ಗೆ ಕರೆತಂದು ಪ್ರಜ್ವಲ್ ಅವರ ವಿಚಾರಣೆ ಮುಂದುವರೆಸಿದೆ.