ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಮೈಸೂರಿನ ಪ್ರಲಕ್ಷ ಚಾರಿಟಬಲ್ ಟ್ರಸ್ಟ್, ಚಾಮರಾಜನಗರ ಲೋಕಸಭಾ ಕ್ಷೇತ್ರದ ಡಾ.ಎನ್.ಎಸ್. ಮೋಹನ್ ಸ್ನೇಹ ಬಳಗ, ರಾಜ್ಯ ರೈತ ಕಿಸಾನ್ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬೆನ್ನುಹುರಿ ಮತ್ತು ಕೀಲುಮೂಳೆ ಶಸ್ತ್ರಚಿಕಿತ್ಸಾ ತಜ್ಞ ಹಾಗೂ ಪ್ರಲಕ್ಷ ಆಸ್ಪತ್ರೆಗಳ ಸಂಸ್ಥಾಪಕ ನಿರ್ದೇಶಕ ಡಾ.ಎನ್.ಎಸ್. ಮೋಹನ್ ಅವರು ರಚಿಸಿರುವ ರೈತರೇ ಆರೋಗ್ಯವಂತರಾಗಿ ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.ರಾಜ್ಯ ರೈತ ಕಿಸಾನ್ ಸಂಘದ ಪ್ರಾಂತ್ಯ ಅಧ್ಯಕ್ಷ ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಸಾಯನಿಕ ಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುತ್ತಾ ಇಂದು ಮನುಷ್ಯನ ಆಯಸ್ಸು ಕಡಿಮೆಯಾಗುತ್ತಾ ಸಾಗಿದೆ, ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರಗಳು ಮಾಡಬೇಕಿದೆ. ರೈತನು ಬೆಳೆದ ಸಾವಯವ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಆರ್.ಎಸ್.ಎಸ್. ಮುಖಂಡ ಮ. ವೆಂಕರಾಮ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ರೈತರೇ ಆರೋಗ್ಯವಂತರಾಗಿ ಎಂಬ ಪುಸ್ತಕವನ್ನು ಅಧ್ಯಯನ ಮಾಡಿದಾಗ ರೈತರ ಹಲವಾರು ಸಮಸ್ಯೆಗಳು ಬೆಳಕಿಗೆ ಬರುತ್ತವೆ, ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದಾಗಿಯೂ ಸಹ ಈ ಪುಸ್ತಕದಲ್ಲಿ ಲೇಖಕರು ಬೆಳಕು ಚೆಲ್ಲಿದ್ದಾರೆ ಎಂದು ತಿಳಿಸಿದರು.ಲೇಖಕ ಡಾ.ಎನ್.ಎಸ್. ಮೋಹನ್ ಮಾತನಾಡಿ, ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ 700 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ಮೈಸೂರು ಭಾಗದಲ್ಲಿ ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಅಲ್ಲದೇ ಜಮೀನಿನಲ್ಲಿ ಕೆಲಸ ಕಾರ್ಯ ಮಾಡುವ ವೇಳೆ ರೈತರಿಗೆ ಹಾವು ಕಡಿತಕ್ಕೊಳಗಾದಾಗ ಮೊದಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ ಎಂದರು.
ಒಂದು ಲಕ್ಷ ಹೆರಿಗೆ ಆದಾಗ 100ಕ್ಕೂ ಹೆಚ್ಚು ಮಹಿಳೆಯರು ಮೃತಪಡುತ್ತಿದ್ದು, ಆ ಪ್ರಮಾಣವನ್ನು 50ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಅದರ ಬಗ್ಗೆಯೂ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ ಎಂದರು.ಸಂಸದ ವಿ. ಶ್ರೀನಿವಾಸಪ್ರಸಾದ್ ಮಾತನಾಡಿ, ಎಚ್.ಡಿ. ಕೋಟೆ ತಾಲೂಕು ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. ಈಗ ಚಾಮರಾಜನಗರಕ್ಕೆ ಸೇರ್ಪಡೆಗೊಂಡಿದ್ದು, ತಮ್ಮ ಅನುದಾನವನ್ನು ಹಲವು ಜನಾಂಗದ ಅಭಿವೃದ್ಧಿಗೆ ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ ನೀಡಲಾಗಿದೆ ಎಂದರು.
ಇಂದಿನ ಸರ್ಕಾರಗಳು ಕಾಡೊಳಗೆ ಕಾಡಿನ ರಕ್ಷಣೆ ಮಾಡಿದಂತಹ ಆದಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಕಾಡನ್ನು ನಾಶಪಡಿಸಿದ ನಾಡಿನ ಮಂದಿಗೆ ರೆಸಾರ್ಟ್ ನಿರ್ಮಿಸಲು ಅವಕಾಶ ಕಲ್ಪಿಸಿ ಕೊಡುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.ಬಿಡಗಲಿನ ಪಡವಲು ವಿರಕ್ತ ಮಠದ ಮಹದೇವ ಸ್ವಾಮೀಜಿ, ಕೆ.ಎಲ್. ಲೋಕೇಶ್, ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ಪದ್ಮಶ್ರೀ ಪುರಸ್ಕೃತ ಸೋಮಣ್ಣ, ಸರಗೂರು ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಮುಖಂಡರಾದ ಹಂಚೀಪುರ ಗುರುಸ್ವಾಮಿ, ಶಿವಪ್ಪಾಜಿ, ಡಾ. ಗಣೇಶ್, ಬಿಜೆಪಿ ಅಧ್ಯಕ್ಷ ಶಂಭೇಗೌಡ, ಕೆ.ಪಿ. ಗುರುಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ್, ರಾಜು, ವಿನಯ್, ಜೆ.ಪಿ. ಚಂದ್ರಶೇಖರ್, ಜೆಡಿಎಸ್ ಅಧ್ಯಕ್ಷ ರಾಜೇಂದ್ರ, ಶಿವಣ್ಣ, ಗೋಪಾಲಸ್ವಾಮಿ, ರಂಗಪ್ಪ, ಮನುಗನಹಳ್ಳಿ ಮಂಜುನಾಥ್, ಸೋಮಾಚಾರ್, ಜಯಂತ್, ಶ್ರೀಕಾಂತ್, ಸಂತೋಷ್ ಇದ್ದರು.