ಭಾರತೀಯ ಕಲೆ, ಸಂಸ್ಕೃತಿ ಉಳಿವಿಗೆ ಪ್ರತಿಭಾ ಕಾರಂಜಿ ಸಹಕಾರಿ: ಶಾಸಕ

| Published : Oct 30 2024, 12:41 AM IST / Updated: Oct 30 2024, 12:42 AM IST

ಸಾರಾಂಶ

ಪ್ರತಿಭಾ ಕಾರಂಜಿಯಿಂದ ಆಟ, ಪಾಠದ ಜೊತೆಗೆ ನಮ್ಮ ಭಾರತೀಯ ಕಲೆ ಮತ್ತು ಸಂಸ್ಕೃತಿ ಉಳಿಸುವುದು, ಬೆಳೆಸಬಹುದಾಗಿದೆ.

ತಾಲೂಕು ಮಟ್ಟದ ಪ್ರಾಥಮಿಕ-ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ, ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪ್ರತಿಭಾ ಕಾರಂಜಿಯಿಂದ ಆಟ, ಪಾಠದ ಜೊತೆಗೆ ನಮ್ಮ ಭಾರತೀಯ ಕಲೆ ಮತ್ತು ಸಂಸ್ಕೃತಿ ಉಳಿಸುವುದು, ಬೆಳೆಸಬಹುದಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ಪಿಸಿಎಚ್ ಕಲ್ಯಾಣ ಮಂಟಪದಲ್ಲಿ ನಡೆದ 2024-25ನೇ ಲಿನ ಕುಷ್ಟಗಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಾಲಕರು ಹಾಗೂ ಪೋಷಕರು ಮಕ್ಕಳನ್ನು ಓದುವುದಕ್ಕೆ ಮಾತ್ರ ಸೀಮಿತಗೊಳಿಸದೆ ಶಾಲೆಯಲ್ಲಿ ನಡೆಯುವ ಇಂತಹ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಜಗತ್ತಿಗೆ ತೋರಿಸುವಂತಹ ಉತ್ತಮವಾದ ಕಾರ್ಯ ಮಾಡಬೇಕು ಎಂದರು.

ಬಿಇಒ ಸುರೇಂದ್ರ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ. ಇಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳನ್ನು ಜಿಲ್ಲಾ ಮಟ್ಟಕ್ಕೆ ಕಳಿಸಲಾಗುತ್ತದೆ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಾವು ಶ್ರಮ ವಹಿಸುತ್ತಿದ್ದೇವೆ. ಮಕ್ಕಳ ಪ್ರತಿಭೆಗಳನ್ನು ಹೊರ ತರಲು ಶಿಕ್ಷಕರ ಜೊತೆಗೆ ಪಾಲಕರು ಸಹ ಕೈ ಜೋಡಿಸಬೇಕು ಎಂದರು.

ಪುರಸಭೆಯ ಸದಸ್ಯ ವಸಂತಪ್ಪ ಮೇಲಿನಮನಿ ಮಾತನಾಡಿ, ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಣ ಹಾಗೂ ಕ್ರೀಡೆ, ಕಲೆ ಇದೆ. ಆದರೆ ಮುಂದಿನ ದಿನಗಳಲ್ಲಿ ಇದರ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತಹ ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದ್ದು, ಸರ್ಕಾರ ಆರೋಗ್ಯದ ಬಗ್ಗೆ ಶಿಕ್ಷಣ ಜಾರಿಗೆ ತರಬೇಕು ಎಂದರು.

ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ, ಪ್ರಮುಖ ಮಲ್ಲಪ್ಪ ಕುದರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಜಗದೀಶ ಮೇಣೆದಾಳ, ನೀಲನಗೌಡ ಹೊಸಗೌಡ್ರ, ಜಗದೀಶ ಸೂಡಿ, ನಿಂಗಪ್ಪ ಗುನ್ನಾಳ, ಎಸ್.ಜಿ. ಕಡೆಮನಿ, ಸುವರ್ಣ, ಶರಣಪ್ಪ ವಡ್ಡರ, ಸೋಮಲಿಂಗಪ್ಪ ಗುರಿಕಾರ, ಸಿದ್ರಾಮಪ್ಪ ಅಮರಾವತಿ, ಹನೀಫ ಬಿಳೇಕುದರಿ, ಶ್ರೀಧರ ದೇಸಾಯಿ, ಅಯ್ಯಪ್ಪ ಸುರುಳ, ಸೋಮನಗೌಡ ಪಾಟೀಲ, ಶಿವಶಂಕರ, ಸೇರಿದಂತೆ ತಾಲೂಕಿನ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಪ್ರಾರ್ಥನೆಯನ್ನು ದೈಹಿಕ ಪರಿವಿಕ್ಷಕಿ ಎಂ. ಸರಸ್ವತಿ ನಡೆಸಿಕೊಟ್ಟರು. ನಾಡಗೀತೆ ಹಾಗೂ ರೈತಗೀತೆ ಸಯ್ಯದ್ ಖಾದ್ರಿ ಹಾಗೂ ಸಂಗಡಿಗರು ನಡೆಸಿಕೊಟ್ಟರು. ಕಾರ್ಯಕ್ರಮದ ನಂತರ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮಗಳು ನಡೆದವು.