ಸಾರಾಂಶ
ತಮ್ಮ ಜಮೀನಿನ ಮಣ್ಣಿನ ಗುಣ, ನೀರಿನ ಲಭ್ಯತೆಯ ಅನುಸಾರವಾಗಿ ಸೂಕ್ತ ತಳಿಯ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು
ಕುಕನೂರು: ಬಿತ್ತನೆ ಪೂರ್ವದಲ್ಲಿ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು ಎಂದು ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಜ್ಯೋತಿ ಹೇಳಿದರು.
ತಾಲೂಕಿನ ಮುತ್ತಾಳ, ಶಿರೂರು, ಬೆದವಟ್ಟಿ ಗ್ರಾಮಗಳಲ್ಲಿ ಮುಂಗಾರು ಬಿತ್ತನೆಗೆ ಬೀಜಗಳ ಆಯ್ಕೆ ಮತ್ತು ಬಿತ್ತನೆಗೆ ಮುನ್ನ ಕೈಗೊಳ್ಳಬೇಕಾದ ಬೀಜೋಪಚಾರದ ಕುರಿತು ಮಾಹಿತಿ ನೀಡಿದ ಅವರು, ಮುಂಗಾರು ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದಂತೆ ಬೀಜಗಳ ಆಯ್ಕೆಯಲ್ಲಿ ಗಮನಹರಿಸಬೇಕು. ತಮ್ಮ ಜಮೀನಿನ ಮಣ್ಣಿನ ಗುಣ, ನೀರಿನ ಲಭ್ಯತೆಯ ಅನುಸಾರವಾಗಿ ಸೂಕ್ತ ತಳಿಯ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬಿತ್ತನೆಗೂ ಮುಂಚೆ ಬೀಜಗಳನ್ನು ಸದೃಢವಾಗಿರಿಸಲು ಹಾಗೂ ಬಿತ್ತನೆಯ ನಂತರ ಬರಬಹುದಾದ ರೋಗ ತಡೆಯುವ ನಿಟ್ಟಿನಲ್ಲಿ ಜೈವಿಕ ಗೊಬ್ಬರ ಬಳಸಬೇಕು. ಅಲ್ಲದೆ ರೈತರು ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು ಎಂದರು.ಕೃಷಿ ಅಧಿಕಾರಿ ನಿಂಗಪ್ಪ ಹಿರೇಹಾಳ, ವಿಜ್ಞಾನಿ ಕವಿತಾ ಉಳ್ಳಿಕಾಶಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಚನ್ನಬಸವನಗೌಡ, ಗವಿಸಿದ್ದಪ್ಪ ವಾಲಿ, ರೈತರಾದ ಶೇಖರಡ್ಡಿ ಮಾದಿನೂರು, ವೀರಣ್ಣ, ರಾಮಣ್ಣ ಹಂಚಿನಾಳ, ಮಹೇಶ ಚಿಲಕಮುಖಿ, ದತ್ತನಗೌಡ, ಕೆಂಚರೆಡ್ಡಿ ಸೇರಿದಂತೆ ಇತರರಿದ್ದರು.