ಸಾರಾಂಶ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.೧೫ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮ ಸಂಬಂಧ ಶನಿವಾರ ಪೂರ್ವ ತಾಲೀಮು ನಡೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.೧೫ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮ ಸಂಬಂಧ ಶನಿವಾರ ಪೂರ್ವ ತಾಲೀಮು ನಡೆಯಿತು. ಮೊದಲಿಗೆ ಜಿಲ್ಲಾಡಳಿತ ಭವನದ ಮುಂಭಾಗ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಮೋನಾ ರೋತ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಸಮ್ಮುಖದಲ್ಲಿ ಮಾನವ ಸರಪಳಿ ರಚನೆ ಸಂಬಂಧ ನಿಯೋಜನೆಗೊಂಡಿರುವ ನೋಡೆಲ್ ಅಧಿಕಾರಿಗಳು ಪೂರ್ವಾಭ್ಯಾಸ ನಡೆಸಿದರು. ಮಾನವ ಸರಪಳಿ ನಿರ್ಮಾಣ ಕಾರ್ಯದ ಉಸ್ತುವಾರಿ ವಹಿಸಿರುವ ವಿವಿಧ ಹಂತದ ಅಧಿಕಾರಿಗಳು ತಮಗೆ ವಹಿಸಲಾದ ಕಾರ್ಯಕ್ಷೇತ್ರದಲ್ಲಿ ನಿರ್ವಹಿಸಬೇಕಿರುವ ಜವಾಬ್ದಾರಿಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸರತಿ ಸಾಲಿನಲ್ಲಿ ನಿಲ್ಲುವ ಬಗ್ಗೆ, ಡ್ರೋನ್, ವಿಡಿಯೋ ಚಿತ್ರೀಕರಣ, ಇನ್ನಿತರ ಬಗ್ಗೆ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಮಾರ್ಗದರ್ಶನ ಮಾಡಿದರು. ಬಳಿಕ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ಮಾನವ ಸರಪಳಿ ನಿರ್ವಹಣೆ ಸಂಬಂಧ ನಿಗದಿಯಾಗಿರುವ ಸ್ಥಳಗಳಿಗೆ ತೆರಳಿ ಅಲ್ಲಿಯೂ ಪೂರ್ವಾಭ್ಯಾಸ ನಡೆಸಿದರು. ಡಿಸಿ, ಎಡಿಸಿ ಮಾನವ ಸರಪಳಿ ಪ್ರಾರಂಭವಾಗುವ ಚಾಮರಾಜನಗರ ಜಿಲ್ಲೆಯ ಸರಹದ್ದಿನ ಮೂಗೂರು ಕ್ರಾಸ್ ವರೆಗೂ ತೆರಳಿ ಮಾನವ ಸರಪಳಿ ತಾಲೀಮು ವೀಕ್ಷಿಸಿದರು. ಮಾನವ ಸರಪಳಿ ಆರಂಭದ ಸ್ಥಳ ಹಾಗೂ ಸಮಾರೋಪ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.