ಸಾರಾಂಶ
ಸಲಹೆ । ಪೊಲೀಸ್ ಸಿಬ್ಬಂದಿಗೆ ನಡೆದ ಡೆಂಘೀ ಜಾಗೃತಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಚಾಮರಾಜನಗರಡೆಂಘೀ ನಿಯಂತ್ರಣಕ್ಕೆ ಸೂಕ್ತ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ರೋಗ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಸಲಹೆ ನೀಡಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ವಸತಿ ಗೃಹದ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಆಯೋಜಿಸಲಾಗಿದ್ದ ಡೆಂಘೀ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಡೆಂಘೀ ಜ್ವರವು ವೈರಾಣುವಿನಿಂದ ಉಂಟಾಗುವ ಒಂದು ರೋಗವಾಗಿದ್ದು, ಸೋಂಕಿತ ಈಡೀಸ್ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇದು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಯಾಗಿದೆ. ಸೊಳ್ಳೆಗಳಲ್ಲಿ ಮುಖ್ಯವಾಗಿ 3 ಜಾತಿಯ ಸೊಳ್ಳೆಗಳು ಮನುಷ್ಯನಿಗೆ ರೋಗವನ್ನು ತರುತ್ತವೆ. ಅನಾಫಿಲಿಸ್ ಹೆಣ್ಣು ಸೊಳ್ಳೆ ಮಲೇರಿಯಾ, ಈಡೀಸ್, ಡೆಂಘೀ ಮತ್ತು ಚಿಕೂನ್ ಗುನ್ಯಾ ಹಾಗೂ ಕ್ಯೂಲೆಕ್ಸ್ ಸೊಳ್ಳೆ ಫೈಲೇರಿಯಾ ಮತ್ತು ಮೆದುಳು ಜ್ವರವನ್ನು ಒಬ್ಬರಿದ್ದ ಮತ್ತೊಬ್ಬರಿಗೆ ಕಚ್ಚುವಿಕೆ ಮುಖಾಂತರ ಹರಡುತ್ತದೆ ಎಂದು ತಿಳಿಸಿದರು.
ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಇದರಲ್ಲಿ 4 ಹಂತಗಳಿದ್ದು, ಮೊಟ್ಟೆ, ಲಾರ್ವಾ, ಪೂಪ, ವಯಸ್ಕ ಸೊಳ್ಳೆಯಾಗಿ ರೂಪಾಂತರ ಹೊಂದಿ ಸೋಂಕಿತ ವ್ಯಕ್ತಿಯನ್ನು ಕಚ್ಚಿದ ನಂತರ ಆರೋಗ್ಯವಂತರನ್ನು ಕಚ್ಚಿ ರೋಗ ಉಂಟುಮಾಡುತ್ತದೆ. ಆದ್ದರಿಂದ ಸೊಳ್ಳೆಗಳ ವಂಶಾಭಿವೃದ್ಧಿ ತಡೆಗಟ್ಟಲು ಲಾರ್ವಾ ಹಂತದಲ್ಲಿ ಇದನ್ನು ನಾಶ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಡೆಂಘೀ ಜ್ವರವು 3 ಹಂತದಲ್ಲಿ ಇರುತ್ತದೆ. ಡೆಂಘೀ ರಕ್ತ ಸ್ರಾವ, ಡೆಂಘೀ ಶಾಕ್ ಸಿಂಡ್ರೋಮ್ ಎಂದು ವರ್ಗೀಕರಿಸಲಾಗುವುದು. ಇದಕ್ಕೆ ನಿರ್ಧಿಷ್ಟ ಚಿಕಿತ್ಸೆ ಇರುವುದಿಲ್ಲ. ರೋಗ ಲಕ್ಷಣಗಳಿಗನುಸಾರವಾಗಿ ಚಿಕಿತ್ಸೆ ನೀಡಿ ನಿಯಂತ್ರಣಕ್ಕೆ ತರಲಾಗುವುದು. ಆದ್ದರಿಂದ ಸೂಕ್ತ ಮುಂಜಾಗ್ರತಾ ಕ್ರಮ ಅನುಸರಿಸಿ ಡೆಂಘೀ ನಿಯಂತ್ರಣಕ್ಕೆ ಸಹಕಾರ ನೀಡಬೇಕೆಂದು ಕರೆ ನೀಡಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜೇಶ್ ಕುಮಾರ್ ಮಾತನಾಡಿ, ವಾರಕ್ಕೆ ಒಂದು ಬಾರಿ ಮನೆಗಳ ಸುತ್ತ ಸ್ವಚ್ಛತೆ ಮಾಡಿಕೊಳ್ಳಬೇಕು. ಟೆರೇಸ್ನಲ್ಲಿ ಶೇಖರಿಸಿರುವ ಹಳೆಯ ಟೈರು, ಒಡೆದ ಬಕೆಟ್, ಬಿಂದಿಗೆ, ರೆಫ್ರಿಜಿರೇಟರ್ ಹಿಂಭಾಗದಲ್ಲಿ ಶೇಖರಣೆಯಾಗಿರುವ ನೀರು, ಹೂ ಕುಂಡಗಳ ತಟ್ಟೆಗಳಲ್ಲಿ ನಿಂತಿರುವ ನೀರನ್ನು ವಾರಕೊಮ್ಮೆ ಹಾಗೂ ಮನೆಯಲ್ಲಿನ ಸಿಮೆಂಟ್ ತೊಟ್ಟಿಗಳಲ್ಲಿರುವ ನೀರನ್ನು ಖಾಲಿ ಮಾಡಿ ಒಣಗಿಸಿ ಬಳಿಕ ನೀರು ಶೇಖರಿಸಬೇಕು. ಸೊಳ್ಳೆ ಪರದೆ, ಕಿಟಕಿ ಬಾಗಿಲುಗಳಿಗೆ ಜಾಲರಿ ಅಳವಡಿಸಿಕೊಳ್ಳಬೇಕು. ಮೈ ತುಂಬಾ ಬಟ್ಟೆ ಧರಿಸುವಿಕೆ. ಸೊಳ್ಳೆ ನಿರೋಧಕ ಆಯಿಲ್ಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು. ಸಶಸ್ತ್ರ ಮೀಸಲು ಪಡೆಯ ಆರಕ್ಷಕ ನಿರೀಕ್ಷಕ ಎಸ್.ಬಿ.ರಂಗಸ್ವಾಮಿ ಮಾತನಾಡಿ, ಸೊಳ್ಳೆಗಳ ಕಚ್ಚುವಿಕೆಯಿಂದ ಪಾರಾಗಲು ವಸತಿ ಗೃಹವನ್ನು ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಡೆಂಘೀ ನಿಯಂತ್ರಣ ಆರೋಗ್ಯ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ, ನಮ್ಮೆಲ್ಲರ ಹೊಣೆಗಾರಿಕೆಯೂ ಆಗಿದೆ ಎಂದರು.
ಸಶಸ್ತ್ರ ಮೀಸಲು ಪಡೆಯ ಉಪ ಆರಕ್ಷಕ ನಿರೀಕ್ಷಕ ಲಿಂಗರಾಜು, ಸಮೀತ್, ಸಹಾಯಕ ಉಪ ನಿರೀಕ್ಷಕ ಮಲ್ಲಪ್ಪ, ಪ್ರಶಾಂತ್, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಿಯಾ ದಿಶಾನಿ ರೇ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾರಾಯಣಸ್ವಾಮಿ, ಹರ್ಷಾಂಜಲಿ ಇತರರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.