ಶಾಂತಿಯುತ ಹೋಳಿ ಆಚರಣೆಗೆ ಆದ್ಯತೆ ನೀಡಿ

| Published : Mar 22 2024, 01:06 AM IST

ಸಾರಾಂಶ

ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಇರುವುದರಿಂದ ಹಲಗೆಯನ್ನು ರಾತ್ರಿ 10ರ ನಂತರ ಬಾರಿಸಬಾರದು, ಮೆರವಣಿಗೆ ಕಾಲಕ್ಕೆ ದುರ್ನಡತೆ ತೋರುವವರು, ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡುವವರು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲಾಗುವುದು

ಗದಗ: ಗದಗ ಶಹರ ವ್ಯಾಪ್ತಿಯಲ್ಲಿಯೇ 25 ಸ್ಥಳಗಳಲ್ಲಿ ಕಾಮರತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಿದ್ದು, ಪ್ರತಿಯೊಬ್ಬರೂ ಶಾಂತಿಯುತ ಹೋಳಿ ಆಚರಣೆಗೆ ಆದ್ಯತೆ ನೀಡಬೇಕು ಮತ್ತು ಚುನಾವಣಾಧಿಕಾರಿಗಳು ಸೇರಿದಂತೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಎಲ್ಲ ಅನುಮತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಗದಗ ಶಹರ ಸಿಪಿಐ ಡಿ.ಬಿ.ಪಾಟೀಲ ಹೇಳಿದರು.

ಅವರು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ನಿಮಿತ್ತ ಏರ್ಪಡಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರೂ ಕಾಮರತಿ ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಸಿಸಿ ಕ್ಯಾಮೇರಾ ಅಳವಡಿಸಿಕೊಳ್ಳಬೇಕು. ಕಾಮರತಿ ಪ್ರತಿಷ್ಟಾಪನೆ ಮಾಡಿದ ಸ್ಥಳದಲ್ಲಿ ದಿನದ 24/7 ಗಂಟೆ ಕಾಲ ಸ್ವಯಂ ಸೇವಕರು ಇರಬೇಕು. ರಸ್ತೆ ಮೇಲೆ ನಿಂತು ಸಾರ್ವಜನಿಕರಿಂದ ಹಣ ವಸೂಲಿ ಮಾಡಬಾರದು. ರಸ್ತೆ ಮೇಲೆ ಕಾಮರತಿ ಮೂರ್ತಿ ದಹನ ಮಾಡಬಾರದು, ಒತ್ತಾಯ ಪೂರ್ವಕವಾಗಿ ಯಾರಿಗೂ ಕೂಡಾ ಬಣ್ಣ ಎರಚಬಾರದು. ಹಬ್ಬದ ಆಚರಣೆ ಕಾಲಕ್ಕೆ ಬೈಕನಲ್ಲಿ ಪೆಟ್ರೋಲ್‌ , ಬೆಲೆ ಬಾಳುವ ಕಟ್ಟಿಗೆ ಸಾಮಾನುಗಳನ್ನು ಹಬ್ಬದ ನೆಪದಲ್ಲಿ ಕಳುವು ಮಾಡಬಾರದು. ಸದರ ಹಬ್ಬವನ್ನು ಹಿಂದೂ ಮುಸ್ಲಿಂ ಜನರು ಕೂಡಿಕೊಂಡು ಶಾಂತ ರೀತಿಯಿಂದ ಆಚರಣೆ ಮಾಡಬೇಕು ಎಂದರು.

ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಇರುವುದರಿಂದ ಹಲಗೆಯನ್ನು ರಾತ್ರಿ 10ರ ನಂತರ ಬಾರಿಸಬಾರದು, ಮೆರವಣಿಗೆ ಕಾಲಕ್ಕೆ ದುರ್ನಡತೆ ತೋರುವವರು, ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡುವವರು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲಾಗುವುದು. ರಂಗಪಂಚಮಿ ದಿನದಂದು ಮೆರವಣಿಗೆಯನ್ನು ಆದಷ್ಟು ಬೇಗನೆ ಪ್ರಾರಂಭ ಮಾಡಿ ಬೇಗನೆ ಮುಕ್ತಾಯ ಮಾಡಬೇಕು. ಮೆರವಣಿಗೆ ಮಾರ್ಗದಲ್ಲಿ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಬೇಕು. ಅಲ್ಲದೇ ಮೆರವಣಿಗೆಯು ಮಂದಿರ, ಚರ್ಚ, ಮಸೀದಿಗಳ ಮುಂದೆ ಹಾಯ್ದು ಹೋಗುವಾಗ ಅನ್ಯ ಕೋಮಿನ ಜನರ ಭಾವನೆಗಳಿಗೆ ಧಕ್ಕೆ ಬಾರದಂತೆ ಘೋಷಣೆ ಹಾಗೂ ಹಾಡು ಹಾಡಬಾರದು. ಹಬ್ಬ ಆಚರಣೆ ಕಾಲಕ್ಕೆ ಶಾಂತಿ ಸುವ್ಯವಸ್ಥೆ ಹಾಳು ಮಾಡುವವರು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದರು.

ಗದಗ ಶಹರ ಪಿಎಸ್ಐ ಎಚ್.ಕೆ. ಪಾಟೀಲ, ಆನಂದ ಬದಿ, ಅಬಕಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟ್‌ ರ್‌ ಆಶಾರಾಣಿ ಗುಡದಾರ, ರಾಮಣ್ಣ ಫಲದೊಡ್ಡಿ, ಎಸ್.ಎನ್.ಬಳ್ಳಾರಿ, ಅಕ್ಬರಸಾಬ ಬಬರ್ಚಿ, ಅಜ್ಜಣ್ಣ ಮಲ್ಲಾಡದ್, ಫಕ್ಕಿರಪ್ಪ ಹೇಬಸೂರ, ಸುಧೀರ ಕಾಟಗೇರ, ವಿಜಯ ಕಲ್ಮನಿ, ರಾಘವೇಂದ್ರ ಪರಾಪೂರ, ಗಣೇಶ ಹುಬ್ಬಳ್ಳಿ, ಬಸಣ್ಣ ಪಡಗದ, ಹುಡಚಪ್ಪ ಹಳ್ಳಿಕೆರಿ, ಅಪ್ಪುರಾಜ ಹಾಗೂ ಕಾಮ ರತಿ-ಪ್ರತಿಷ್ಪಾನೆ ಮಂಡಳಿಯ ಪದಾಧಿಕಾರಿಗಳು ನಗರದ ಪ್ರಮುಖರು ಭಾಗವಹಿಸಿದ್ದರು.

ಹನುಮಂತ ಯಡಿಯಾಪೂರ ವಂದಿಸಿದರು. ವಿ.ಎಸ್. ಭೀಕ್ಷಾವತಿಮಠ, ಎನ್.ಜಿ. ಭರಮಗೌಡರ, ಎ.ಆರ್. ಕವಲೂರ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.