ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಜ. 6ರಂದು ಕೊಪ್ಪಳ ಬಂದ್ ಕರೆ ಹಿನ್ನೆಲೆ ನಗರದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ, ಅಹಿಂಸಾತ್ಮಕ ರೀತಿಯಲ್ಲೇ ನಮ್ಮ ವಿಚಾರಗಳನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡಲು ಖಂಡಿತ ಸಾಧ್ಯವಿದೆ. ಅಂದು 11 ಗಂಟೆ ಒಳಗಾಗಿ ಎಲ್ಲರೂ ಸೇರಿ ಪ್ರತಿಭಟನೆ ಪ್ರಾರಂಭಿಸೋಣ, ತಾವು ಯಾವ ರೀತಿಯಿಂದ ಈ ಹೋರಾಟಕ್ಕೆ ಪ್ರತಿಸ್ಪಂದನೆ ಕೊಡ್ತಾ ಇದ್ದೀರಿ, ಮುಂದೆ ನಡೆಯಲಿರತಕ್ಕಂತಹ ಅಣುಸ್ಥಾವರದ ವಿರುದ್ಧ, ಎಂಎಸ್ಪಿಎಲ್ ವಿಸ್ತರಣೆ ವಿರುದ್ಧವೂ ಇದೇ ಬಗೆಯ ಪ್ರತಿಸ್ಪಂದನೆ ಕೊಡಬೇಕು ಎಂದು ಕೋರಿದರು.
ಮುಖಂಡ ಹನುಮೇಶ್ ಕಡೆಮನಿ ಮಾತನಾಡಿ, ಆಟೋದವರು, ವರ್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿಕೊಂಡು ಸ್ವಯಂ ಪ್ರೇರಣೆಯಿಂದ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ನಗರದ ತಾಲೂಕಾ ಕ್ರೀಡಾಂಗಣದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಗೊಂಡು ತಾಪಂ ಹತ್ತಿರದಿಂದ ಸಾಲಾರ್ ಜಂಗ್ ರಸ್ತೆಯಿಂದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ತೆರಳಿ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಶಾರದಾ ಟಾಕೀಸ್ ತಿರುವಿನಿಂದ ಗಡಿಯಾರ ಕಂಬ ಬಳಸಿಕೊಂಡು ಜವಾಹರ ರಸ್ತೆ ಮೂಲಕ ಅಶೋಕ ವೃತ್ತಕ್ಕೆ ತಲುಪಿ ಸಭೆ ನಡೆಸಲಾಗುವುದು ಎಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಮಾತನಾಡಿ, ನಮ್ಮ ವಕೀಲರ ಸಂಘದಿಂದ ಯಾವುದೇ ಜನಪರ ಚಳವಳಿಗಳಿರಲಿ ಅದರಲ್ಲಿ ನಾವು ಭಾಗವಹಿಸುತ್ತೇವೆ. ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ನಡೆಯುವ ಪ್ರತಿಭಟನೆಗೆ ಬೆಂಬಲಿಸುತ್ತೇವೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿದರು.ಸಭೆಯಲ್ಲಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ ಶೀಲವಂತರ, ರಾಮಣ್ಣ ಚೌಡಕಿ, ಚನ್ನಬಸಪ್ಪ, ಪರಶುರಾಮ್ ಕೆರೆಹಳ್ಳಿ, ಗವಿಸಿದ್ದಪ್ಪ ಬೆಲ್ಲದ್, ಸಿದ್ದರಾಮ್ ಹೊಸಮನಿ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ಗಾಳೆಪ್ಪ ಮುಂಗೊಲಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ತುಕಾರಾಮ್ ಬಿ. ಪಾತ್ರೋಟಿ, ಕೆ.ಬಿ. ಗೋನಾಳ, ಟಿ.ರತ್ನಾಕರ್, ನಿಂಗಪ್ಪ ಜಿ.ಎಸ್.ಬೆಣಕಲ್ಲ, ಸಾವಿತ್ರಿ ಮುಜಂದಾರ್, ಹೊಸಳ್ಳಿ ಗ್ರಾಪಂ ಸದಸ್ಯ ಮೊಹಮ್ಮದ್ ಅಜೀಮ್, ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಸಂಜಯ್ ದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿ ಮಠ, ಶರಣಪ್ಪ ಓಜನಹಳ್ಳಿ, ಬಾಷು ಸಾಬ್ ಖತೀಬ್ ,ಮಾನವಿ ಪಾಷಾ, ಶಿವಪ್ಪ ಹಡಪದ್, ಮುದುಕಪ್ಪ ಹೊಸಮನಿ, ಸೈಯ್ಯದ್ ಹಯಾತ್ ಪೀರ್ ಹುಸೇನಿ (ಶೇರು), ಯಲ್ಲಪ್ಪ ಬಳಗಾನೂರ ಮುಂತಾದವರು ಭಾಗವಹಿಸಿದ್ದರು.