ಸಾರಾಂಶ
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ಭಾರತೀಯ ಸಾಹಿತ್ಯಕ್ಕೆ ಕಥೆ, ಕವನ, ನಾಟಕ, ಕಾದಂಬರಿ, ವಿಮರ್ಶೆ ಸೇರಿದಂತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿಗೈದ ಸಾಹಿತಿ ಪ್ರೇಮಚಂದ ಅವರಿಗೆ ಹಿಂದಿ ಸಾಹಿತ್ಯಕ್ಕೆ ಗೌರವ ತಂದು ಕೊಟ್ಟ ಕೀರ್ತಿ ಸಲ್ಲುತ್ತದೆ ಎಂದು ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರೊ.ಡಿ.ಎಸ್.ಕೊನಂತಲಿ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಂದಿ ಸಾಹಿತ್ಯ ಶ್ರೇಷ್ಠ ಸಾಹಿತಿ ಪ್ರೇಮಚಂದ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಸಾರಸ್ವತ ಲೋಕದಲ್ಲಿ ರಾಷ್ಟ್ರಕವಿ ಕುವೆಂಪು ಇರುವಂತೆ ಹಿಂದಿ ಸಾರಸ್ವತ ಲೋಕದಲ್ಲಿ ಪ್ರೇಮಚಂದ ಅವರಾಗಿದ್ದಾರೆ. ಇಂತಹ ಧೀಮಂತ ಸಾಹಿತಿ ರಚಿಸಿರುವ ಸಾಹಿತ್ಯ ಅಜರಾಮರವಾಗಿದೆ. ಭಾರತೀಯ ಭಾಷಾ ಸಾಹಿತ್ಯದಲ್ಲಿ ಹಿಂದಿ ಮೇಲ್ಮಟ್ಟದಲ್ಲಿ ನಿಲ್ಲುವಂತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿ, ಹಿಂದಿ ಸಾಹಿತ್ಯಕ್ಕೆ ಭದ್ರಬುನಾದಿ ಹಾಕಿದವರಲ್ಲಿ ಮುಂಚೂಣಿಯಲ್ಲಿ ಎದ್ದುಕಾಣುವವರು ಪ್ರೇಮಚಂದರು. ಇವರ ಸಾಹಿತ್ಯ ಸರಳ, ಜನಪರ, ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಪ್ರೇಮಚಂದ ಅವರ ಸಾಹಿತ್ಯ ಓದುವುದರಿಂದ ಎತ್ತರಕ್ಕೆ ಏರುವಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊ.ಎಸ್.ಜೆ.ಸೂರ್ಯವಂಶಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.