ಅಂಬೇಡ್ಕರ್‌ ಪ್ರತಿಮೆ ಅಪಮಾನದ ಹಿಂದೆ ಉದ್ದೇಶ ಪೂರ್ವಕ ಸಂಚು?

| Published : Jan 24 2024, 02:02 AM IST

ಸಾರಾಂಶ

ಕೋಟನೂರ್‌ (ಡಿ) ಗ್ರಾಮದ ಲುಂಬಿಣಿ ಉದ್ಯಾನದಲ್ಲಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಪುತ್ಥಳಿ ಅಪಮಾನ ಪ್ರಕರಣದ ಹಿಂದೆ ದುಷ್ಕರ್ಮಿಗಳಿಂದ ಪಕ್ಕಾ ಸಂಚು ರೂಪಿಸಿರೋ ಗುಮಾನಿ ಕಾಡತೊಗಿದೆ. ಏಕೆಂದರೆ ಲುಂಬಿಣಿ ಗಾರ್ಡನ್‌ ಅಪಮಾನಕ್ಕೊಳಗಾದಂತಹ ಅಂಬೇಡ್ಕರ್‌ ಪುತ್ಥಳಿ ಬಳಿಯೇ ಪುಟ್ಟದಾದ ಕಾಗದ ಚೀಟಿಯೊಂದು ಪತ್ತೆಯಾಗಿ ಕುತೂಹಲ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಹೊರ ವಲಯದಲ್ಲಿರುವ ಕೋಟನೂರ್‌ (ಡಿ) ಗ್ರಾಮದ ಲುಂಬಿಣಿ ಉದ್ಯಾನದಲ್ಲಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಪುತ್ಥಳಿ ಅಪಮಾನ ಪ್ರಕರಣದ ಹಿಂದೆ ದುಷ್ಕರ್ಮಿಗಳಿಂದ ಪಕ್ಕಾ ಸಂಚು ರೂಪಿಸಿರೋ ಗುಮಾನಿ ಕಾಡತೊಗಿದೆ.

ಏಕೆಂದರೆ ಲುಂಬಿಣಿ ಗಾರ್ಡನ್‌ ಅಪಮಾನಕ್ಕೊಳಗಾದಂತಹ ಅಂಬೇಡ್ಕರ್‌ ಪುತ್ಥಳಿ ಬಳಿಯೇ ಪುಟ್ಟದಾದ ಕಾಗದ ಚೀಟಿಯೊಂದು ಪತ್ತೆಯಾಗಿ ಕುತೂಹಲ ಮೂಡಿಸಿದೆ.

ಈ ಕಾಗದದ ಪುಟ್ಟದಾದ ಚೀಟಿ, ಅದರಲ್ಲಿ ಪಾಣೆಗಾಂವ್‌ 3, ನದಿ ಸಿನ್ನೂರಿನ ನಾಲ್ವರು ಯುವಕರ (ಹುಡುಗರ) ಹೆಸರಿದೆ, ಜೊತೆಗೆ ಇವರೇ ಸೂಚಿಸಿದ್ದರಿಂದ ಈ ಕೃತ್ಯ ಮಾಡಿದ್ದೇವೆ. ಇವರು ಹಣ ಕೊಡೋದಾಗಿ ಆಮಿಷ ತೋರಿಸಿದ್ದಾರೆಂಬ ಸಾಲುಗಳು ಕಂಡು ಬಂದಿದ್ದು ಸದ್ಯ ಈ ಕಾಗದದ ಚೀಟಿ ಪೊಲೀಸರ ಗಮನ ಸೆಳೆದಿವೆ.

ಅಪಮಾನದ ಪ್ರಕರಣಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಬಂದಾಗ ಈ ಚೀಟಿ ಅವರ ಗಮನ ಸೆಳೆದಿದೆ. ಮೂಲಗಳ ಪ್ರಕಾರ ಚೀಟಿ ಪೊಲೀಸರ ಕೈ ಸೋರಿದೆ. ಪೊಲೀಸರು ಪ್ರಕರಣದ ತನಖೆ ಎಲ್ಲಾ ನಿಟ್ಟಿನಲ್ಲಿಯೂ ನಡೆಸೋದಾಗಿ ಹೇಳಿದ್ದಾರೆಂದು ಗೊತ್ತಾಗಿದೆ.

ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಕಿಡಿಗೇಡಿಗಳು ಸುಳಿವು ಬಿಟ್ಟು ಕೊಡೋದಿಲ್ಲ, ಆದರಿಲ್ಲಿ ಹೆಸರುಗಳಿರುವ ಚೀಟಿ ದೊರಕಿರೋದರಿಂದ ಇದೊಂದು ಸಂಚು, ಜೊತೆಗೇ ಯಾರನ್ನೋ ಇದರಲ್ಲಿ ಸಿಕ್ಕಿ ಹಾಕಿಸುವ ಮತ್ತೊಂದು ಕಿಡಿಗೇಡಿತನವೂ ಅಡಗಿದೆಯ? ಎಂಬುದನ್ನು ಪೊಲೀಸರು ಪರಿಶೀಲನೆ ಮುಂದಾಗಿದ್ದಾರೆ.

ಲುಂಬಿಣಿ ವನದಲ್ಲಿರುವ ಅಂಬೇಡ್ಕರ್‌ ಪ್ರತಿಮೆ ಅಪಮಾನದ ಪ್ರಕರಣದ ಕೇಸ್‌ ದಾಖಲಾಗಿದ್ದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇಲ್ಲಿ ಕಂಡಿರುವ ಚೀಟಿ, ಇತರೆ ಸಾಕ್ಷಾಧ್ಯಾರಗಳನ್ನೆಲ್ಲ ಅದಾಗಲೇ ಕಲೆ ಹಾಕಿರುವ ಪೊಲೀಸರ ತನಿಖೆಯಿಂದಲೇ ಈ ಪ್ರಕರಣದ ಹಿಂದಡಗಿರುವ ವಿಷಯಗಳು ಹೊರಬರಬೇಕಷ್ಟೆ.