ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಡಿ.23ರಂದು ನಡೆಯಲಿರುವ ನಗರದ ದಿ.ಜಮಖಂಡಿ ಅರ್ಬನ್ ಕೋ-ಆಪ್ ಬ್ಯಾಂಕ್ ಚುನಾವಣೆ ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸಲು ಎಲ್ಲ ಸಿದ್ದತೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ತಹಸೀಲ್ದಾರ್ ಸದಾಶಿವ ಮಕ್ಕೋಜಿ ಹೇಳಿದರು.ನಗರದ ದಿ.ಜಮಖಂಡಿ ಅರ್ಬನ್ ಕೋ-ಆಪ್ ಬ್ಯಾಂಕಿನ ಸಭಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅಕ್ರಮ ತಡೆಯಲು 2 ತಂಡಗಳನ್ನು ರಚಿಸಲಾಗಿದೆ. ಅಕ್ರಮ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕಿನ ಒಟ್ಟು 22464 ಸದಸ್ಯರಲ್ಲಿ 7941 ಅರ್ಹ ಮತದಾರರಾಗಿದ್ದರು. ನ್ಯಾಯಾಲಯದ ಎರಡು ಆದೇಶದನ್ವಯ 1148 ಮತ್ತು 509 ಮತಗಳು ಅರ್ಹತೆ ಪಡೆದಿವೆ ಎಂದು ತಿಳಿಸಿದರು.
ನಗರದ ಪಿಬಿ ಹೈಸ್ಕೂಲ್ನಲ್ಲಿ 26, ಜಿಜಿ ಹೈಸ್ಕೂಲ್ನಲ್ಲಿ 21ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಒಂದು ಮತಗಟ್ಟೆಯಲ್ಲಿ ಸುಗಮ ಮತ ಚಲಾಯಿಸಲು 4 ಟೆಬಲ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಸೂಕ್ತ ಬಂದೋಬಸ್ತ್ಗಾಗಿ ಒಬ್ಬರು ಡಿಎಸ್ಪಿ, ಒಬ್ಬರು ಸಿಪಿಐ, ನಾಲ್ವರು ಪಿಎಸ್ಐ ಸೇರಿದಂತೆ 120 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ 7ರಂತೆ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಮತದಾರರಿಗೆ ಸದಸ್ಯತ್ವದ ಗುರುತಿನ ಚೀಟಿ ಕಡ್ಡಾಯ. ಗುರುತಿನ ಚೀಟಿ ಇರದವರು ಬ್ಯಾಂಕಿನ ಅವಧಿಯಲ್ಲಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು. ಮತದಾನ ಪ್ರತಿಯನ್ನು ಬಸವಭವನದಲ್ಲಿ ನೀಡಲಾಗುವುದು. ಅದನ್ನು ತೆಗೆದುಕೊಂಡು ಮತದಾನಕ್ಕೆ ತೆರಳಬೇಕು. ಅಭ್ಯರ್ಥಿಗಳು ನೀಡುವ ಯಾವುದೇ ಮತದಾರರ ಪ್ರತಿಗೆ ಮಾನ್ಯತೆ ನಿಡಲಾಗುವುದಿಲ್ಲ. ನ್ಯಾಯಾಲಯದ ಆದೇಶದನ್ವಯ ಅರ್ಹ ಮತದಾರರು ಆಧಾರ ಕಾರ್ಡ್ ಕಡ್ಡಾಯವಾಗಿ ತರಬೇಕು ಎಂದರು.ಸಹಾಯಕ ಚುನಾವಣಾಧಿಕಾರಿ ಸಿದ್ದಗಿರಿ ನ್ಯಾಮಗೌಡ ಮಾತನಾಡಿ, ಡಿ.23 ರಂದು ಬೆಳೆಗ್ಗೆ 9 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ನಿಗದಿ ಪಡಿಸಿದ ದಿನಾಂಕದಂದು ಮತಎಣಿಕೆ ಮಾಡಲಾಗುವದು. ಡಿ.21ರ ರಾತ್ರಿ 10ಘಂಟೆಯವರೆಗೆ ಮಾತ್ರ ಬಹಿರಂಗ ಪ್ರಚಾರಕ್ಕೆ ಅವಕಾಶ ನೀಡಲಾಗುವುದು. ಶಾಂತಿಯುತ ಮತದಾನಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಜಿಎಂ ಎಸ್.ಆರ್. ತುಪ್ಪದ, ವ್ಯವಸ್ಥಾಪಕ ಸಂತೋಷ ಹಲ್ಯಾಳ, ಎಸ್.ಕೆ. ಸಾರವಾಡ ಇದ್ದರು.