ಮಂಗಳೂರು ನಗರ ಪೊಲೀಸ್‌ ಸಹಭಾಗಿತ್ವದಲ್ಲಿ ‘ಮೇಕ್‌ ಎ ಚೇಂಜ್‌’ ಫೌಂಡೇಶನ್‌ ವತಿಯಿಂದ ‘ನಶೆ ಮುಕ್ತ ಮಂಗಳೂರು’ ಎಂಬ ಬೃಹತ್‌ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ಡಿ.27ರಂದು ಇದಕ್ಕೆ ಚಾಲನೆ ನೀಡಲಾಗುತ್ತದೆ.

ಮಂಗಳೂರು: ಯುವ ಸಮೂಹವನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್‌ ಸಹಭಾಗಿತ್ವದಲ್ಲಿ ‘ಮೇಕ್‌ ಎ ಚೇಂಜ್‌’ ಫೌಂಡೇಶನ್‌ ವತಿಯಿಂದ ‘ನಶೆ ಮುಕ್ತ ಮಂಗಳೂರು’ ಎಂಬ ಬೃಹತ್‌ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ಡಿ.27ರಂದು ಇದಕ್ಕೆ ಚಾಲನೆ ನೀಡಲಾಗುತ್ತದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಶನ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಸುಹೇಲ್‌ ಕಂದಕ್‌, ಯುವ ಜನರಲ್ಲಿ ಮಾದಕ ದ್ರವ್ಯಗಳ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸೃಜನಾತ್ಮಕ ಸಮಾಜ ಕಟ್ಟುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಡಿ.27ರಂದು ಟಿಎಂಎ ಪೈ ಇಂಟರ್‌ನ್ಯಾಷನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಸ್ಪೀಕರ್‌ ಯು.ಟಿ.ಖಾದರ್‌, ಸಂಸದ ಕ್ಯಾ. ಬ್ರಿಜೇಶ್‌ ಚೌಟ, ದ.ಕ. ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ., ಮಂಗಳೂರು ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ಮೊದಲಾದವರು ಭಾಗವಹಿಸಲಿದ್ದಾರೆ. ಮಂಗಳೂರು ಬಿಷಪ್‌, ರಾಮಕೃಷ್ಣ ಮಠ ಸ್ವಾಮೀಜಿ, ಮಂಗಳೂರು ಖಾಝಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಹಾಗೂ ತುಳುನಾಡಿನ ಖ್ಯಾತ ನಟರು ಅಭಿಯಾನಕ್ಕೆ ಕೈಜೋಡಿಸಲಿದ್ದಾರೆ ಎಂದವರು ಹೇಳಿದರು.ಹಲವು ಸ್ಪರ್ಧೆಗಳು:

ಕ್ರಿಯೇಟಿವ್‌ ಕಂಟೆಂಟ್‌ ಮೂಲಕ ಸಮಾಜಕ್ಕೆ ಇನ್‌ಫ್ಲುಯೆನ್ಸರ್‌ ಆಗಿ ವ್ಯಸನ ಮುಕ್ತತೆಯ ಸಂದೇಶ ನೀಡುವುದು, ಸಂಗೀತ ಮತ್ತು ನೃತ್ಯದ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ರೀತಿಯ ಸ್ಪರ್ಧೆ ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಸುಹೈಲ್‌ ಕಂದಕ್‌ ವಿವರಿಸಿದರು.ಗೋಷ್ಠಿಯಲ್ಲಿ ಎಸಿಪಿ ರವೀಶ್‌ ನಾಯಕ್‌, ಬಾರ್ನ್‌ ಅಗೇನ್‌ ರಿಕವರಿ ಸೆಂಟರ್‌ನ ಸಹ ಸ್ಥಾಪಕಿ ಬೀನಾ ಸಲ್ಡಾನ, ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ಆಲ್ವಿನ್‌ ಡಿಸೋಜ, ವಾಯ್ಸ್‌ ಆಫ್‌ ಸ್ಟೂಡೆಂಟ್ಸ್‌ ಅಧ್ಯಕ್ಷ ಅಭಿಷೇಕ್‌ ವಾಲ್ಮಿಕಿ, ವಿಕಾಸ್‌ ಶೆಟ್ಟಿ ಇದ್ದರು.